Srujan Lokesh: ಡೈರೆಕ್ಷನ್ ಕ್ಯಾಪ್ ತೊಟ್ಟು 'GST' ಕಟ್ಟಲು ಮುಂದಾದ ಸೃಜನ್ ಲೋಕೇಶ್ !
ಸ್ಯಾಂಡಲ್ವುಡ್ನ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಹೀರೊ ಆಗಿ, ನಿರೂಪಕನಾಗಿ ಜನಮನ ಗೆದ್ದಿದ್ದಾರೆ. ಇದೇ ಗ್ಯಾಪ್ನಲ್ಲಿ ಇದೇ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಡೈರೆಕ್ಷನ್ ಕ್ಯಾಪ್ ತೊಟ್ಟು ಅಖಾಡಕ್ಕಿಳಿಯುತ್ತಿದ್ದಾರೆ.
ಸೃಜನ್ ಲೋಕೇಶ್ ನಿರ್ದೇಶನದ ಟೈಟಲ್ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈಗಾಗಲೇ ಸಿನಿಮಾ ಟೈಟಲ್ 'G S T' ಅಂತ ಫಿಕ್ಸ್ ಮಾಡಲಾಗಿದೆ. ಈ ಸಿನಿಮಾ ಈಗಾಗಲೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಿನಿಮಾವನ್ನು ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ 'GST' ಸಿನಿಮಾದ ಮುಹೂರ್ತ ಗ್ರ್ಯಾಂಡ್ ಆಗಿ ನಡೆದಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಸಮಾರಂಭದ ಪ್ರಮುಖ ಭಾಗವಾಗಿದ್ದರು. ಇವರೊಂದಿಗೆ ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಸುಂದರರಾಜ್, ತಾರಾ, ಶೃತಿ, ನಿರೂಪ್ ಭಂಡಾರಿ ಸೇರಿದಂತೆ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
'G S T' ಸಿನಿಮಾ ಟೈಟಲ್ ಇಂಟ್ರೆಸ್ಟಿಂಗ್ ಆಗಿದೆ. ಸಿನಿಮಾದ ಟ್ಯಾಗ್ ಲೈನ್ 'ಘೋಸ್ಟ್ ಇನ್ ಟ್ರಬಲ್' ಗಮನ ಸೆಳೆಯುತ್ತಿದೆ. "ದೆವ್ವಗಳಿಗೂ ಸಮಸ್ಯೆಯಿದೆ" ಎಂಬುದು ಈ ಟ್ಯಾಗ್ಲೈನ್ನ ಅರ್ಥ ಆಗಿದ್ದರೂ, ಆ ಸಮಸ್ಯೆ ಏನು ಎಂಬುದು ಸಿನಿಮಾದಲ್ಲೇ ನೋಡಬೇಕು. ಟೈಟಲ್ ನೋಡಿದರೆ ಇದೊಂದು ಪಕ್ಕಾ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋದನ್ನು ಹೇಳಬಹುದು.

ಈಗಾಗಲೇ 'G S T' ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. "ನನ್ನ ಲಕ್ಕಿ ನಂಬರ್ 7. ಮೊದಲು ಇದು 2023 ಇದನ್ನು ಕೂಡಿಸಿದಾಗ ಏಳು ಬರುತ್ತದೆ. ನನ್ನ ನಟನೆಯ 25 ನೇ ಸಿನಿಮಾ. 2+5=7. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಚಿತ್ರ. 3 + 4 ಕೂಡಿದಾಗ ಏಳಾಗುತ್ತದೆ." ಎಂದು ಅದೃಷ್ಟದ ಸಿನಿಮಾ ಬಗ್ಗೆ ಸೃಜನ್ ಲೋಕೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಇನ್ನೊಂದು ವಿಶೇಷತೆಯಿದೆ. ಈ ಸಿನಿಮಾದಲ್ಲಿ ಸೃಜನ್ ಲೋಕೇಶ್ ಪುತ್ರ ಬಾಲ ನಟನಾಗಿ ನಟಿಸುತ್ತಿದ್ದಾರೆ. ಈ ಬಗ್ಗೆನೂ ಸೃಜನ್ ಲೋಕೇಶ್ ಖುಷಿ ವ್ಯಕ್ತಪಡಿಸಿದ್ದಾರೆ. "ನಮ್ಮ ತಾತನ ಸಿನಿಮಾದಲ್ಲಿ ನಮ್ಮ ಅಪ್ಪ ಬಾಲ ಕಲಾವಿದನಾಗಿ, ನಮ್ಮಪ್ಪನ ಸಿನಿಮಾದಲ್ಲಿ ನಾನು ಬಾಲ ಕಲಾವಿದನಾಗಿ ನಟಿಸಿದ್ದೆ. ಈಗ ನನ್ನ ಸಿನಿಮಾದಲ್ಲಿ ನನ್ನ ಮಗ ಮಾಸ್ಟರ್ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ. ನಾಲ್ಕನೇ ಜನರೇಶನ್ ಈ ರೀತಿ ನಟಿಸುತ್ತಿರುವುದು ಇದೇ ಮೊದಲು " ಎನ್ನುತ್ತಾರೆ ಸೃಜನ್ ಲೋಕೇಶ್.
ಇಷ್ಟೇ ಅಲ್ಲದೆ ಇನ್ನೂ ಒಂದು ವಿಶೇಷವಿದೆ. ಸೃಜನ್ ಲೋಕೇಶ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾದಲ್ಲೇ ತಾಯಿ ಗಿರಿಜಾ ಲೋಕೇಶ್ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಸೃಜನ್ , ನನ್ನ ಆತ್ಮೀಯ ಗೆಳೆಯ. ಗೆಳೆಯನಿಗಾಗಿ ಮಾಡುತ್ತಿರುವ ಸಿನಿಮಾವಿದು" ಎಂದು ನಿರ್ಮಾಪಕ ಸಂದೇಶ್ ಎನ್ ತಿಳಿಸಿದ್ದಾರೆ.
'G S T' ಸಿನಿಮಾದಲ್ಲಿ ಸೃಜನ್ ಲೋಕೇಶ್ ಜೊತೆ ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ನಿವೇದಿತಾ, ತಬಲ ನಾಣಿ, ಅರವಿಂದ್ ರಾವ್, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಗುಂಡ್ಲುಪೇಟೆ ಸುರೇಶ್ ಕ್ಯಾಮರಾ, ಕವಿರಾಜ್ ಸಾಹಿತ್ಯ, ರಾಜಶೇಖರ್ ಮತ್ತು ತೇಜಸ್ವಿ ನಾಗ್ ಡೈಲಾಗ್ ಬರೆಯುತ್ತಿದ್ದಾರೆ.


Click it and Unblock the Notifications











