ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿಕೊಳ್ಳಲು ಅಭಿಮಾನಿಗಳ ಹೋರಾಟ
ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಹೋರಾಟ ಮಾಡುತ್ತಿದ್ದ ಅಭಿಮಾನಿಗಳು ಈಗ ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿಕೊಳ್ಳಲು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿನ ಪ್ರಪಥಮ ಕನ್ನಡ ಶಾಲೆ ಎಂದೇ ಹೆಸರು ಗಳಿಸಿದ್ದ ಚಾಮಾರಾಜ ಪೇಟೆಯ ಮಾಡೆಲ್ ಸ್ಕೂಲ್ ಎಜೆಕೇಷನ್ ಸೂಸೈಟಿ ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿದುಕೊಳ್ಳಲಿದೆ.
ಸರ್ಕಾರದ ಆದೇಶದ ಪ್ರಕಾರ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಲ್ಲ. ಎಸ್ ಎಸ್ ಸಿ ಯ ಫಲಿತಾಂಶದಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ ಎನ್ನು ಕಾರಣಕೊಟ್ಟು ಶಾಲೆಯನ್ನ ಮುಚ್ಚಲಾಗಿದೆ. ಇಲ್ಲಿದ ಮಕ್ಕಳನ್ನ ಬೆಂಗಳೂರು ದಕ್ಷಿಣ ಭಾಗದ ಬೇರೆ ಶಾಲೆಗಳಿಗೆ ಸೇರಿಸಲಾಗಿದೆ.
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರಮೇಶ್ ಭಟ್ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು ಅದಷ್ಟೇ ಅಲ್ಲದೆ ಬಾಸ್ಕೋ ಮನೆಯ ನೂರಾರು ಅನಾಥ ಮಕ್ಕಳು ಇದೇ ಶಾಲೆಯಲ್ಲಿ ಕಲಿತಿದ್ದರು. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ 15 ವರ್ಷಗಳಿಂದ ಗಣಿತ ಪಾಠ ಮಾಡಲು ಶಿಕ್ಷಕರಿಲ್ಲ ಎನ್ನುವುದು ಬೇಸರದ ಸಂಗತಿ.

ಶಿಕ್ಷಕರನ್ನ ನೀಡದೆ, ಫಲಿತಾಂಶವನ್ನ ನಿರೀಕ್ಷೆ ಮಾಡುತ್ತಿರುವ ಸರ್ಕಾರದ ಧೋರಣೆಯನ್ನ ಖಂಡಿಸಿ ನಾಳೆ(ಜನವರಿ 6) ರಂದು ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಎದುರಿರುವ ತುಳಸಿ ತೋಟದ ಪಕ್ಕದಲ್ಲಿರುವ ಬಿಇಓ ಕಛೇರಿ ಮುಂದೆ ಪ್ರತಿಭಟನೆ ಮಾಡಲು ವಿಷ್ಣು ಸೇನಾ ಸಮಿತಿ ನಿರ್ಧರಿಸಿದೆ.

ವಿಷ್ಣು ವ್ಯಾಸಂಗ ಮಾಡಿದ ಶಾಲೆ ಮುಂದುವರೆಯಬೇಕು. ಕನ್ನಡ ಶಿಕ್ಷಣ ನೀಡುವ ಶಾಲೆಗಳು ಮುಚ್ಚಬಾರದು ಎಂದು ಪ್ರತಿಭಟನೆ ನಡೆಸಲಿದ್ದಾರೆ. ಚಲನಚಿತ್ರ ಕಲಾವಿದರು, ಹೋರಾಟಗಾರರು ಹಾಗೂ ಸಾಹಿತಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸ್ಮಾರಕ ವಿಚಾರದಲ್ಲಿ ಆಸಕ್ತಿ ತೋರದ ಸರ್ಕಾರ ಶಾಲೆ ವಿಚಾರದಲ್ಲಾದರೂ ವಿಷ್ಣು ಮತ್ತು ಕನ್ನಡದ ಪರವಾಗಿ ನಿಲ್ಲಲಿ.


Click it and Unblock the Notifications











