Hanuman: ಬೇಡಿಕೆ ಇಲ್ಲದಿದ್ರು ಹೈದ್ರಾಬಾದ್ಗಿಂತ ಬೆಂಗಳೂರಿನಲ್ಲೇ 'ಹನುಮಾನ್'ಗೆ ಹೆಚ್ಚು ಶೋ? ಇದ್ಯಾವ ಲೆಕ್ಕ?
ಪರಭಾಷಾ ಸಿನಿಮಾಗಳಿಂದ ಪದೇ ಪದೆ ಕನ್ನಡ ಸಿನಿಮಾಗಳಿಗೆ ಹಿನ್ನಡೆ ಆಗುತ್ತಲೇ ಇದೆ. ಸಂಕ್ರಾಂತಿ ಸಂಭ್ರಮದಲ್ಲಿ ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗದೇ ಪರಭಾಷಾ ಸಿನಿಮಾಗಳ ಹಾವಳಿ ಜೋರಾಗಿತ್ತು. ಇದ್ದಿದ್ದರಲ್ಲೇ ದರ್ಶನ್ ನಟನೆಯ 'ಕಾಟೇರ' 3 ವಾರಗಳಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ.
ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. 'ಗುಂಟೂರು ಖಾರಂ', 'ಸೈಂಧವ್', 'ನಾ ಸಾಮಿರಂಗ' ಸಿನಿಮಾಗಳು ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸದೇ ಇರುವುದು 'ಹನುಮಾನ್' ಚಿತ್ರಕ್ಕೆ ಪ್ಲಸ್ ಆಗಿದೆ. ಪ್ರಶಾಂತ್ ವರ್ಮ ನಿರ್ದೇಶನದ 'ಹನುಮಾನ್' ಯುವ ನಟ ತೇಜ ಸಜ್ಜಾ ಹೀರೊ ಆಗಿ ಮಿಂಚಿದ್ದಾರೆ. ಈ ಸೂಪರ್ ಹೀರೊ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.

ಈಗಾಗಲೇ ವಿಶ್ವದಾದ್ಯಂತ 'ಹನುಮಾನ್' ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಉತ್ತರ ಭಾರತದಲ್ಲಿ 'ಕಾಂತಾರ', 'KGF ಪಾರ್ಟ್-1' ಸಿನಿಮಾಗಳ ದಾಖಲೆ ಮುರಿದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲೂ 'ಹನುಮಾನ್' ಮ್ಯಾಜಿಕ್ ನಡೀತಿದೆ. ಹೈದರಾಬಾದ್ಗಿಂತ ಬೆಂಗಳೂರಿನಲ್ಲಿ 'ಹನುಮಾನ್' ಚಿತ್ರಕ್ಕೆ ಹೆಚ್ಚು ಶೋಗಳು ಸಿಗುತ್ತಿದೆ. ಇದು ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.
ಕರ್ನಾಟಕದ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಶೋಗಳು ಕೊಡಲ್ಲ. ಆದರೆ ಪರಭಾಷಾ ಸಿನಿಮಾಗಳಿಗೆ ಹೆಚ್ಚು ಹೆಚ್ಚು ಶೋ ಸಿಗುವುದು ವಿಪರ್ಯಾಸ. ಎಲ್ಲಕ್ಕಿಂತ ಮುಖ್ಯವಾಗಿ ಬೇಡಿಕೆಗೆ ತಕ್ಕಂತೆ ಪೂರೈಕೆ ಎನ್ನಲಾಗುತ್ತದೆ. ಆದರೆ ಹೈದರಾಬಾದ್ನಲ್ಲಿ ಭಾರೀ ಬೇಡಿಕೆ ಇದ್ದರೂ 'ಹನುಮಾನ್' ಚಿತ್ರಕ್ಕೆ 350 ಶೋಗಳು ಮಾತ್ರ ಸಿಕ್ಕಿದೆ. ಆದರೆ ಬೆಂಗಳೂರಿನಲ್ಲಿ ಅಷ್ಟೇನು ಬೇಡಿಕೆ ಇಲ್ಲದಿದ್ದರೂ 500 ಶೋಗಳನ್ನು ಕೊಟ್ಟಿರುವುದು ಅಚ್ಚರಿ ಮೂಡಿಸಿದೆ.
ದಿನದಿಂದ ದಿನಕ್ಕೆ 'ಹನುಮಾನ್' ಸಿನಿಮಾ ಶೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ನಿಜ. ಆದರೆ ಅವಶ್ಯಕತೆಗಿಂತ ಹೆಚ್ಚು ಶೋಗಳು ಕೊಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಆದರೆ ಕನ್ನಡ ಸಿನಿಮಾಗಳಿಗೆ ಶೋಗಳನ್ನು ಕೊಡಲು ಹಿಂದೇಟು ಹಾಕುವುದೇ ಹೆಚ್ಚು. ಪ್ರೇಕ್ಷಕರು ಬರ್ತಿಲ್ಲ ಎಂದು ಹೇಳಿ ಕನ್ನಡ ಸಿನಿಮಾಗಳನ್ನು ಪದೇ ಪದೆ ಕಿತ್ತು ಹಾಕುವುದನ್ನು ನೋಡಿದ್ದೇವೆ.

ಬೇಡಿಕೆ ಇಲ್ಲದಿದ್ದರೂ ಪರಭಾಷಾ ಚಿತ್ರಗಳನ್ನು ಹೆಚ್ಚು ಹೆಚ್ಚು ಕರ್ನಾಟಕದಲ್ಲಿ ಪ್ರದರ್ಶನ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕನ್ನಡದ ಸಿನಿಮಾಗಳನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡದಿರುವುದು ಇದಕ್ಕೆ ಒಂದು ಕಾರಣ ಎನ್ನಬಹುದು. ಕೆಲವೊಮ್ಮೆ ವೀಕೆಂಡ್ಗಳಲ್ಲಿ ಕನ್ನಡದ ಒಂದೂ ಸಿನಿಮಾ ರಿಲೀಸ್ ಆಗಲ್ಲ. ಮತ್ತೆ ಕೆಲವು ಬಾರಿ ಮೂರ್ನಾಲ್ಕು ಸಿನಿಮಾಗಳನ್ನು ಒಟ್ಟೊಟ್ಟಿಗೆ ತೆರೆಗೆ ತರಲಾಗುತ್ತದೆ.
ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ತೆರೆಗೆ ತರಲು ತಡ ಮಾಡುತ್ತಿದ್ದಾರೆ. ಇದರ ಲಾಭವನ್ನು ಪರಭಾಷಾ ಸಿನಿಮಾಗಳು ಬಳಸಿಕೊಳ್ಳುತ್ತಿವೆ. ಸರಿಯಾದ ರೀತಿಯಲ್ಲಿ ಕನ್ನಡ ಸಿನಿಮಾಗಳ ರಿಲೀಸ್ ಪ್ಲ್ಯಾನ್ ಆಗುತ್ತಿಲ್ಲ. ಎಷ್ಟೋ ಬಾರಿ ಒಂದು ವಾರ ಬಾಕಿ ಇರುವಾಗ ರಿಲೀಸ್ ಡೇಟ್ ಘೋಷಣೆ ಮಾಡುತ್ತಾರೆ. ಇನ್ನು ಪ್ಯಾನ್ ಇಂಡಿಯಾ ಗುಂಗಿನಲ್ಲಿ ಕೆಲವರು ಕಳೆದು ಹೋಗಿದ್ದಾರೆ.
ದೊಡ್ಡ ಸಿನಿಮಾಗಳು ಇಲ್ಲದೇ ಥಿಯೇಟರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದರು. ನಷ್ಟದಿಂದ ಕೆಲ ಚಿತ್ರಮಂದಿರಗಳ ಬಾಗಿಲು ಮುಚ್ಚಿದೆ. 'ಕಾಟೇರ' ಸಿನಿಮಾ ಸಾಕಷ್ಟು ಚಿತ್ರಮಂದಿರದ ಮಾಲೀಕರ ಮೊಗದಲ್ಲಿ ಸಂತಸ ತಂದಿದೆ. ನಮ್ಮದೇ ಮಣ್ಣಿನ ಕಥೆಯ ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಇನ್ನಾದರೂ ಈ ಬಗ್ಗೆ ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಆಲೋಚಿಸಬೇಕಿದೆ.


Click it and Unblock the Notifications











