ಖಿನ್ನತೆ, ಸಾಲ, ರಮ್ಮಿ, ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದೇಕೆ ? ಅಸಲಿ ಸತ್ಯ ಹೇಳಿದ ಪತ್ನಿ ಸುಮಿತ್ರಾ ...!
ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು ಗುರು ಪ್ರಸಾದ್. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಜನ ಮನ ಗೆದ್ದ ಗುರು ಪ್ರಸಾದ್ ತಮ್ಮ ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡಿದ್ದರೆ ಗುರು ಪ್ರಸಾದ್ ಇನ್ನೂ ಎತ್ತರೆತ್ತರಕ್ಕೆ ಬೆಳೆಯಬಹುದಿತ್ತು. ಆದರೆ, ದುರಾದೃಷ್ಟವಶಾತ್ ಹಾಗಾಗಲಿಲ್ಲ. ಮಾನಸಿಕ ಖಿನ್ನತೆಗೆ ಜಾರಿದ್ದ ಗುರುಪ್ರಸಾದ್ ನೇಣಿಗೆ ಕೊರಳೊಡ್ಡಿದರು. ಚಿರನಿದ್ರೆಗೆ ಜಾರಿದರು.
ಇನ್ನು, ಗುರುಪ್ರಸಾದ್ ಅಗಲಿದ ನಂತರ ನವರಸನಾಯಕ ಜಗ್ಗೇಶ್ ಅವರಿಂದ ಹಿಡಿದು ಅನೇಕರು ದಿನಕ್ಕೊಂದು ಮಾತುಗಳನ್ನು ಆಡಿದರು. ಅವರು ರಮ್ಮಿ ಆಡುತ್ತಿದ್ದರಂತೆ ಅಲ್ಲಿಯೇ ಕೋಟಿ ಹಣ ಕಳೆದುಕೊಂಡರಂತೆ, ಅವರಿಗೆ ಸೋರಿಸಿಸ್ ಇತ್ತಂತೆ ಇದರಿಂದ ಮನನೊಂದಿದ್ದರಂತೆ ಎಂದೆಲ್ಲ ಹೇಳಿಕೆಗಳನ್ನು ನೀಡಿದರು. ಈಗ ಈ ಅಂತೆ ಕಂತೆಗಳಿಗೆ ಗುರುಪ್ರಸಾದ್ ಅವರ ಎರಡನೇ ಪತ್ನಿ ಸುಮಿತ್ರಾ ಅವರೇ ಉತ್ತರ ಕೊಟ್ಟಿದ್ದಾರೆ. ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಹೌದು, ಮಾಧ್ಯಮಗಳಿಗೆ ಸಂದೇಶವೊಂದನ್ನು ರವಾನೆ ಮಾಡಿರುವ ಸುಮಿತ್ರಾ ಅವರ ಸ್ನೇಹಿತರ ವರ್ಗಕ್ಕೆ, ಚಿತ್ರರಂಗದ ವರ್ಗಕ್ಕೆ ಮತ್ತು ಮಾಧ್ಯಮದ ವರ್ಗಕ್ಕೆ ಕೆಲ ವಿಚಾರ ಹೇಳಬೇಕು. ನೀವೆಲ್ಲ ನನಗೆ ಸಹಕಾರು ನೀಡುತ್ತೀರಿ ಎಂದು ನಾನು ಅಂದುಕೊಂಡು ಕೆಲ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ನಮ್ಮ ಕುಟುಂಬ ಈಗಾಗಲೇ ಸಾಕಷ್ಟು ನೊಂದಿದೆ. ಕಾರಣ ನಿಮಗೂ ಗೊತ್ತಿದೆ. ವ್ಯಕ್ತಿಯೊಬ್ಬ ನಿಧನರಾದ ಮೇಲೆ ಅವರು ಯಾರೇ ಆದರೂ ಅವರನ್ನು ದೇವರೆಂದು ಪರಿಗಣಿಸುತ್ತಾರೆ. ಈ ಮಾತುಗಳನ್ನು ಹಲವರ ಬಾಯಿಂದ ನಾನು ಕೇಳಿಸಿಕೊಂಡಿದ್ದೇನೆ. ಹೀಗಿರುವಾಗ ಸತ್ಯ ವ್ಯಕ್ತಿಯ ಬಗ್ಗೆ ಇಲ್ಲ ಸಲ್ಲದ ಮಾತುಗಳೇಕೆ ಎನ್ನುವ ಪ್ರಶ್ನೆಯನ್ನು ಸುಮಿತ್ರಾ ಮಾಡಿದ್ದಾರೆ
ಮುಂದುವರೆದು ಗುರು ಪ್ರಸಾದ್ ಅವರಿಗೆ ಕೋಟಿ ಕೋಟಿ ಸಾಲ ಇರಲಿಲ್ಲ ಎಂದಿರುವ ಸುಮಿತ್ರಾ ಆನ್ಲೈನ್ನಲ್ಲಿ ರಮ್ಮಿ ಆಡುವ ಹುಚ್ಚಿತ್ತು. ಆದರೆ ಅದು ಎಷ್ಟಕ್ಕೆ ಬೇಕೋ ಅಷ್ಟು. ತನ್ನ ಬಿಡುವಿನ ಟೈಂಪಾಸ್ಗಾಗಿ. ಗಳಿಸಿದ್ದು ಉಂಟು, ಕಳೆದುಕೊಂಡಿದ್ದು ಉಂಟು. ಅದು ಅತಿರೇಕಕ್ಕೆ ಹೋಗಿರಲಿಲ್ಲ ಎಂದಿದ್ದಾರೆ. ಇನ್ನು ಸಾಲದ ಹೊರೆ ಇತ್ತು ಎನ್ನುವುದಕ್ಕೂ ಉತ್ತರ ನೀಡಿರುವ ಸುಮಿತ್ರಾ ಸಾಲಗಾರ ಎಂದು ಅವರ ಮೇಲೆ ಕೇಸ್ ನಡೆಯುತ್ತಿತ್ತಂತೆ. ಆದರೆ ನಂಬಿಕಸ್ತರಿಂದ ಮೋಸದ ವಂಚನೆ, ಆದರೆ ಅದು ಕಾನೂನು ಮೂಲಕ ಸಾಬೀತಾಗಿರಲಿಲ್ಲ ಎಂದಿದ್ದಾರೆ.
ಇನ್ನು ಗುರುಪ್ರಸಾದ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ನಿಜಾ. ಆದರೆ ಅದಕ್ಕೆ ವೈದ್ಯರ ಸಲಹೆ ಮೇರೆಗೆ ಅವರು ಅದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದಿರುವ ಸುಮಿತ್ರಾ ಅವರಿಗೆ ಒತ್ತಡಗಳ ಕಾಯಿಲೆ, ಸೋರಿಯಾಸಿಸ್ ಚರ್ಮರೋಗ ಯಾವುದೂ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ನಾನು ಮತ್ತೆ ಗರ್ಭಿಣಿ ಆಗಿದ್ದೇನೆ ಎಂಬ ಸುದ್ದಿ ಕೂಡ ಶುದ್ಧ ಸುಳ್ಳು ಎಂದಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವಂತೆ ಗುರುಪ್ರಸಾದ್ ಅವರು ಪ್ರತಿಭಾವಂತರು. ಅವರ ಬರವಣಿಗೆ, ಚಿಂತನೆ, ವ್ಯಕ್ತಿತ್ವ ಎಲ್ಲವೂ ಒಂದು ರೀತಿ ವಿಭಿನ್ನವಾದದ್ದು. ಈ ಕಾರಣದಿಂದಲೇ ಪತಿ ಗುರುಪ್ರಸಾದ್ ಅವರ ಬರವಣಿಗೆ, ಪ್ರತಿಭೆಗೆ, ಯಶಸ್ಸಿಗೆ, ಆತನ ಮಾತುಗಳಿಗೆ ನೀವೆಲ್ಲ ನಕ್ಕು ನಲಿದಿದ್ದೀರಿ. ಅವರು ಅಷ್ಟರಮಟ್ಟಿಗೆ ಚತುರರು ಎನ್ನುವುದು ನಿಮಗೂ ಗೊತ್ತು ಎಂದಿರುವ ಸುಮಿತ್ರಾ ಅವರಲ್ಲಿನ ಕೆಲವೊಂದು ವಿಚಾರ ನಿಮಗೆ ಇಷ್ಟವಾಗಿರಲಿಕ್ಕಿಲ್ಲ. ಯಾಕೆಂದರೆ ಅವರದ್ದು ನೇರ ನುಡಿಯ ವ್ಯಕ್ತಿತ್ವ. ಕೆಲವೊಂದು ವಿಚಾರ ಎಲ್ಲರಿಗೆ ಸರಿ ಅನಿಸಿದ್ದು ಅವರಿಗೆ ಸರಿಯಲ್ಲ ಎನಿಸಿದ್ದು ಕೆಲವೊಬ್ಬರಿಂದ ಮನಸ್ತಾಪಕ್ಕೆ ಒಳಗಾಗಿದ್ದು ಎಲ್ಲವೂ ಉಂಟು. ಇವುಗಳಿಂದ ಖುಷಿಪಟ್ಟವರು ಇದ್ದಾರೆ, ನೋವುಪಟ್ಟವರು ಇದ್ದಾರೆ. ಮನುಷ್ಯ ಅಂದಮೇಲೆ ಸರಿ-ತಪ್ಪು ಕೆಟ್ಟದ್ದು-ಒಳ್ಳೆಯ ಮಾಡಿಯೇ ತೀರುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಎಂದಿದ್ದಾರೆ.
ನನ್ನ ಪತಿ ಕುಡುಕ ಆಗಿದ್ದ. ಆತ ಸರಿ ಇಲ್ಲ, ಹೆಂಡ್ತಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಅದು ಸಮಾಜದಲ್ಲಿ ಎಲ್ಲೆಡೆ ಇರೋದೆ. ಎಲ್ಲರ ಸಂಸಾರದಲ್ಲಿ ನಡೆಯುವುದೇ ಎಂದಿರುವ ಸುಮಿತ್ರಾ ಏನೇ ಹೇಳಿದರೂ ಅದನ್ನು ಅವರು ಬದುಕಿದ್ದಾಗ ಹೇಳುವುದು, ತಪ್ಪುಗಳನ್ನು ತಿದ್ದುವುದು ಪ್ರಾಮಾಣಿಕರ ಹಾಗು ಉತ್ತಮರ ಕೆಲಸ. ಆದರೆ, ಸತ್ತ ನಂತರ ವ್ಯಕ್ತಿಯ ವ್ಯಕ್ತಿತ್ವವನ್ನು ಅವಮಾನಿಸುವುದು ಎಷ್ಟರಮಟ್ಟಿಗೆ ಸರಿ? ಎಂಬ ಪ್ರಶ್ನೆ ಮಾಡಿದ್ದಾರೆ. ಗುರುಪ್ರಸಾದ್ ಮೇಲೆ ಅನೇಕರು ಮಾಡಿದ ಆರೋಪಗಳಿಗೆ ಈ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುಪ್ರಸಾದ್ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯ ಇಲ್ಲ ಎಂದಿರುವ ಸುಮಿತ್ರಾ ಹೆಂಡತಿಯಾಗಿ ನನಗೆ ಯಾವ ವಿಚಾರಗಳು ಸರಿಯಾಗಿ ಖಡಾ ಖಂಡಿತವಾಗಿ ಪೊಲೀಸರು ಇನ್ನು ತಿಳಿಸಿಲ್ಲ. ಅದಕ್ಕೆ ಆದಂತಹ ಸಮಯ ತೆಗೆದುಕೊಂಡಿದ್ದಾರೆ. ನನ್ನ ಕಡೆಯಿಂದ ಸಹಕಾರವು ನಡೆಯುತ್ತಿದ. ಅವರ ಬಳಿ ಐಫೋನ್ ಇರಲಿಲ್ಲ. ಏಳು ಮೊಬೈಲ್ಗಳಂತೂ ಇತ್ತು. ಕೆಲವೊಂದು ಹಳೆಯದ್ದು ಕೆಲವೊಂದು ಹೊಸದು ಎಂದಿದ್ದಾರೆ. ಸಮಾಜಕ್ಕೆ ಯಾವುದೇ ತಪ್ಪು ಮಾಹಿತಿ ಹೋಗಬಾರದೆಂದು ಈ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ.. ಎಂದು ಸುಮಿತ್ರಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.ಇಂತಿ.. ನಿಮ್ಮ ಮನೆಯ ಮಗಳು ಸುಮಿತ್ರಾ ಗುರುಪ್ರಸಾದ್ ಎಂದು ಬರಹವನ್ನು ಮುಗಿಸಿದ್ದಾರೆ.


Click it and Unblock the Notifications











