'ಕೆಜಿಎಫ್' ಪ್ರಶಾಂತ್ ನೀಲ್ ಗೆಲುವಿನ ಹಿಂದಿರುವ ಪ್ರಮುಖ ಅಸ್ತ್ರಗಳು
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ತಂದು ಕೊಡುವಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಪ್ರಮುಖ ಪಾತ್ರ ವಹಿಸಿದರು. ಕೆಜಿಎಫ್ ಎಂಬ ಮೆಗಾ ಸಿನಿಮಾ ನೀಡುವ ಮೂಲಕ ಸ್ಯಾಂಡಲ್ವುಡ್ ತಾಕತ್ ಏನೆಂದು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದರು. ಇದುವರೆಗೂ ಪ್ರಶಾಂತ್ ನೀಲ್ ಮಾಡಿರುವುದು ಎರಡನೇ ಸಿನಿಮಾ. ಉಗ್ರಂ ಮತ್ತು ಕೆಜಿಎಫ್. ಈ ಎರಡು ಚಿತ್ರಗಳು ಹತ್ತು ಚಿತ್ರಗಳಿಗಾಗುವಷ್ಟು ಖ್ಯಾತಿ, ನಂಬಿಕೆ ತಂದುಕೊಟ್ಟಿದೆ.
ರಾಜಮೌಳಿ, ಶಂಕರ್, ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಂತೆ ಪ್ರಶಾಂತ್ ನೀಲ್ ಚಿತ್ರಗಳಿಗೆ ಪ್ರೇಕ್ಷಕರು ಕಾಯುವಂತಹ ವಾತಾವರಣ ಸೃಷ್ಟಿಯಾಗಿದೆ. 'ಪ್ರಶಾಂತ್ ನೀಲ್ ಹಾಲಿವುಡ್ ಚಿತ್ರ ನಿರ್ದೇಶಿಸಬೇಕಾಗಿರುವ ವ್ಯಕ್ತಿ' ಎಂದು ಯಶ್ ಈ ಹಿಂದೆಯೊಮ್ಮೆ ಹೇಳಿದ್ದರು. ಅಂದ್ಹಾಗೆ, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳಲ್ಲಿ ಕೆಲವು ಪ್ರಮುಖ ಅಂಶಗಳಿವೆ. ಇದು ನೀಲ್ ಸಕ್ಸಸ್ಗೆ ಕಾರಣ ಎಂದರೂ ಅಚ್ಚರಿ ಇಲ್ಲ. ಏನದು? ಮುಂದೆ ಓದಿ...

ಕಥೆ ಹೇಳುವಲ್ಲಿ ನೀಲ್ ಜಾಣ
ಒಂದು ಚಿತ್ರಕ್ಕೆ ಕಥೆ ನಿಜವಾದ ಆತ್ಮವಾಗಿರುತ್ತದೆ. ಇದನ್ನು ಚೆನ್ನಾಗಿ ಅರಿತಿರುವ ಪ್ರಶಾಂತ್ ನೀಲ್ ಯಾವುದೇ ಗಡಿ ಹಾಕಿಕೊಳ್ಳದೇ ಎಲ್ಲಾ ಭಾಷಿಗರು, ವರ್ಗ, ಸಮುದಾಯದವರು ನೋಡುವಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕುತೂಹಲಕಾರಿಯಾಗಿ ಚಿತ್ರಕಥೆ ರಚಿಸುತ್ತಾರೆ. ಪ್ರಶಾಂತ್ ಸಿನಿಮಾಗಳು ಅಂದ್ರೆ ಬರಿ ಕನ್ನಡ ಆಡಿಯೆನ್ಸ್ಗೆ ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲೂ ನೋಡಬಹುದು ಎನ್ನುವ ಮಟ್ಟಿಗೆ ನಂಬಿಕೆ ಸೃಷ್ಟಿಸಿಕೊಂಡಿದ್ದಾರೆ. ಉಗ್ರಂ, ಕೆಜಿಎಫ್ ಈಗ ಸಲಾರ್ ಸಹ ಅದೇ ಮಾರ್ಗದಲ್ಲಿದೆ

ನಾಯಕನ ಪಾತ್ರದಲ್ಲಿ ಕ್ರಾಂತಿ
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ನಾಯಕನ ಪಾತ್ರ ಬಹಳ ವಿಶೇಷವಾಗಿರುತ್ತದೆ. ಇಡೀ ಚಿತ್ರಕ್ಕೆ ಆ ಪಾತ್ರವೇ ಪ್ರಧಾನ, ಪ್ರಮುಖವಾಗಿರುತ್ತದೆ. ಉಗ್ರಂ ಚಿತ್ರದಲ್ಲಿ ಶ್ರೀಮುರಳಿ, ಕೆಜಿಎಫ್ ಚಿತ್ರದಲ್ಲಿ ಯಶ್ ಕ್ಯಾರೆಕ್ಟರ್ ಇದಕ್ಕೆ ಸಾಕ್ಷಿ. ಈಗ ಸಲಾರ್ ಚಿತ್ರದಲ್ಲಿ ಪ್ರಭಾಸ್ ಪಾತ್ರವೂ ಅದೇ ರೀತಿಯಲ್ಲಿದೆ. ಮೊದಲ ಪೋಸ್ಟರ್ನಿಂದಲೇ ನೀಲ್ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಹೀರೋ ಎಂಟ್ರಿ, ಲುಕ್, ಡೈಲಾಗ್ಸ್ ಎಲ್ಲದರಲ್ಲೂ ವಿಶಿಷ್ಟತೆ ಮೂಡಿಸುತ್ತಾರೆ.

ಕುತೂಹಲ ಉಳಿಸುವುದು
ಸಿನಿಮಾ ಆರಂಭದಿಂದ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಕತೆ ತೆಗೆದುಕೊಂಡು ಹೋಗುವ ವಿಧಾನ ನೀಲ್ಗೆ ಚೆನ್ನಾಗಿ ತಿಳಿದಿದೆ. ಇದನ್ನು ಕೆಜಿಎಫ್ ಚಾಪ್ಟರ್ 1ರಲ್ಲಿ ಉತ್ತಮವಾಗಿ ನಿಭಾಯಿಸಿದ್ದಾರೆ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಟ್ವಿಸ್ಟ್ ಕೊಟ್ಟ ಕಾರಣಕ್ಕೆ ಎರಡನೇ ಅಧ್ಯಾಯದ ಬಗ್ಗೆ ಇಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಳ್ಳಲು ಸಾಧ್ಯವಾಯಿತು. ಅದಕ್ಕೂ ಮುಂಚೆ ಉಗ್ರಂ ಸಿನಿಮಾ ಮುಗಿದ ಮೇಲೆ ಉಗ್ರಂ 2 ಬರುತ್ತೆ ಎನ್ನುವ ಮಟ್ಟಿಗೆ ಪ್ರೇಕ್ಷಕರಲ್ಲಿ ಕುತೂಹಲ ಉಳಿಸಿದ್ದರು. ಹೀಗೆ, ಕೌತುಕತೆಯ ಮೂಲಕ ನೀಲ್ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಹೊಂದಿದ್ದಾರೆ.

ಕಲಾವಿದರ ಆಯ್ಕೆ ಅದ್ಭುತ
ಪ್ರಶಾಂತ್ ನೀಲ್ ಚಿತ್ರಗಳಲ್ಲಿ ಕಲಾವಿದರ ಆಯ್ಕೆ ಮತ್ತು ಅವರ ಗೆಟಪ್ಗಳು ಇಷ್ಟವಾಗುತ್ತದೆ. ಉಗ್ರಂ ಚಿತ್ರದ ಮೂಲಕ ತಿಲಕ್, ಹರಿಪ್ರಿಯಾಗೆ ಲೈಫ್ ಕೊಟ್ಟರು. ಕೆಜಿಎಫ್ ಚಿತ್ರದಲ್ಲಿ ಯಶ್ಗೆ ನ್ಯಾಷನಲ್ ಸ್ಟಾರ್ ಪಟ್ಟ ಕಟ್ಟಿದರು. ಚಾಪ್ಟರ್ 2ರಲ್ಲಿ ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್ ಸೇರಿದಂತೆ ಸ್ಟಾರ್ ಕಲಾವಿದರನ್ನು ಕರೆತಂದರು. ಸಲಾರ್ ಚಿತ್ರದ ಕಲಾವಿದರ ತಂಡದಲ್ಲೂ ಇಂತಹದ್ದೇ ಪ್ಲಾನ್ ವರ್ಕೌಟ್ ಆಗ್ತಿದೆ.
Recommended Video

ವಾಹ್ ಎನಿಸುವ ಆಕ್ಷನ್ ದೃಶ್ಯಗಳು
ಪ್ರಶಾಂತ್ ನೀಲ್ ನಿರ್ದೇಶನದ ಪ್ರಮುಖ ಅಸ್ತ್ರಗಳಲ್ಲಿ ಒಂದು ಆಕ್ಷನ್ ದೃಶ್ಯಗಳು. ಉಗ್ರಂ, ಕೆಜಿಎಫ್, ಈಗ ಸಲಾರ್ ಚಿತ್ರದಲ್ಲೂ ಆಕ್ಷನ್ ದೃಶ್ಯಗಳಿಗಾಗಿ ಹೆಚ್ಚು ಖರ್ಚು ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ಈ ಆಕ್ಷನ್ ಸೀನ್ ಮೂಡಿಬರಲು ಕೆಲಸ ಮಾಡ್ತಾರೆ. ಈ ಎಲ್ಲಾ ಪ್ರಮುಖ ಅಂಶಗಳಿಂದಲೇ ಪ್ರಶಾಂತ್ ನೀಲ್ ಗೆಲುವು ಸಾಧಿಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











