12 ಕಿ.ಮೀ ರಸ್ತೆಗೆ ಪುನೀತ್ ಹೆಸರು: ಅದ್ಧೂರಿ ಕಾರ್ಯಕ್ರಮ, ವಿವರ ಇಲ್ಲಿದೆ
ನಟ ಪುನೀತ್ ರಾಜ್ಕುಮಾರ್ ಅಗಲಿ ವರ್ಷಕ್ಕೂ ಹೆಚ್ಚು ಸಮಯವಾದರೂ ಅವರ ನೆನಪು ಮಾಸಿಲ್ಲ. ಇಂದಿಗೂ ಅಪ್ಪುವನ್ನು ಪ್ರತಿನಿತ್ಯ ನೆನಪಿಸಿಕೊಳ್ಳುವ ಕೋಟ್ಯಂತರ ಜೀವಗಳಿವೆ.
ಅಪ್ಪು ಅಭಿಮಾನಿಗಳು, ಕನ್ನಡ ಚಿತ್ರರಂಗ ಒಂದೆಡೆ ಅಪ್ಪು ಹೆಸರನ್ನು ಅಜರಾಮರ ಗೊಳಿಸುವ ಕಾರ್ಯವನ್ನು ಮಾಡುತ್ತಲಿದ್ದರೆ, ಇತ್ತ ಸರ್ಕಾರವು ಸಹ ಪುನೀತ್ ಹೆಸರನ್ನು ಅಜರಾಮರಗೊಳಿಸುವ ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಲಿದೆ. ಇದರ ಭಾಗವಾಗಿಯೇ ಬೆಂಗಳೂರಿನ ರಸ್ತೆಯೊಂದಕ್ಕೆ ಪುನೀತ್ ರಾಜ್ಕುಮಾರ್ ಹೆಸರನ್ನು ನಾಮಕರಣ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.
ಬೆಂಗಳೂರಿನ ನಾಯಂಡಳ್ಳಿ ಜಂಕ್ಷನ್ ಇಂದ, ಬನ್ನೇರಘಟ್ಟ ರಸ್ತೆ ವರೆಗಿನ ಸುಮಾರು ಹನ್ನೆರಡು ಕಿ.ಮೀ ಉದ್ದ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರು ನಾಮಕರಣ ಮಾಡಲಾಗುತ್ತಿದೆ. ನಾಮಕರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ಯೋಜಿಸಲಾಗಿದ್ದು ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ, ಕಂದಾಯ ಸಚಿವ ಆರ್.ಅಶೋಕ್ ಮುಂದಾಳತ್ವದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಇಂದು ಫಿಲಂ ಚೇಂಬರ್ನಲ್ಲಿ ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಆರ್.ಅಶೋಕ್, ''ರಿಂಗ್ ರಸ್ತೆಗೆ ಪುನೀತ್ ಹೆಸರು ನಾಮಕರಣ ಕಾರ್ಯಕ್ರಮವನ್ನು ಪದ್ಮನಾಭ ನಗರದ ವಾಜಪೇಯಿ ಮೈದಾನದಲ್ಲಿ ಫೆಬ್ರವರಿ 7 ರಂದು ಹಮ್ಮಿಕೊಳ್ಳಲಾಗಿದೆ. ಸಂಜೆ ವೇಳೆಗೆ ಕಾರ್ಯಕ್ರಮ ಶುರುವಾಗಲಿದ್ದು, ಅಪ್ಪು ಅವರಿಗೆ ಆತ್ಮೀಯರಾಗಿದ್ದ ಸಿಎಂ ಅವರು ಸ್ವತಃ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ'' ಎಂದರು.

ಗೆಜೆಟ್ನಲ್ಲಿ ಆದೇಶವಾಗಿದೆ: ಆರ್ ಅಶೋಕ್
''ಪುನೀತ್ ಒಬ್ಬ ಮಾನವತಾವಾದಿಯಾಗಿದ್ದರು. ಅವರ ಹೆಸರನ್ನು ರಸ್ತೆಗೆ ಇಡಬೇಕೆಂದು ನಾನು ಆಶಿಸಿ, ಮನವಿ ಸಲ್ಲಿಸಿದ್ದೆ. ಸಿಎಂ ಅವರು ಮನವಿಯನ್ನು ಮನ್ನಿಸಿದ್ದು, ಗೆಜೆಟ್ನಲ್ಲಿ ಆದೇಶ ಸಹ ಆಗಿದೆ. ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಪಾಲಿಕೆ ನೇತೃತ್ವದಲ್ಲಿ ಮಾಡಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಚಿತ್ರರಂಗ ಸಹ ಭಾಗವಹಿಸಲಿದೆ'' ಎಂದರು.

'ಅಪ್ಪು ಅವರನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳೋಣ'
''ಪುನೀತ್ ರಾಜ್ಕುಮಾರ್ಗೆ 'ಕರ್ನಾಟಕ ರತ್ನ' ಕಾರ್ಯಕ್ರಮಕ್ಕೆ ನನ್ನದೇ ಮುಂದಾಳತ್ವವಾಗಿತ್ತು. ಆದರೆ ಅಂದು ಮಳೆ ಬಂದ ಕಾರಣ ಕಾರ್ಯಕ್ರಮ ಅಂದುಕೊಂಡಂತೆ ಆಗಲಿಲ್ಲ. ಆದರೆ ಈಗ ಈ ಕಾರ್ಯಕ್ರಮವು ಆ ಕೊರತೆಯನ್ನು ನೀಗಿಸಲಿದೆ. ಸರ್ಕಾರದ ಪ್ರಮುಖ ಸಚಿವರೊಟ್ಟಿಗೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪ್ಪು ಅವರನ್ನು ಸ್ಮರಿಸಿಕೊಳ್ಳಿದ್ದಾರೆ'' ಎಂದರು.

ಹಲವು ಖ್ಯಾತ ಗಾಯಕರಿಂದ ಗಾಯನ
''ಸಂಗೀತ ಕಾರ್ಯಕ್ರಮ ಸಹ ಇರಲಿದ್ದು, ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಚಿತ್ರರಂಗದ ಹಲವು ಪ್ರಮುಖ ಗಾಯಕರು ಅಪ್ಪುಗಾಗಿ ಹಾಡು ಹಾಡಲಿದ್ದಾರೆ. ಗುರುಕಿರಣ್, ಸಾಧುಕೋಕಿಲ, ವಿಜಯಪ್ರಕಾಶ್, ರಘು ದೀಕ್ಷಿತ್, ಚಂದನ್ ಶೆಟ್ಟಿ, ಬದ್ರಿಪ್ರಸಾದ್, ಹೇಮಂತ್ ಕುಮಾರ್, ವಿಜಯಪ್ರಕಾಶ್, ಅರ್ಜುನ್ ಜನ್ಯ ಹದಿನೇಳು ಜನ ಗಾಯಕರು, ಇನ್ನೂ ಕೆಲವು ಗಾಯಕರು ಹಾಡು ಹಾಡಲಿದ್ದಾರೆ. ಕಾರ್ಯಕ್ರಮಕ್ಕೆ ಅಣ್ಣಾವ್ರ ಕುಟುಂಬದ ಸದಸ್ಯರು ಸಹ ಆಗಮಿಸಲಿದ್ದಾರೆ. ಇದರ ಜೊತೆಗೆ ಅನಿರುದ್ಧ, ವಿಜಯ ರಾಘವೇಂದ್ರ, ಯೋಗರಾಜ್ ಭಟ್ ಸೇರಿದಂತೆ ಇನ್ನೂ ಕೆಲವು ಗಣ್ಯರು ಸಹ ಬರಲಿದ್ದಾರೆ ಎಂದಿದ್ದಾರೆ.

ಎಲ್ಲರಿಗೂ ಮುಕ್ತ ಅವಕಾಶ
ವಾಜಪೇಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಸಕಲ ತಯಾರಿ ಆಗಿದ್ದು, ಸುಮಾರು ಹತ್ತರಿಂದ ಹದಿನೈದು ಸಾವಿರ ಜನ ಪ್ರೇಕ್ಷಕರು ಸೇರುವ ನಿರೀಕ್ಷೆ ಇದೆ. ಇವರಿಗಾಗಿ ಸಕಲ ಸಿದ್ಧತೆ ಪೂರ್ಣವಾಗಿದೆ. ಪೊಲೀಸರು ಎಲ್ಲ ರೀತಿಯ ಪರಿಶೀಲನೆ ಮಾಡಿದ್ದಾರೆ. ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇಂದು ಸಂಜೆ ಮತ್ತೊಮ್ಮೆ ಹೋಗಿ ತಯಾರಿ ವೀಕ್ಷಿಸಲಿದ್ದೇನೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇರಲಿದ್ದು, ಎಲ್ಲ ಅಭಿಮಾನಿಗಳಿಗೆ ಸ್ವಾಗತ ಎಂದರು ಅಶೋಕ್.


Click it and Unblock the Notifications











