'ಜಿ.ಎಸ್.ಟಿ' ಕನ್ನಡ ಚಿತ್ರರಂಗಕ್ಕೆ ವರವೋ..? ಶಾಪವೋ..?
'ಜಿ.ಎಸ್.ಟಿ' ಜಾರಿಗೆ ಬರುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೂ 'ಜಿ.ಎಸ್.ಟಿ' ಇಂದಾಗಿ ಕನ್ನಡ ಚಿತ್ರರಂಗಕ್ಕೆ ಆಗುವ ಲಾಭ ನಷ್ಟದ ಬಗ್ಗೆ ಈಗಾಗಲೇ ಕೆಲ ಚರ್ಚೆಗಳು ನಡೆದಿದೆ. ಇನ್ನೂ ಫಿಲ್ಮ್ ಚೆಂಬರ್ ನಲ್ಲಿ ಈ ಬಗ್ಗೆ ಇಂದು ಒಂದು ಸಭೆ ಏರ್ಪಡಿಸಲಾಗಿತ್ತು.
'ಜಿ.ಎಸ್.ಟಿ' ಗೊಂದಲ ನಿವಾರಣೆಗೆ ಈ ಸಭೆ ಮಾಡಲಾಗಿದ್ದು, ಚಿತ್ರರಂಗದ ಅನೇಕ ವಲಯದವರು ಇದರಲ್ಲಿ ಭಾಗಿಯಾಗಿದ್ದರು. 'ಜಿ.ಎಸ್.ಟಿ' ಜಾರಿಯಾಗುವುದರಿಂದ ಕನ್ನಡ ಚಿತ್ರರಂಗಕ್ಕೆ ಅದರಲ್ಲೂ ನಿರ್ಮಾಪಕರಿಗೆ ನಷ್ಟ ಆಗುವುದು ಎಂಬುದು ಬಹುಪಾಲು ಎಲ್ಲರ ಅಭಿಪ್ರಾಯವಾಗಿತ್ತು.
'ಜಿ.ಎಸ್.ಟಿ' ಕನ್ನಡ ಚಿತ್ರರಂಗದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚಿತ್ರರಂಗದ ಕೆಲ ಹಿರಿಯರು ತಮ್ಮ ಅಭಿಪ್ರಾಯವನ್ನು 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ತುಂಬ ನಷ್ಟ ಆಗುತ್ತೆ
''ಜಿ.ಎಸ್.ಟಿ ಯಿಂದ ಕನ್ನಡ ಚಿತ್ರರಂಗಕ್ಕೆ ತುಂಬ ನಷ್ಟ ಆಗುತ್ತೆ. ಇಷ್ಟು ದಿನ ತೆರಿಗೆ ವಿನಾಯಿತಿ ಇದ್ರೂ, ನಾವು ಹಾಕಿದ್ದ ಬಂಡವಾಳ ಕೆಲವೊಮ್ಮೆ ಬರುತ್ತಿರಲಿಲ್ಲ. ಈಗ 18% ಮತ್ತು 28% ತೆರಿಗೆ ಹಾಕಿದರೆ ನಿರ್ಮಾಪಕರ ಪರಿಸ್ಥಿತಿ ಏನಾಗಬೇಕು. 'GST' ಕಟ್ಟುವುದು ಒಳ್ಳೆಯದ್ದೇ, ಆದರೆ ಇದರಿಂದ ಹೊರೆ ಆಗಬಾರದು. ಎಲ್ಲ ಹೊರೆ ಈಗ ನಿರ್ಮಾಪಕರ ಮೇಲೆ ಬೀಳುತ್ತಿದೆ'' - ಕೆ.ಮಂಜು, ನಿರ್ಮಾಪಕ

ಪ್ರಧಾನಿಗೆ ಮನವಿ
''ಚಿತ್ರರಂಗದ ತೆರಿಗೆಯನ್ನು ಎ, ಬಿ, ಸಿ ಎಂದು ವರ್ಗೀಕರಿಸಿ ಬೇರೆ ಬೇರೆ ತೆರಿಗೆ ಮಾಡಬೇಕು. ಈ ಹಿಂದೆ ಎರಡು ಕೋಟಿ ಆಗುವ ಸಿನಿಮಾದ ಬಜೆಟ್ ಇನ್ನು ಮುಂದೆ ಎರಡು ಮೂಕ್ಕಾಲು ಕೋಟಿ ಆಗುತ್ತದೆ. ಸದ್ಯದಲ್ಲೇ ದಕ್ಷಿಣ ಭಾರತದ ಚಿತ್ರರಂಗಗಳೆಲ್ಲ ಮಾತುಕತೆ ನಡೆಸಿ ಪ್ರಧಾನಿಯವರಿಗೆ ಈ ಬಗ್ಗೆ ಮನವಿ ಮಾಡುತ್ತೇವೆ'' - ಕೆ.ಮಂಜು, ನಿರ್ಮಾಪಕ

ಗೊಂದಲದಲ್ಲಿ ಇದ್ದರು
''ಚಿತ್ರರಂಗದ ಎಲ್ಲರೂ 'ಜಿ.ಎಸ್.ಟಿ' ಬಗ್ಗೆ ಗೊಂದಲದಲ್ಲಿ ಇದ್ದರು. ಅದಕ್ಕೆ ಇಂದು ಫಿಲ್ಮ್ ಚೇಂಬರ್ ಗೆ 'ಜಿ.ಎಸ್.ಟಿ' ಎಕ್ಸ್ ಪರ್ಟ್ ಕರೆಸಿದ್ವಿ. ಅವರು ನಿರ್ಮಾಪಕರಿಗೆ ತೆರಿಗೆ ಕಟ್ಟುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಬಹುತೇಕ ಎಲ್ಲ ಚಿತ್ರಮಂದಿರಗಳು 'ಜಿ.ಎಸ್.ಟಿ'ಗೆ ಸೇರ್ಪಡೆ ಆಗಿದೆ. ಕೇವಲ 11 ಚಿತ್ರಮಂದಿರಗಳು ಮಾತ್ರ ಸೇರ್ಪಡೆ ಆಗಿಲ್ಲ. ಅದ್ದರಿಂದ ಚಿತ್ರಮಂದಿರದ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಾಸ ಇಲ್ಲ'' - ಸಾ.ರಾ.ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷ.

ಸಣ್ಣ ನಿರ್ಮಾಪಕನಿಗೆ ಹೊಡೆತ
ಸೊನ್ನೆಯಿಂದ ಇದಕ್ಕಿದ್ದಂತೆ 18% ತೆರಿಗೆ ಹಾಕಿದ್ದು ಸಮಸ್ಯೆ ತಂದಿದೆ. ಇದರಿಂದ 50 ಲಕ್ಷ, ಒಂದು ಕೋಟಿಯಲ್ಲಿ ಸಿನಿಮಾ ಮಾಡುವ ಸಣ್ಣ ನಿರ್ಮಾಪಕನಿಗೆ ದೊಡ್ಡ ಹೊಡೆತ ಬೀಳುತ್ತದೆ. 'ಜಿ.ಎಸ್.ಟಿ' ಯಲ್ಲಿ ಸಿನಿಮಾವನ್ನು ಗ್ಯಾಂಬ್ಲಿಂಗ್ ವಿಭಾಗಕ್ಕೆ ಸೇರಸಿದ್ದಾರೆ. ಅದು ತಪ್ಪು. ಸಿನಿಮಾ ಒಂದು ಕ್ರಿಯಾಶೀಲತೆಗೆ ಸಂಬಂಧಪಟ್ಟಿದ್ದು'' -ಸಾ.ರಾ.ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷ.

ಸಿನಿಮಾ ಕಾನೂನನ್ನೂ ಮೀರಿದ್ದು
''ಜಿ.ಎಸ್.ಟಿ ಒಂದು ಆರ್ಥಿಕ ಶಿಸ್ತು. ಇನ್ನೂ ಸಿನಿಮಾ ಕಾನೂನನ್ನೂ ಮೀರಿ ಅದೊಂದು ಭಾವನೆ, ಕಲೆ. ಜಿ.ಎಸ್.ಟಿ ಬಂದರೇ ಸಿನಿಮಾ ನಿಲ್ಲುವುದಿಲ್ಲ. ಸಿನಿಮಾನಾ ಬರಿ ಬಿಸಿನೆಸ್ ಆಗಿ ನೋಡುವರಿಗೆ ಇದರಿಂದ ಆತಂಕ ಆಗಬಹುದು'' - ಜಯತೀರ್ಥ, ನಿರ್ದೇಶಕ

ಸಿನಿಮಾ ಇಷ್ಟ ಅಂದ್ರೆ ಖಂಡಿತ ನೊಡ್ತಾರೆ
''ಪ್ರೇಕ್ಷಕನಿಗೆ ಸಿನಿಮಾ ಎನ್ನುವುದು ಮನರಂಜನೆ ಮತ್ತು ಮನೋ ವಿಕಾಸಕ್ಕೆ ಆಯ್ಕೆ ಮಾಡಿಕೊಳ್ಳುವ ವೇದಿಕೆ. ಟಿಕೆಟ್ ಬೆಲೆ ಇಂದ ಪ್ರೇಕ್ಷಕನಿಗೆ ಹೊರೆ ಅನಿಸಿದರೂ, ಸಿನಿಮಾ ಇಷ್ಟ ಇದ್ದರೆ ಅದನ್ನು ಪಡೆದೇ ಪಡೆಯುತ್ತಾನೆ. ಪ್ರೇಕ್ಷಕನಿಗೆ ಬೇಕಾದ ಸಿನಿಮಾ ಆದರೆ ಆತ ಸಾವಿರ ರೂಪಾಯಿ ಅದರೂ ಸಿನಿಮಾ ನೋಡುತ್ತಾರೆ'' - ಜಯತೀರ್ಥ, ನಿರ್ದೇಶಕ


Click it and Unblock the Notifications











