ಮೊದಲ ದಿನದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜನಸಾಗರ
12ನೇ ಬೆಂಗಳೂರು ಅಂತರಾಷ್ಟ್ರೀಯ ಚನಲಚಿತ್ರೋತ್ಸವ ಪ್ರಾರಂಭವಾಗಿದ್ದು ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ನಾಲ್ಕು ಕಡೆ ಸಿನಿಮಾ ಪ್ರದರ್ಶನ ವಾಗುತ್ತಿದ್ದು, ಒರೆಯಾನ್ ಮಾಲ್ ನಲ್ಲಿ ಸಿನಿ ಉತ್ಸವಕ್ಕೆ ಜನಸಾಗರವೆ ಹರಿದು ಬಂದಿತ್ತು. ಸಾಮಾನ್ಯ ಜನರು ಮತ್ತು ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಆನಂದಿಸಿದರು.
ಪಾಸ್ ವಿಚಾರವಾಗಿ ಸಿನಿಪ್ರೇಕ್ಷಕರಲ್ಲಿ ಒಂದಿಷ್ಟು ಗೊಂದಲ ನಿರ್ಮಾಣವಾಗಿತ್ತು. ಸಿನಿಮಾ ನೋಡುವ ಆಸೆಯಿಂದ ಬಂದ ಅನೇಕರು ಪಾಸ್ ಸಿಗದೆ ಬೇಸರದಿಂದ ವಾಪಾಸ್ ಹೋಗಬೇಕಾಯಿತು. ಉಳಿದಂತೆ ಮೊದಲ ದಿನದ ಸಿನಿ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ.
ಚಿತ್ರೋತ್ಸವದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪಾಸ್ ಸಮಸ್ಯೆಯಾಗಿದ್ದಕ್ಕೆ ಕ್ಷಮೆಯಾಚಿಸಿದರು. "ಈ ಬಾರಿ ಪರಿಸರಸ್ನೇಹಿ ಚಿತ್ರೋತ್ಸವ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಪಾಸ್ ಗಳ ಬದಲಿಗೆ ಪೇಪರ್ ಪಾಸ್ ಗಳ ವ್ಯವಸ್ಥೆ ಮಾಡಿಸಿದ್ದೀವಿ. ಹಾಗಾಗಿ ಮೊದಲ ದಿನ ಪಾಸ್ ಸಮಸ್ಯೆಯಾಗಿದೆ" ಎಂದರು.
ಈ ಬಾರಿ ಸುಮಾರು 11,000 ಪಾಸ್ ಗಳ ರಿಜಿಸ್ಟರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಸಿನಿಮೋತ್ಸವಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇನ್ನು ಮೊದಲ ದಿನ ಉತ್ಸವದಲ್ಲಿ ಚಿತ್ರರಂಗದ ಗಣ್ಯರಾದ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಹಿರಿಯ ನಟ ದತ್ತಣ್ಣ, ನಿರ್ದೇಶಕ ದಿನಕರ್ ತೂಗುದೀಪ, ಕವಿರಾಜ್, ಟಿ.ಎನ್ ಸೀತರಾಮ್, ರಮೇಶ್ ಭಟ್ ಸೇರಿದಂತೆ ಸಾಕಷ್ಟು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ದರು. ಇನ್ನು ಕಿರುತೆರೆಯ ಸಾಕಷ್ಟು ಕಲಾವಿದರು ಬಂದು ಸಿನಿಮಾ ನೋಡಿ ಎಂಜಾಯ್ ಮಾಡಿದರು.
ಮೊದಲ ದಿನ ಒರಯನ್ ಮಾಲ್ ನಲ್ಲಿ ದಿ ಚಾರ್ಕೋಲ್, ಅವರ್ ಮದರ್ಸ್, ಫೈರ್ ವಿಲ್ ಕಮ್, ದಿ ಸ್ಟಿಡ್, ದಿ ಅನ್ ಆರ್ಥೊಡಾಕ್ಸ್, ವರ್ಡಿಕ್ಟ್ ಸೇರಿದಂತೆ ದೇಶದ ಬೇರೆ ಬೇರೆ ಭಾಷೆಯ ಸಾಕಷ್ಟು ಸಿನಿಮಾಗಳು ಪ್ರದರ್ಶನ ಕಂಡವು. ಇನ್ನು ಕನ್ನಡದ ಸಿನಮಾಗಳಾದ ಭಿನ್ನ, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಸಹ ಪ್ರದರ್ಶನಗೊಂಡಿತು.
ಇಂದಿನಿಂದ ಪ್ರಾರಂಭವಾದ ಚಿತ್ರೋತ್ಸವ ಮಾರ್ಚ್ 4ರ ವರೆಗೂ ನಡೆಯಲಿದ್ದು, ಸುಮಾರು 200 ಚಿತ್ರಗಳು ಪ್ರದರ್ಶನವಾಗಲಿದೆ. ಒರೆಯಾನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘದ ರಾಜ್ ಕುಮಾರ್ ಭವನ, ಸುಚಿತ್ರ ಫಿಲಂ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನವಾಗಲಿದೆ.


Click it and Unblock the Notifications











