ಸಾಕಿದರು, ಸಲುಹಿದರು, 8 ವರ್ಷ ಅನ್ನ ನೀಡಿದರು : ಗುರು ಯಶವಂತ ಸರದೇಶಪಾಂಡೆ ನೆನೆದು ಧರ್ಮಣ್ಣ ಕಡೂರ್ ಭಾವುಕ
ಜನರನ್ನು ನಗಿಸುವುದು ಸುಲಭ ಅಲ್ಲ. ತುಂಬಾನೇ ಕಷ್ಟಕರವಾದ ಕೆಲಸ ಅದು. ಇಂತಹ ಕಷ್ಟಕರವಾದ ಕೆಲಸವನ್ನು ಕೆಲವರು ತುಂಬಾ ಸಲೀಸು ಎಂಬಂತೆ ಮಾಡುತ್ತಾರೆ. ನಗುವುದು ಸಹಜವಾದ ಧರ್ಮ. ಮತ್ತೊಬ್ಬರನ್ನು ನಗಿಸುವುದು ಶ್ರೇಷ್ಠಧರ್ಮ ಎಂದು ನಗಿಸುತ್ತಲೇ ಇರುತ್ತಾರೆ. ಈ ಪೈಕಿ ಒಬ್ಬರಾಗಿದ್ದವರು ಯಶವಂತ ಸರದೇಶಪಾಂಡೆ.
ಬದುಕಿನದ್ದೂಕ್ಕೂ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿ ಚಂದಪ್ಪ ಎಂದೇ ಜನ ಜನಿತರಾಗಿದ್ದ ಯಶವಂತ ಸರದೇಶಪಾಂಡೆ ನಿನ್ನೆ ( ಸೆಪ್ಟೆಂಬರ್ 29) ಕಾಲದ ಕರೆಗೆ ಓಗೊಟ್ಟು ಎದ್ದು ಹೊರ ನಡೆದರು. ಅಪಾರ ಆತ್ಮೀಯರನ್ನು.. ಅಭಿಮಾನಿಗಳನ್ನು ಅಗಲಿದರು.

ಇನ್ನೂ ಯಶವಂತ ಸರದೇಶಪಾಂಡೆ ರಂಗ ದಿಗ್ಗಜ. ರಂಗಭೂಮಿಯಲ್ಲಿ ಹತ್ತು ಹಲವು ಪ್ರಯೋಗಗಳನ್ನು ಮಾಡಿದ್ದ ಯಶವಂತ ಸರದೇಶಪಾಂಡೆ ಹಲವರಿಗೆ ದಾರಿ ದೀಪವೂ ಆಗಿದ್ದರು. ಗುರು ಸ್ಥಾನದಲ್ಲಿ ನಿಂತು ಸಾಕಿ ಸಲುಹಿದ್ದರು. ಆ ಪೈಕಿ ಕನ್ನಡದ ಹಾಸ್ಯ ನಟ ಧರ್ಮಣ್ಣ ಕಡೂರ್ ಕೂಡ ಒಬ್ಬರು.
ತಮ್ಮ ಗುರು ಯಶವಂತ ಸರದೇಶಪಾಂಡೆ ಅವರ ಅಗಲಿಕೆಯ ನೋವಲ್ಲಿಯೇ ಧರ್ಮಣ್ಣ ಕಡೂರ್ ಅವರ ನೆನಪುಗಳನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ.
ತಮ್ಮ ಗುರು ಯಶವಂತ ಸರದೇಶಪಾಂಡೆ ಕುರಿತು "ಫಿಲ್ಮಿಬೀಟ್ ಕನ್ನಡ" ಜೊತೆ ಮಾತನಾಡಿರುವ ಧರ್ಮಣ್ಣ "ನನಗೆ ಅವರು ಗುರುಗಳು. ಆದರೆ ಅಣ್ಣನ ಪ್ರೀತಿಯನ್ನು ಅವರು ನನಗೆ ನೀಡಿದ್ದರು. ಪ್ರೀತಿ ವಿಶ್ವಾಸದಿಂದ ನನ್ನ ನೋಡಿದ್ದ ಅವರು ಊಟ ಹಾಕಿದರು. ನಾಟಕಗಳಲ್ಲಿ ಕೆಲಸ ಮಾಡಿದ್ದಕ್ಕೆ ಸಂಭಾವನೆ ಕೊಟ್ಟರು. ನಮ್ಮನ್ನೆಲ್ಲಾ 7-8ವರ್ಷ ಸಾಕಿದರು. ಇವತ್ತು ನಾನು ಏನೇ ಹೆಸರು ಮಾಡಿದ್ದರೂ.. ಇವತ್ತು ಒಂದು ಸ್ಥಾನದಲ್ಲಿದ್ದೀನಿ ಅಂದರೆ ಅದಕ್ಕೆ ಕಾರಣ ಅವರೇ" ಎಂದು ಹೇಳಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.
''ನನಗೆ ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ, ಈ ಕ್ಷಣಕ್ಕೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಮೊನ್ನೆ ಮೊನ್ನೆಯಷ್ಟೇ ಶನಿವಾರ ( ಸೆಪ್ಟೆಂಬರ್ 27 ) ''ಅಮರ ಮಧುರ ಪ್ರೇಮ'' ಅಂತಾ ನಾಟಕ ಮಾಡಿದ್ದರು. ಮಾಲತಿ ಮೇಡಂ ಅವರನ್ನೆಲ್ಲ ಕಳುಹಿಸಿ ನೀವು ಮುಂದೆ ಹೋಗಿ ನಾನು ಬರ್ತೀನಿ ಅಂತಾ ಹೇಳಿದ್ದರು, ಅದ್ರಂತೆಯೇ ನೆಮ್ಮದಿಯಿಂದ ಬಸ್ನಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು'' ಎಂದು ಹೇಳಿದ್ದಾರೆ.

''ಬೆಂಗಳೂರಿಗೆ ಬಂದ ತಕ್ಷಣ ಯಾಕೋ ಎದೆಯುರಿ ಎಂದು ಅವರ ಸ್ನೇಹಿತರ ಸಮ್ಮುಖದಲ್ಲಿ ಅವರು ಹೇಳಿದ್ದರು. ಆ ನಂತರ ಅವರ ಸ್ನೇಹಿತರನ್ನು ಕರೆದುಕೊಂಡು ಆರಾಮಾಗಿಯೇ ಆಸ್ಪತ್ರೆಗೆ ಹೋಗಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಇನ್ನೇನೂ ಎಲ್ಲಾ ಚೆಕ್ಅಪ್ ಮಾಡಬೇಕು ಎನ್ನುವಷ್ಟರಲ್ಲಿ ಅವರ ನಾಡಿಮಿಡಿತ ಸಿಗಲಿಲ್ಲವಂತೆ, ಲೋ ಬಿಪಿ ಆಗಿತ್ತಂತೆ ಗೊತ್ತೇ ಆಗ್ತಿಲ್ಲ ನನಗೆ'' ಎಂದು ಧರ್ಮಣ್ಣ ಹೇಳಿದ್ದಾರೆ.
''ಹೃದಯಕ್ಕೆ ಸಂಬಂಧಿಸಿದಂತೆ ಮೂರು ವರ್ಷದ ಹಿಂದೆ ಅವರಿಗೆ ಆಪರೇಷನ್ ಮಾಡಲಾಗಿತ್ತು, ಅವರಿಗೆ ಸ್ಟಂಟ್ ಹಾಕಿದ್ದರು. ಆದರೂ ಕೂಡಾ ಅವರು ಆರಾಮಾಗಿ ಓಡಾಡಿಕೊಂಡು ನಾಟಕ ಅಂತೆಲ್ಲಾ ಮಾಡ್ತಾ ಇದ್ದರು. ಸಾಕು ಬಿಡಿ ಸರ್ ಈಗ ತಾನೇ ಆಪರೇಷನ್ ಆಗಿದೆ ಸ್ವಲ್ಪ ದಿನ ಆರಾಮಾಗಿರಿ ಎಂದು ನಾವು ಸುಮಾರು ಸಲ ಹೇಳಿದ್ವಿ ಆದರೆ ಆಪರೇಷನ್ ಆಗಿ 20 ದಿನ ಕೂಡ ಆಗಿರಲಿಲ್ಲ ಅಷ್ಟರಲ್ಲಿಯೇ ಅವರು ಕೆಲಸ ಶುರು ಮಾಡಿದ್ದರು'' ಎಂದು ಧರ್ಮಣ್ಣ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿದ್ದಾರೆ.
ಯಶವಂತ ಸರದೇಶಪಾಂಡೆ ಅವರ ಅಗಲಿಕೆಯ ನೋವಲ್ಲಿ ಇರುವ ಧರ್ಮಣ್ಣ ತಮ್ಮ ನೋವನ್ನು ಸೋಶಿಯಲ್ ಮೀಡಿಯಾ ಮೂಲಕ ಕೂಡ ಹೊರ ಹಾಕಿದ್ದು, ಅವರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ. ಧರ್ಮಣ್ಣ ಹಂಚಿಕೊಂಡ ಬರಹ ಈ ಕೆಳಗಿದೆ.
ನನ್ನ ನಾಟಕದ ಗುರುಗಳು ಇನ್ನಿಲ್ಲ- ಧರ್ಮಣ್ಣ
ಬೆಂಗಳೂರಿನಲ್ಲಿ ನನ್ನ ಮೊದಲ ನಾಟಕದ ಹೆಜ್ಜೆ ಇಟ್ಟಿದ್ದು ಇವರ ಗರಡಿಗೆ 2005 ರಲ್ಲಿ. ಅಲ್ಲಿಂದ ಇಲ್ಲಿ ತನಕ ನನ್ನ ಜೊತೆ ನಿಂತಿದ್ದರು. ಸತತ 8 ವರ್ಷ ನನ್ನನ್ನು ಸಾಕಿ ಸಲುಹಿ ರಂಗಭೂಮಿಯ ಆಗುಹೋಗುಗಳನ್ನು ಅಭಿನಯದ ಪಟ್ಟುಗಳನ್ನ ತಿದ್ದಿ ತೀಡಿವದರು. ತಮ್ಮನಂತೆ ನೋಡಿಕೊಂಡು ಎಂತಹ ಕಷ್ಟದ ಪರಿಸ್ಥಿತಿಯನ್ನು ಹೋಗಲಾಡಿಸುವ ಶಕ್ತಿ ತುಂಬಿದವರು. ಇವತ್ತು ನಾನು ಒಂದು ಚಿಕ್ಕ ಹೆಸರು ಎನಾದ್ರೂ ಮಾಡಿದ್ರೆ ಅದಕ್ಕೆ ಪ್ರಮುಖಕಾರಣಿಗರಲಿ ಒಬ್ಬರು.
ಹೊಟ್ಟೆಗೆ ಅನ್ನವನ್ನು ಮತ್ತು ಬದುಕಿಗೆ ಕಲೆಯನ್ನು ತುಂಬಿದವರು ಹೀಗೆ ಒಮ್ಮೆಲೇ ಮರೆಯಾಗಿದ್ದನ್ನು ಜೀವ ತಡೆದುಕೊಳ್ಳುತ್ತಿಲ್ಲ.
ನನ್ನಂತಹ ಇನ್ನೆಷ್ಟೋ ಕಲಾವಿದರನ್ನು ಬೆಳೆಸಬೇಕಾಗಿದ್ದವರು ನೀವು, ಇಷ್ಟು ಬೇಗ ಹೊರಟಿದ್ದು ಕನ್ನಡ ಕಲಾ ಲೋಕಕ್ಕೆ ಆದ ದೊಡ್ಡ ನಷ್ಟ ಸರ್.
ಇರುವಾಗ ವಿದ್ಯಾದಾನ ಮಾಡಿ, ಈಗ ನೇತ್ರದಾನ ಮಾಡಿ ಮತ್ತಷ್ಟು ಮಂದಿಯ ಬದುಕಿಗೆ ಬೆಳಕಾಗಿದ್ದೀರಿ. ನಮಗೆಲ್ಲ ದೊಡ್ಡ ಮಾದರಿಯಾಗಿದ್ದೀರಿ.
ನೀವು ತೋರಿದ ಅಕ್ಕರೆಯೊಂದಿಗೆ, ನಿಮ್ಮ ಕೆಲಸಗಳೊಂದಿಗೆ ನೀವು ಎಂದಿಗೂ ನಮ್ಮೊಂದಿಗೆ ಇರುತ್ತೀರಿ. ಹೋಗಿ ಬನ್ನಿ ಸರ್. ಮತ್ತೆ ಹುಟ್ಟಿ ಬನ್ನಿ ಗುರುಗಳಾಗಿ...


Click it and Unblock the Notifications











