ಧನಂಜಯ 'ಗುರುದೇವ್ ಹೊಯ್ಸಳ' ರನ್ಟೈಮ್ ಎಷ್ಟು? ಅಡ್ವಾನ್ಸ್ ಬುಕ್ಕಿಂಗ್ಗೆ ಹೇಗಿದೆ ರೆಸ್ಪಾನ್ಸ್?
ಡಾಲಿ ಧನಂಜಯ ನಟನೆಯ ಆಕ್ಷನ್ ಎಂಟರ್ಟೈನರ್ 'ಗುರುದೇವ್ ಹೊಯ್ಸಳ' ಮಾರ್ಚ್ 30ಕ್ಕೆ ತೆರಗಪ್ಪಳಿಸುತ್ತಿದೆ. ಈಗಾಗಲೇ ಟೀಸರ್, ಸಾಂಗ್ಸ್ ಹಾಗೂ ಟ್ರೈಲರ್ ರಿಲೀಸ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಕ್ಕಿದೆ. ವಿಜಯ್ ಎನ್. ನಿರ್ದೇಶನದ ಈ ಚಿತ್ರದಲ್ಲಿ ಧನು ಖಾಕಿ ತೊಟ್ಟು ದುಷ್ಟರ ಸದೆ ಬಡಿಯಲು ಬರ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಸಿನಿಮಾ ಕಥೆ ನಡೆಯಲಿದೆ.
ಈಗಾಗಲೇ ಸೆನ್ಸಾರ್ ಕೆಲಸ ಮುಗಿಗಿದ್ದು 'ಗುರುದೇವ್ ಹೊಯ್ಸಳ'ನ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ರಿಲೀಸ್ಗೆ ನಾಲ್ಕು ದಿನ ಬಾಕಿ ಇರುವಾಗಲೇ ಆನ್ಲೈನ್ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರು, ಮೈಸೂರಿನ ಕೆಲವೆಡೆ ಫಸ್ಟ್ ಡೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ವಿಜಯ್ .ಎನ್ ನಿರ್ದೇಶನದ ಈ ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಕಾರ್ತಿಕ್ ಗೌಡ ಹಾಗೂ ಯೀಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಮಿಂಚಿದ್ದಾರೆ.

'ಗುರುದೇವ್ ಹೊಯ್ಸಳ' ಧನಂಜಯ ನಟನೆಯ 25ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ. ಈ ಹಿಂದೆ 'ಸಲಗ' ಚಿತ್ರದಲ್ಲಿ ಖಾಕಿ ಖದರ್ ತೋರಿಸಿದ್ದ ಧನು ಅದಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಗಡಿಭಾಗದಲ್ಲಿ ನಡೆಯುವ ಕಥೆಯಲ್ಲಿ ಕನ್ನಡಭಿಮಾನ ಹಾಗೂ ಗಡಿ ವಿವಾದದ ಬಗ್ಗೆ ಕೂಡ ಚರ್ಚೆ ನಡೆಸಿರುವಂತೆ ಕಾಣುತ್ತಿದೆ. ಆಕ್ಷನ್ ಪ್ಯಾಕ್ಡ್ ಟೀಸರ್, ಟ್ರೈಲರ್ ಸೊಪರ್ ಹಿಟ್ ಆಗಿದೆ. ನವೀನ್ ಶಂಕರ್, KGF ಅವಿನಾಶ್, ಅಚ್ಯುತ್ ಕುಮಾರ್, ರಾಜೇಶ್ ನಟರಾಜ್ ತಾರಾಗಣದಲ್ಲಿದ್ದಾರೆ.
ಮೊದಲಿಗೆ 'ಹೊಯ್ಸಳ' ಹೆಸರಿನಲ್ಲಿ ಸಿನಿಮಾ ಶುರುವಾಗಿತ್ತು. ಆದರೆ ಸೆನ್ಸಾರ್ ವೇಳೆ ಇದೇ ಟೈಟಲ್ನಲ್ಲಿ ಮತ್ತೊಂದು ಸಿನಿಮಾ ನಿರ್ಮಾಣ ಆಗಿ ಸೆನ್ಸಾರ್ ಆಗಿತ್ತು. ಹಾಗಾಗಿ ಚಿತ್ರದಲ್ಲಿದ್ದ ನಾಯಕನ ಸಂಪೂರ್ಣ ಹೆಸರನ್ನೇ ಟೈಟಲ್ ಆಗಿಟ್ಟು ಸೆನ್ಸಾರ್ ಮುಗಿಸಿದೆ ಚಿತ್ರತಂಡ. 'ಗುರುದೇವ್ ಹೊಯ್ಸಳ' ಆಗಿ ಡಾಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಅಚ್ಚರಿ ಅಂದರೆ ಸಿನಿಮಾ ಕಾಲಾವಧಿ 2 ಗಂಟೆ 11 ನಿಮಿಷ ಮಾತ್ರ. ಬಹಳ ಕ್ರಿಸ್ಪಿಯಾಗಿ ಅಷ್ಟೇ ಬಿಗಿಯಾಗಿ ಸಿನಿಮಾ ಕಥೆಯನ್ನು ಕಟ್ಟಿಕೊಟ್ಟಿರೋದು ಗೊತ್ತಾಗುತ್ತಿದೆ.

ಆಕ್ಷನ್ ಎಂಟರ್ಟೈನರ್ ಸಿನಿಮಾಗಳಿಗೆ 2 ಗಂಟೆ 11 ನಿಮಿಷ ಪರ್ಫೆಕ್ಟ್ ಕಾಲಾವಧಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 2 ವಾರಗಳ ಹಿಂದೆ ರಿಲೀಸ್ ಆಗಿದ್ದ 'ಕಬ್ಜ' ಸಿನಿಮಾ 2 ಗಂಟೆ 16 ನಿಮಿಷ ಕಾಲಾವಧಿ ಇತ್ತು. ಅದಕ್ಕಿಂತ 5 ನಿಮಿಷ ಚಿಕ್ಕ ಸಿನಿಮಾ 'ಗುರುದೇವ್ ಹೊಯ್ಸಳ'. ಸದ್ಯ ಧನಂಜಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈಗಾಗಲೇ ಕೆಲವೆಡೆ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಧನು ಕ್ರೇಜ್ಗೆ ತಕ್ಕಂತೆ ಬುಕ್ಕಿಂಗ್ ನಡೀತಿದೆ.
ಬೆಂಗಳೂರಿನ ಕಾವೇರಿ, ಗೋಪಾಲನ್ ಮಲ್ಟಿಪ್ಲೆಕ್ಸ್, ಪಿವಿಆರ್, ವೀರೇಶ್, ವಿಕ್ಟರಿ ಸಿನಿಮಾಸ್ ಸೇರಿದಂತೆ ಹಲವೆಡೆ ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋಗೆ ಸೀಟ್ ಕಾದಿರಿಸುತ್ತಿದ್ದಾರೆ. ಇನ್ನು ಮೈಸೂರಿನ ಹ್ಯಾಬಿಟೆಟ್ ಮಾಲ್, ಶಿವಮೊಗ್ಗದ ಭಾರತಿ ಸಿನಿಮಾಸ್ ಸೇರಿದಂತೆ ಹಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ನಿಧಾನವಾಗಿ ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸಲು ಆರಂಭಿಸಿದ್ದಾರೆ. ಅಭಿಮಾನಿಗಳು ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳಿಗಾಗಿ ಕಾಯುತ್ತಿದ್ಧಾರೆ.
ಟ್ರೈಲರ್ ನೋಡುತ್ತಿದ್ದರೆ ಇದು ಮಾಮೂಲಿ ಕಳ್ಳ - ಪೊಲೀಸ್ ಏಟು ಎದಿರೇಟಿನ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಆದರೆ ಅದನ್ನು ವಿಜಯ್ .ಎನ್ ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎನ್ನುವ ನಿರೀಕ್ಷೆ ಇದೆ. ಇನ್ನು ಕನ್ನಡ ಭಾಷೆಯ ಬಗ್ಗೆ ದೊಡ್ಡದಾಗಿ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಭಾಷಾಭಿಮಾನದ ಅಂಶವನ್ನು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಟರಾಕ್ಷಸನ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











