ರಾಜ್ಯಾದ್ಯಂತ ನ.30ರಂದು ‘ಗ್ರಾಮದೇವತೆ’ಯ ಬಿಡುಗಡೆ
ದೇವೀ ಮಹಿಮೆಯನ್ನು ಸಾರುವ 'ಗ್ರಾಮದೇವತೆ" ನ.30ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಶ್ರೀ ಲಕ್ಷ್ಮೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ಕೆ.ವಿ. ನಾಗೇಶ್ಕುಮಾರ್ ಅರ್ಪಿಸಿ, ಕೆ.ಎನ್. ಶ್ರೀಲಕ್ಷ್ಮೀ ಮತ್ತು ಇ ರಾಜಮ್ಮ ಸಾಯಿಪ್ರಕಾಶ್ ನಿರ್ಮಿಸಿರುವ 'ಗ್ರಾಮದೇವತೆ" ಸಂಪೂರ್ಣ ಭಕ್ತಿ ಪ್ರಧಾನ ಚಿತ್ರ.
ಭಾರತೀಯ ಚಿತ್ರರಂಗದಲ್ಲೇ ಎಂದೂ ಕಂಡು ಕೇಳರಿಯದಂತಹ ಗ್ರಾಫಿಕ್ ವಿಸ್ಮಯಗಳು ಈ ಚಿತ್ರದಲ್ಲಿವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಚಿತ್ರಕ್ಕೆ ದಿನ ಸಂಗೀತ ಒದಗಿಸಿದ್ದು, ನಿರ್ದೇಶನದ ಹೊಣೆಯನ್ನು ಸಾಯಿಪ್ರಕಾಶ್ ಹೊತ್ತಿದ್ದಾರೆ.
ಜಾನಪದ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಚಿತ್ರದಲ್ಲಿ ಮನರಂಜನಾತ್ಮಕ ಅಂಶಗಳೂ ಅಡಕವಾಗಿವೆ. ದೈವಶಕ್ತಿಯ ಮುಂದೆ ದುಷ್ಟ ಶಕ್ತಿಗಳ ಆಟ ಏನೂ ಸಾಗದು ಎಂಬ ಸಿದ್ಧ ಸಿದ್ಧಾಂತವನ್ನು ಮತ್ತೊಮ್ಮೆ ನವಿರಾಗಿ ನಿರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಾರಾಗಣದಲ್ಲಿ ಸಾಯಿಕುಮಾರ್, ಪ್ರೇಮಾ, ರಮ್ಯಕೃಷ್ಣ, ಗಜರ್ ಖಾನ್, ಅನೂಷಾ, ಸತ್ಯಜಿತ್, ಚಿತ್ರಾಶೆಣೈ, ಜಯಂತಿ, ಬ್ರಹ್ಮಾವರ್, ಮಹಾಲಕ್ಷ್ಮೀ, ಪ್ರಮೋದ್ ಚಕ್ರವರ್ತಿ, ಅಂಜನಾ ಮುಂತಾದವರು ಇದ್ದಾರೆ.
ಬೆಂಗಳೂರಿನ ಅಪರ್ಣ, ವೀರೇಶ, ನವರಂಗ್, ಪುಟ್ಟಣ್ಣ, ಆದರ್ಶ, ಗೋವರ್ಧನ್, ವೆಂಕಟೇಶ್ವರ, ಬಾಲಾಜಿ, ಪ್ರಮೋದ್, ನಂದಾ, ತುಮಕೂರಿನ ಕೃಷ್ಣ, ಶ್ರೀರಾಜ್, ಮೈಸೂರಿನ ಲಿಡೋ, ಸರಸ್ವತಿ, ಮಂಡ್ಯದ ಸಂಜಯ್, ಹಾಸನದ ಸಹ್ಯಾದ್ರಿ, ದಾವಣಗೆರೆಯ ಅಶೋಕ, ಚಿತ್ರದುರ್ಗದ ಪ್ರಸನ್ನ, ಶಿವಮೊಗ್ಗದ ವಿನಾಯಕ ಮೊದಲಾದ ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ಇದೇ ಶುಕ್ರವಾರ 'ಗ್ರಾಮದೇವತೆ" ಬಿಡುಗಡೆಯಾಗುತ್ತಿದೆ.


Click it and Unblock the Notifications