ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಿಂಹಪ್ರಿಯಾ ಜೋಡಿ, ರಾಜ್ಯೋತ್ಸವದಂದು ಸಿಹಿ ಸುದ್ದಿ ಹಂಚಿಕೊಂಡ ವಸಿಷ್ಠ-ಹರಿಪ್ರಿಯಾ..!
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಏನಾದ್ರೂ ಗುಡ್ ನ್ಯೂಸು.. ಅಂತಾನೇ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತದೆ. ಅವರು ಹೋದಲ್ಲಿ ಬಂದಲ್ಲಿ ಅನೇಕರು ಈ ಪ್ರಶ್ನೆಯನ್ನು ಕೇಳುತ್ತಾನೇ ಇರುತ್ತಾರೆ.
ಹೀಗಾಗಿ ಬೇರೆಯವರು ಕೇಳುವುದಕ್ಕಿಂತ ಮುನ್ನ ನಾವಾಗಿಯೇ ಹೇಳುವುದು ಉತ್ತಮ ಎಂದು ಅಂದುಕೊಂಡು ಅನೇಕರು ಶುಭ ಸುದ್ದಿಯನ್ನು ನೀಡುತ್ತಾರೆ. ಈ ಸಾಲಿಗೆ ಸೇರಿಕೊಂಡಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಾವು ತಂದೆ-ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ರಾಜ್ಯೋತ್ಸವದ ಪ್ರಯುಕ್ತ ತಮ್ಮ ಅಭಿಮಾನಿಗಳ ಜೊತೆ ಹಿತೈಶಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಸಿಷ್ಠ ಮತ್ತು ಹರಿಪ್ರಿಯಾ ಪ್ರೀತಿಯ ಹಿತೈಶಿಗಳಿಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು.. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ "ಕುಡಿ"ಗಾಗಿ ಎದುರುನೋಡುತ್ತಿದ್ದೇವೆ..!! ಎಂದಿದ್ದಾರೆ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದಗಳ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಕೂಡ ಇಬ್ಬರು ಹೇಳಿದ್ದಾರೆ.
ಸದ್ಯಕ್ಕೆ ಸಿಂಹಪ್ರಿಯಾ ಜೋಡಿಗೆ ಅನೇಕರು ಶುಭಾಶಯವನ್ನು ಹೇಳುತ್ತಿದ್ದಾರೆ. ಕೆಲವರು ಜ್ಯೂನಿಯರ್ ಸಿಂಗ ಬರ್ತಿದ್ದಾನೆ ಎಂದು ಹೇಳಿದ್ದರೆ, ಮತ್ತೊಬ್ಬರು ನಿಮಗೆ ಮೊದಲು ಹೆಣ್ಣು ಮಗುನೇ ಹುಟ್ಟುವುದು ಎಂದು ಭವಿಷ್ಯವನ್ನು ಹೇಳುತ್ತಿದ್ದಾರೆ. ಮೊದಲನೇ ಮಗು ಹೆಣ್ಣು ಆ ನಂತರ ಎರಡನೇ ಮಗು ಗಂಡು ಎನ್ನುತ್ತಿದ್ದಾರೆ. ಇನ್ನೂ ಕಾಕತಾಳೀಯ ಎಂಬಂತೆ ರಾಜ್ಯೋತ್ಸವದಂದೇ ವಸಿಷ್ಠ ಸಿಂಹ ಅವರ ಅತ್ಯಾಪ್ತ ಸ್ನೇಹಿತ ಡಾಲಿ ಧನಂಜಯ್ ಕೂಡ ಮದುವೆಯಾಗುತ್ತಿರುವ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಡಾಲಿಯ ಮದುವೆಯ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿಯೇ ವಸಿಷ್ಠ ತಾವು ತಂದೆಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಅರ್ಥದಲ್ಲಿ ಈ ಬಾರಿಯ ರಾಜ್ಯೋತ್ಸವ ಇಬ್ಬರ ಜೊತೆ ಡಾಲಿ ಮತ್ತು ಚಿಟ್ಟೆ ಅಭಿಮಾನಿಗಳಿಗೂ ತುಂಬಾನೇ ವಿಶೇಷವಾದದ್ದು ಅಂದರೆ ತಪ್ಪಾಗಲಿಕ್ಕಿಲ್ಲ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ವಸಿಷ್ಠ ಮತ್ತು ಹರಿಪ್ರಿಯಾ ಮಾಲ್ಡೀವ್ಸ್ಗೆ ತೆರಳಿದ್ದರು. ವಸಿಷ್ಠ ತಮ್ಮ ಮುದ್ದಿನ ಹೆಂಡ್ತಿಯ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿದ್ದರು. ಈ ಸಮಯದಲ್ಲಿ ಇಬ್ಬರ ಫೋಟೊಗಳನ್ನು ನೋಡಿದ ಅನೇಕರು ಹರಿಪ್ರಿಯಾ ಗರ್ಭಿಣಿಯಾಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ನೇರವಾಗಿಯೇ ಹರಿಪ್ರಿಯಾ ಅವರಲ್ಲಿ ಈ ಪ್ರಶ್ನೆ ಕೇಳಿದ್ದರು. ಆದರೆ ಆಗ ಹರಿಪ್ರಿಯಾ ಆಗಲಿ ವಸಿಷ್ಠ ಸಿಂಹ ಆಗಲಿ ಉತ್ತರ ನೀಡಿರಲಿಲ್ಲ. ಆದರೆ ಈಗ ರಾಜ್ಯೋತ್ಸವ ಮತ್ತು ದೀಪಾವಳಿಯ ಖುಷಿಯಲ್ಲಿ ಇಬ್ಬರು ತಾವು ಕುಡಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಅಂದ್ಹಾಗೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ 26 ಜನವರಿ 2023 ರಲ್ಲಿ ಮದುವೆಯಾಗಿದ್ದರು. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಪ್ತಪದಿ ತುಳಿದಿದ್ದರು. ಇನ್ನೂ ವಸಿಷ್ಠ ಸಿಂಹ ಸದ್ಯ ಕನ್ನಡದ ಜೊತೆಯಲ್ಲಿ ತೆಲುಗು ಚಿತ್ರರಂಗದಲ್ಲಿ ಕೂಡ ಬ್ಯುಸಿಯಾಗಿದ್ಧಾರೆ. ಓದೆಲಾ 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ನವೆಂಬರ್ 15ರಂದು ತೆರೆಗೆ ಬರಲಿರುವ ಭೈರತಿ ರಣಗಲ್ ಚಿತ್ರದಲ್ಲಿ ಕೂಡ ವಸಿಷ್ಠ ಸಿಂಹ ತುಂಬಾನೇ ಮಹತ್ವವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ತಾಯಿಯಾಗುತ್ತಿರುವ ಖುಷಿಯಲ್ಲಿರುವ ಹರಿಪ್ರಿಯಾ ಕೆಲ ದಿನಗಳ ಹಿಂದೆ ಕಿರುಚಿತ್ರ ನಿರ್ಮಾಣದತ್ತ ಆಸಕ್ತಿ ತೋರಿಸಿದ್ದರು. ನಿಮ್ಮಲ್ಲಿ ಉತ್ತಮವಾದ ಕಥೆ ಇದ್ದರೆ ನಮಗೆ ಕಳುಹಿಸಿ ಎಂದು ಹೇಳಿದ್ದರು.


Click it and Unblock the Notifications











