ದಯಾಳ್ 'ಹಗ್ಗದ ಕೊನೆ' ಚಿತ್ರಕ್ಕೆ ಮತ್ತೊಂದು ಗರಿಮೆ
ದಯಾಳ್ ಪದ್ಮನಾಭನ್ ನಿರ್ದೇಶನದ 'ಹಗ್ಗದ ಕೊನೆ' ಚಿತ್ರ ಮತ್ತೊಂದು ಗರಿಮೆಗೆ ಪಾತ್ರವಾಗಿದೆ. ಈಗಾಗಲೆ ಈ ಚಿತ್ರ ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಇದೀಗ ನೋಯಿಡಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಇದೇ ಫೆಬ್ರವರಿ 14ಕ್ಕೆ ಚಿತ್ರವನ್ನು ನೋಯಿಡಾದಲ್ಲಿ ಪ್ರದರ್ಶಿಸಲಾಗುತ್ತಿದೆ. ಈಗಾಗಲೆ ಈ ಚಿತ್ರ ಬೆಂಗಳೂರು ಮತ್ತು ನವದೆಹಲಿಯ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವುದು ವಿಶೇಷ. [ಹಗ್ಗದ ಕೊನೆ ಚಿತ್ರ ವಿಮರ್ಶೆ]
ಇದು ಖ್ಯಾತ ನಾಟಕಕಾರ ಪರ್ವತವಾಣಿ ಅವರ 'ಹಗ್ಗದ ಕೊನೆ' ನಾಟಕ ಆಧಾರಿತ ಚಿತ್ರವಿದು. ಮರದಂಡನೆಗೆ ಒಳಗಾದ ವ್ಯಕ್ತಿಯೊಬ್ಬನ ತುಮುಲಗಳು, ಪ್ರಶ್ನೆಗಳು, ಭಾವನೆಗಳು, ಮನೋವೇದನೆಗಳು ಪ್ರೇಕ್ಷಕರನ್ನು ಸೀಟಿಗೆ ಆರಾಮವಾಗಿ ಒರಗಿಕೊಂಡು ಚಿಂತನೆಗೆ ಹಚ್ಚುತ್ತವೆ.

ಗಲ್ಲುಶಿಕ್ಷೆ ಬೇಕೆ, ಬೇಡವೆ ಎಂಬ ಬಗ್ಗೆ ಶತಮಾನಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಮರದಂಡನೆ ಎಂದರೆ ಅದೊಂದು ರೀತಿ ವ್ಯವಸ್ಥಿತ ಕೊಲೆ. ಕೊಲೆ ಮಾಡಿರುವ ಅಪರಾಧಿಗೂ ನೇಣುಗಂಬಕ್ಕೆ ದೂಡುತ್ತಿರುವವರಿಗೂ ಏನು ವ್ಯತ್ಯಾಸ? ಎಂಬ ಜಿಜ್ಞಾಸೆಯಲ್ಲಿ ಕಥೆ ಸಾಗುತ್ತದೆ.
ಈ ಚಿತ್ರದ ಹೆಗ್ಗಳಿಕೆ ಎಂದರೆ ತೀವ್ರ ಚಿಂತನೆಗೆ ಹಚ್ಚುವ ಸಂಭಾಷಣೆಗಳು. ಜೊತೆಗೆ ಗೌತಮ್ ಶ್ರೀವತ್ಸ ಅವರ ಹಿನ್ನೆಲೆ ಸಂಗೀತವೂ ಪ್ರಖರವಾಗಿ ಮೂಡಿಬಂದಿದ್ದು ಚಿತ್ರದ ಕಥೆಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಅವರ ಹಿನ್ನೆಲೆ ಸಂಗೀತ ಕಥೆಗೆ ಹೊಸ ಸ್ಪರ್ಶ ನೀಡಿದೆ ಎಂದರೆ ತಪ್ಪಾಗಲಾರದು.
ಪಾತ್ರವರ್ಗದಲ್ಲಿ ನವೀನ್ ಕೃಷ್ಣ, ಸುಚೇಂದ್ರ ಪ್ರಸಾದ್, ಮೋಹನ್, ಶ್ರೀನಿವಾಸಮೂರ್ತಿ, ದತ್ತಣ್ಣ, ಸಿಹಿಕಹಿ ಗೀತಾ, ವಿ ಮನೋಹರ್, ಸರಿಗಮ ವಿಜಿ, ಸ್ವಸ್ತಿಕ್ ಶಂಕರ್ ಮುಂತಾದವರಿದ್ದಾರೆ. ಉಮೇಶ್ ಬಣಕಾರ್ ಮತ್ತು ದಯಾಳ್ ಪದ್ಮನಾಭನ್ ನಿರ್ಮಿಸಿರುವ ಚಿತ್ರಕ್ಕೆ ಪಾಂಡಿಕುಮಾರ್ ಎಸ್ ಛಾಯಾಗ್ರಹಣವಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











