"ಇವತ್ತು ಇವಳು ಇರುತ್ತಾಳೆ.. ನಾಳೆ ಅವಳು ಇರುತ್ತಾಳೆ" ದರ್ಶನ್ ಹೇಳಿಕೆಗೆ ಮಹಿಳೆಯರು ಗರಂ; ಮಹಿಳಾ ಆಯೋಗಕ್ಕೆ ದೂರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ವಾಗ್ಯುದ್ಧ ನಡೆಯುತ್ತಿರೋದು ಗೊತ್ತೇ ಇದೆ. 'ಕಾಟೇರ' ಟೈಟಲ್ ವಿವಾದ ಈಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ದರ್ಶನ್ 25ನೇ ವರ್ಷದ ಸಿನಿ ಜರ್ನಿಯನ್ನು ಶ್ರೀರಂಗಪಟ್ಟಣದಲ್ಲಿ ಆಚರಿಸಲಾಗಿತ್ತು. ಈ ವೇಳೆ ದರ್ಶನ್ ಕೊಟ್ಟ ಒಂದು ಹೇಳಿಕೆ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ.
25ನೇ ವರ್ಷದ ಸಿನಿ ಜರ್ನಿ ಸಂಭ್ರಮದ ವೇಳೆ ದರ್ಶನ್ "ಇವತ್ತು ಇವಳು ಇರುತ್ತಾಳೆ.. ನಾಳೆ ಅವಳು ಇರುತ್ತಾಳೆ" ಅಂತ ಹೇಳಿದ್ದರು. ಈ ಹೇಳಿಕೆ ವಿರುದ್ಧ ಗೌಡತಿಯರ ಸೇನೆಯಮಹಿಳೆಯರು ದರ್ಶನ್ ವಿರುದ್ಧ ದೂರನ್ನು ದಾಖಲಿಸಿದೆ. ದರ್ಶನ್ ಆಡಿದ ಮಾತಿನಿಂದ ಮಹಿಳೆಯರಿಗೆ ಸಾರ್ವಜನಿಕವಾಗಿ ಅವಮಾನ ಆಗಿದೆ ಎಂದು ಮಹಿಳಾ ಆಯೋಗಕ್ಕೆ ದೂರನ್ನು ದಾಖಲು ಮಾಡಲಾಗಿದೆ.

ಗೌಡತಿಯರ ಸೇನೆಯ ಜಯಶ್ರೀ , ರೇಣುಕಾ ನೇತೃತ್ವದಲ್ಲಿ ದರ್ಶನ್ ವಿರುದ್ಧ ದೂರನ್ನು ಸಲ್ಲಿಸಲಾಗಿದೆ. ಇದೇ ವಿಚಾರವಾಗಿ ಸೋಶೀಯಲ್ ಮೀಡಿಯಾದಲ್ಲಿಯೂ ದರ್ಶನ್ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದರು. ಹೆಣ್ಣು ಮಕ್ಕಳ ವಿಚಾರವಾಗಿ ಹೀಗೆ ಮಾತಾಡುವುದನ್ನು ಖಂಡಿಸಲಾಗಿತ್ತು. ಇಷ್ಟ ಅಲ್ಲದೆ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರೋ ಅಹೋರಾತ್ರ ಕೂಡ ವಿಡಿಯೋ ಮಾಡಿ ದರ್ಶನ್ರನ್ನು ಜರಿದಿದ್ದರು.
ಈಗ ಗೌಡ ಸಮುದಾಯದ ಮಹಿಳೆಯರು ದರ್ಶನ್ ವಿರುದ್ಧ ತಿರುಗಿಬಿದ್ದಿದ್ದಾರೆ. ದರ್ಶನ್ ತಮ್ಮ ಬೆಳ್ಳಿ ಪರ್ವ ಸಮಾರಂಭದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ಪವಿತ್ರಾ ಗೌಡ ವಿಚಾರವನ್ನು ಮುಂದಿಟ್ಟುಕೊಂಡು "ಇವತ್ತು ಇವಳು ಇರುತ್ತಾಳೆ.. ನಾಳೆ ಅವಳು ಇರುತ್ತಾಳೆ" ಎಂಬ ಪದಗಳನ್ನು ಪ್ರಯೋಗ ಮಾಡಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ವಿರೋಧ ವ್ಯಕ್ತವಾಗಿತ್ತು.
ಈಗ ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಗೌಡತಿಯರ ಸೇನೆ ದರ್ಶನ್ ವಿರುದ್ಧ ಅಖಾಡಕ್ಕೆ ಇಳಿದಿದೆ. "ಜನಪ್ರಿಯ ಹಾಗೂ ಜವಾಬ್ದಾರಿಯುತ ನಟ ಇಂತಹ ಪದಗಳನ್ನು ಬಳಸುವುದು ಎಷ್ಟು ಸರಿ..? ಈ ಹೇಳಿಕೆಗಳಿಂದ ಸಾರ್ವಜನಿಕವಾಗಿ ಮಹಿಳೆಯರಿಗೆ ಅವಮಾನ ಆಗಿದೆ." ಎಂದು ಗೌಡತಿಯರ ಸೇನೆಯ ಸದಸ್ಯರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ, " ದರ್ಶನ್ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಮಹಿಳೆಯ ವಿರುದ್ಧ ಪ್ರಯೋಗಿಸಿದ ಪದಗಳಿಗೆ ದರ್ಶನ್ ಕ್ಷಮೆ ಕೇಳಬೇಕು. ಒಂದು ವೇಳೆ ಕ್ಷಮೆ ಕೇಳದೇ ಇದ್ದರೆ, ಅವರ ಮನೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ. ಹೀಗಾಗಿ ಕೂಡಲೇ ಕ್ಷಮೆ ಕೇಳಬೇಕು." ಎಂದು ಗೌಡತಿಯರ ಸೇನೆ ರಾಜ್ಯಾಧ್ಯಕ್ಷೆ ರೇಣುಕಾ ಹೇಳಿಕೆ ಕೊಟ್ಟಿದ್ದಾರೆ.
ಅಷ್ಟಕ್ಕೂ ಬೆಳ್ಳಿ ಪರ್ವ ವೇದಿಕೆ ಮೇಲೆ ಹೀಗೆ ಹೇಳಿದ್ದಿಷ್ಟು. "ಫ್ಯಾಮಿಲಿ ಸಮಸ್ಯೆಗಳೆಲ್ಲವನ್ನು ಪಕ್ಕಕ್ಕೆ ಇಡುತ್ತೇನೆ. ನನಗೆ ನನ್ನ ಸೆಲೆಬ್ರೆಟಿಗಳು ಹಾಗೂ ನನ್ನ ಕೆಲಸ ಮುಖ್ಯ. ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇವತ್ತು ಇವಳು ಇರುತ್ತಾಳೆ. ನಾಳೆ ಅವಳು ಇರುತ್ತಾಳೆ. ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಮುಖ್ಯ ಅಷ್ಟೇ ಎಂದು ಹೇಳಿದ್ದರು.


Click it and Unblock the Notifications











