'ಶಿವುಗಾಗಿ ಗೀತಾ' ಅಂತ, ಮತ್ತೆ ಬಂದ 'ಗೊಂಬೆಗಳ ಲವ್' ಹುಡುಗ
ನಿರ್ದೇಶಕ ಸಂತೋಷ್ ಅವರು ಆಕ್ಷನ್-ಕಟ್ ಹೇಳಿದ್ದ 'ಗೊಂಬೆಗಳ ಲವ್' ಚಿತ್ರದ ನಂತರ ನಾಯಕ ಅರುಣ್ ಅವರು 'ಶಿವುಗಾಗಿ ಗೀತಾ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.
ಕನ್ನಡದಲ್ಲಿ ಈಗಾಗಲೇ 'ಸಂಜು ವೆಡ್ಸ್ ಗೀತಾ' ಎಂಬ ಚಿತ್ರ ಬಂದುಹೋದ ನಂತರ ಇದೀಗ 'ಶಿವುಗಾಗಿ ಗೀತಾ' ಎಂಬ ಹೊಸ ಪ್ರಾಜೆಕ್ಟ್ ರೆಡಿಯಾಗುತ್ತಿದೆ. ಅಂದಹಾಗೆ ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಕಥೆ ಅಂದುಕೊಳ್ಳಬೇಡಿ, ಬದ್ಲಾಗಿ ಇದು ಶಿವಣ್ಣ ಅವರ ಅಭಿಮಾನಿಗಳಾದ ಶಿವು ಮತ್ತು ಗೀತಾ ಎಂಬುವವರ ಕಥೆಯಂತೆ.
ಈ ಮೊದಲು ಲೂಸ್ ಮಾದ ಯೋಗಿ ಹಾಗೂ ರಾಗಿಣಿ ಅಭಿನಯದ 'ಬಂಗಾರಿ' ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಮಾ.ಚಂದ್ರು 'ಶಿವುಗಾಗಿ ಗೀತಾ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ನಿರ್ಮಾಪಕ ಬಿ.ಎಸ್ ಶ್ರೀಧರ್ ವರ್ತೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಎಸ್.ಪಿ ವರ್ಮಾ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ಬಿ.ಆರ್.ಜಯನ್ ಛಾಯಾಗ್ರಾಹಕರಾಗಿ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.
ಸುಮಾರು 55 ದಿನಗಳ ಕಾಲ ಮಂಗಳೂರು, ಸಕಲೇಶಪುರ ಮುಂತಾದೆಡೆ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ತಿಂಗಳಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.


Click it and Unblock the Notifications












