ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿರುವ ಹಳ್ಳಿ ಹೈದ ರಾಜೇಶ್

ರಿಯಾಲಿಟಿ ಶೋದಲ್ಲಿ ರು. 10 ಲಕ್ಷ ಗೆದ್ದಿದ್ದ ರಾಜೇಶ್ ಅವರನ್ನು ನಾಯಕರನ್ನಾಗಿಸಿ ಕಡೂರು ರವಿ ಎಂಬವರು 'ಜಂಗಲ್ ಜಾಕಿ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಎನ್ ಸಿಂಧೂರ್ ಮತ್ತು ಜಿ. ಉಮೇಶ್ ಗೌಡ ಎಂಬವರು ನಿರ್ಮಾಪಕರು.ಆದರೆ ಆ ಚಿತ್ರವಿನ್ನೂ ತೆರೆಕಂಡಿಲ್ಲ. ಈ ಚಿತ್ರದಲ್ಲಿ ರಾಜೇಶ್ ಗೆ ನಾಯಕಿಯಾಗಿ ರಿಯಾಲಿಟಿ ಶೋದಲ್ಲಿ ಸಹವರ್ತಿಯಾಗಿದ್ದ ಐಶ್ವರ್ಯಾ ನಟಿಸಿದ್ದರು. ಅವರೀಗ ಆಸ್ಪತ್ರೆಗೆ ಬಂದು ಮನೋರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಆರೋಗ್ಯ ವಿಚಾರಿಸಿದ್ದಾರೆ.
2010 ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ನಂತರ ರಾಜೇಶ್ ಕರ್ನಾಟಕದ ತುಂಬಾ ಮನೆಮಾತಾಗಿದ್ದರು. ನಂತರ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಿದಮೇಲಂತೂ ಸಹಜವಾಗಿಯೇ ಎಲ್ಲರ ಜೊತೆ ಸ್ವತಃ ಅವರಿಗೂ ಇನ್ನೂ ಹೆಚ್ಚು ನಿರೀಕ್ಷೆ ಮೂಡಿತ್ತು. ಆದರೆ ತಮ್ಮ ನಟನೆಯ ಜಂಗಲ್ ಜಾಕಿ ಚಿತ್ರ ಬಿಡುಗಡೆಯಾಗಿಲ್ಲವೆಂದು ರಾಜೇಶ್ ತೀವ್ರ ತೀವ್ರವಾಗಿ ಖನ್ನರಾಗಿದ್ದರು ಎಂಬ ಮಾಹಿತಿಯಿದೆ.
2 ತಿಂಗಳ ಹಿಂದಷ್ಟೇ ಕೊಡಗಿನ ಕುಟ್ಟ ಗ್ರಾಮದ ಕಾವ್ಯಾ ಎಂಬವರನ್ನು ಮದುವೆಯಾಗಿದ್ದ ರಾಜೇಶ್, ಕಳೆದ 1 ತಿಂಗಳಿನಿಂದ ತಾವು ನಟಿಸಿದ ಚಿತ್ರ ಬಿಡುಗಡೆಯಾಗಿಲ್ಲವೆಂದು ತೀವ್ರವಾಗಿ ನೊಂದು ಹೆಂಡತಿಯ ಜೊತೆ ಜಗಳವಾಡುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರಾಜೇಶ್ ಹೆಂಡತಿ ಕಾವ್ಯಾ ತವರಿಗೆ ಹೋಗಿದ್ದರು. ಈಗ ಆಸ್ಪತ್ರಗೆ ಕೂಡ ಆಕೆಯಾಗಲೀ ಆಕೆ ಕಡೆಯವರಾಗಲೀ ಯಾರೂ ಬಂದಿಲ್ಲ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದಿನಿಂದ ರಾಜೇಶ್ ತಮ್ಮ ಪೋಷಕರ ಜೊತೆ ಮನಬಂದಂತೆ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಎಚ್ ಡಿ ಕೋಟೆ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖಿನ್ನತೆ ಮಿತಿಮೀರಿ ಮಾನಸಿಕ ರೋಗಿಯಂತಾದ ರಾಜೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿರುವ ರಾಜೇಶ್ ಅವರಿಗೆ ಈಗ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











