ದಯಾಳ್ ಚಿತ್ರ 'ಹಗ್ಗದ ಕೊನೆ'ಗೆ ಮತ್ತೊಂದು ಗರಿ
ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಹಗ್ಗದ ಕೊನೆ' ಚಿತ್ರ ಮತ್ತೊಂದು ಗರಿಮೆಗೆ ಪಾತ್ರವಾಗಿದೆ. ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ತಮ್ಮ ಚಿತ್ರಕ್ಕೆ ಅನ್ಯಾಯವಾಗಿ ಎಂದು ದಯಾಳ್ ಆರೋಪಿಸಿದ್ದರು. ಈ ಸಂಬಂಧ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರೊಬ್ಬರ ಮೇಲೆ ಅವರು ಆರೋಪಗಳ ಸುರಿಮಳೆಯನ್ನೇ ಮಾಡಿದ್ದರು.
ಇದೀಗ ಅವರ 'ಹಗ್ಗದ ಕೊನೆ' ಚಿತ್ರ ದಾದಾಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ 30ರಂದು ದೆಹಲಿಯಲ್ಲಿ ನಡೆಯಲಿರುವ 6ನೇ ಚಿತ್ರೋತ್ಸವದಲ್ಲಿ ಹಗ್ಗದ ಕೊನೆ ಚಿತ್ರ ಪ್ರದರ್ಶನ ಕಾಣಲಿದೆ. ಈ ಮೂಲಕ ಪ್ರಶಸ್ತಿ ವಂಚಿತ ಚಿತ್ರಕ್ಕೆ ಸ್ವಲ್ಪ ನ್ಯಾಯ ಸಿಕ್ಕಂತಾಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. [ಹಗ್ಗದ ಕೊನೆ ಚಿತ್ರ ವಿಮರ್ಶೆ]

ಈ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೆಹಲಿ, ಅಮೆರಿಕದ ನಾರ್ತ್ ಕೆರೊಲಿನಾ (ಗ್ಲೋಬಲ್ ಫೆಸ್ಟಿವಲ್), ನೊಯ್ಡಾ, ನಾಸಿಕ್ಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಚಿತ್ರರಸಿಕರ ಹೃನ್ಮನ ತಣಿಸಿತ್ತು.
ನೋಯ್ಡಾ ಹಾಗೂ ನಾನಿಕ್ ಚಲನಚಿತ್ರೋತ್ಸವಗಳಲ್ಲಿ ಕ್ರಮವಾಗಿ ಅತ್ಯುತ್ತಮ ಚಿತ್ರ ತೀರ್ಪಗಾರರ ಪ್ರಶಸ್ತಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ತಾನು ಪ್ರಶಸ್ತಿಗಾಗಿ ಬಯಸುತ್ತಿಲ್ಲ, ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದಿದೆಯಲ್ಲಾ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಹಾಗಾಗಿ ಇನ್ನೂ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುತ್ತೇನೆ ಎನ್ನುತ್ತಾರೆ ದಯಾಳ್ ಪದ್ಮನಾಭನ್.
ಖ್ಯಾತ ನಾಟಕಕಾರ ಪರ್ವತವಾಣಿ ಅವರ ಅದೇ ಹೆಸರಿನ ನಾಟಕ ಆಧಾರಿತ ಈ ಚಿತ್ರದಲ್ಲಿ ನವೀನ್ ಕೃಷ್ಣ, ಸುಚೇಂದ್ರ ಪ್ರಸಾದ್, ಮೋಹನ್, ಶ್ರೀನಿವಾಸಮೂರ್ತಿ, ದತ್ತಣ್ಣ, ಸಿಹಿಕಹಿ ಗೀತಾ, ವಿ ಮನೋಹರ್, ಸರಿಗಮ ವಿಜಿ, ಸ್ವಸ್ತಿಕ್ ಶಂಕರ್ ಮುಂತಾದವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











