ನಟರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಿ ಹಣ, ಜಾಗ ಬಳಕೆ ಬೇಡ: ಚೇತನ್ ಅಹಿಂಸ
ಹಲವು ವರ್ಷಗಳ ಎಳೆದಾಟ, ವಿವಾದಗಳ ಬಳಿಕ ಕೊನೆಗೂ ವಿಷ್ಣುವರ್ಧನ್ ಸ್ಮಾರಕ ನಿನ್ನೆಯಷ್ಟೆ ಉದ್ಘಾಟನೆಗೊಂಡಿದೆ. ಮೈಸೂರು ಬಳಿಯ ಐದು ಎಕರೆ ಪ್ರದೇಶದಲ್ಲಿ 11 ಕೋಟಿ ವೆಚ್ಚ ಮಾಡಿ ಸರ್ಕಾರವು ಸ್ಮಾರಕ ನಿರ್ಮಾಣ ಮಾಡಿದೆ.
ಕೊನೆಗೂ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದ್ದನ್ನು ವಿಷ್ಣು ದಾದಾ ಅಭಿಮಾನಿಗಳು, ಇಷ್ಟು ವರ್ಷಗಳ ಕಾಲ ಹೋರಾಡಿದ ಕುಟುಂಬದವರು ಹಾಗೂ ಸಿನಿಮಾ ರಂಗದ ಹಲವರು ಸ್ವಾಗತಿಸಿದ್ದಾರೆ. ಆದರೆ ಭಿನ್ನ ವಿಚಾರಗಳಿಂದ ಗುರುತಿಸಿಕೊಳ್ಳುವ ನಟ, ಹೋರಾಟಗಾರ ಚೇತನ್ ಅಹಿಂಸ ಈ ವಿಷಯದಲ್ಲಿ ತಮ್ಮ ಭಿನ್ನ ನಿಲವು ಪ್ರಕಟಿಸಿದ್ದಾರೆ.
ಪತ್ರಿಕಾ ಹೇಳಿಕೆ ಹೊರಡಿಸಿರುವ ಚೇತನ್ ಅಹಿಂಸ, ಯಾವುದೇ ಸಿನಿಮಾ ನಟನ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಹಣವನ್ನು ಉಪಯೋಗಿಸಬಾರದು ಎಂದಿದ್ದಾರೆ.

ಚಲನಚಿತ್ರ ಸ್ಟಾರ್ ನಟರ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯ ಜನಪ್ರಿಯತೆಯನ್ನು ಪಡೆದಿರುತ್ತಾರೆ ಎಂದಿದ್ದಾರೆ ಚೇತನ್ ಅಹಿಂಸ.
ನಟರ ಸ್ಮಾರಕ ನಿರ್ಮಾಣ ಮಾಡಲು ಭೂಮಿ, ಹಣ ನೀಡುವ ಬದಲು ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ನೀಡುವುದು ಸರ್ಕಾರಿ ಜಾಗ ಹಾಗೂ ಹಣದ ಸರಿಯಾದ ಉಪಯೋಗ ಎಂದಿದ್ದಾರೆ ಚೇತನ್ ಅಹಿಂಸ.
ಈ ಹಿಂದೆ ನಟ ಚೇತನ್ ಅಹಿಂಸ ಅವರು ಕನ್ನಡದ ಇತ್ತೀಚಿನ ಸೂಪರ್ ಡೂಪರ್ ಹಿಟ್ ಸಿನಿಮಾ 'ಕಾಂತಾರ' ಬಗ್ಗೆಯೂ ಕೆಲವು ಕಮೆಂಟ್ಗಳನ್ನು ಮಾಡಿದ್ದರು, ಅವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದವು. 'ಕಾಂತಾರ' ಸಿನಿಮಾದಲ್ಲಿ ತೋರಿಸಲಾಗಿರುವ ಭೂತಕೋಲ ಹಿಂದು ಧರ್ಮದ ಭಾಗವಲ್ಲ, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನಿಂದಲೂ ಇಲ್ಲಿನ ಮೂಲ ನಿವಾಸಿಗಳ ಬದುಕಿನಲ್ಲಿ ಇದ್ದಂಥಹವು ಎಂದು ಚೇತನ್ ಅಹಿಂಸ ಹೇಳಿದ್ದರು.
ಚೇತನ್ರ ಈ ಹೇಳಿಕೆ ವಿವಾದ ಹುಟ್ಟಿಸಿ, ಭೂತ ಆರಾಧಕರು, ದೈವ ನರ್ತಕರು ಇದನ್ನು ವಿರೋಧಿಸಿದ್ದರು. ಕೆಲವೆಡೆ ಚೇತನ್ ವಿರುದ್ಧ ದೂರುಗಳು ಸಹ ದಾಖಲಾದವು. ಇದೀಗ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಬೆನ್ನಲ್ಲೆ ದಿವಂಗತ ನಟರ ಸ್ಮಾರಕಕ್ಕಾಗಿ ಸರ್ಕಾರಿ ಜಮೀನು, ಹಣ ಬಳಕೆ ಬೇಡ ಎಂದಿದ್ದಾರೆ. ಇದು ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.


Click it and Unblock the Notifications











