ಕನ್ನಡದ 'ಸಿಂಪಲ್ ಸ್ಟಾರ್' ಸುಧಾರಾಣಿಗೆ ವಿಶ್ ಮಾಡಿ
ಕನ್ನಡ ಚಿತ್ರರಂಗದ 'ಸಿಂಪಲ್ ಸ್ಟಾರ್' ಪಕ್ಕದ ಮನೆ ಹುಡುಗಿ ಇಮೇಜ್ ಉಳಿಸಿಕೊಂಡಿರುವ ನಮ್ಮ ಮಲ್ಲೇಶ್ವರದ ನಾಯಕಿ 'ಸುಧಾರಾಣಿ' ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗವಲ್ಲದೆ, ಮಲೆಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿರುವ ಹಿರಿ-ಕಿರುತೆರೆಯ ಜನಪ್ರಿಯ ನಟಿ ಸುಧಾರಣಿ ಅವರು ಜನ ಮೆಚ್ಚುಗೆಯ ನಾಯಕಿ
ಬೆಂಗಳೂರಿನ ಮಲ್ಲೇಶ್ವರದಲ್ಲಿ ಆಗಸ್ಟ್ 14,1974ರಲ್ಲಿ ಜನಿಸಿದ ಸುಧಾರಣಿ ಅವರು ಚಿಕ್ಕಂದಿನಿಂದಲೇ ಕಲಾವಿದೆಯಾಗುವ ಲಕ್ಷಣಗಳನ್ನು ತೋರಿದವರು. ಸಣ್ಣ ವಯಸ್ಸಿನಲ್ಲೇ ನೃತ್ಯ ಕಲಿಯತೊಡಗಿ ಯಾವಾಗಲೂ ಕುಣಿಕುಣಿದು ಓಡಿಯಾಡುತ್ತಿದ್ದ ಸುಧಾರಾಣಿ 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು. ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಕೂಚಿಪುಡಿ ಹಾಗೂ ಭರತನಾಟ್ಯ ಕಲಿತರು.
ಮುಂದೆ ಕೇವಲ ಹನ್ನೆರಡು ಹದಿಮೂರರ ಹುಡುಗಿ ಸುಧಾರಾಣಿ, ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ 'ಆನಂದ್' ಚಿತ್ರಕ್ಕೆ ನಾಯಕಿಯಾದರು.
ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.
ತಮ್ಮ ಸಹಜ ನಗೆಮೊಗ, ಸುಂದರ ಅಭಿವ್ಯಕ್ತಿ ಮತ್ತು ಭಾವಾಭಿನಯಗಳಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಪ್ರತಿಭಾವಂತೆ. ಕಳೆದ ವರ್ಷದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಪಿ. ಶೇಷಾದ್ರಿಯವರ 'ಭಾರತ್ ಸ್ಟೋರ್ಸ್' ಚಿತ್ರ ಸುಧಾರಾಣಿ ಅವರ ವರ್ಣರಂಜಿತ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಸುಧಾರಣಿ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...

ಜನಮೆಚ್ಚುಗೆ ಪಡೆದ ನಟಿ
ಕನ್ನಡ ಚಿತ್ರರಂಗದ ನಟರಾದ ಶಿವರಾಜ್ ಕುಮಾರ್, ರಮೇಶ್, ರವಿಚಂದ್ರನ್, ಕುಮಾರ್ ಬಂಗಾರಪ್ಪ, ಕುಮಾರ್ ಗೋವಿಂದು, ರಾಮ್ ಕುಮಾರ್, ಬಾಲರಾಜ್ ಅಲ್ಲದೆ ಹಿರಿಯನಟರಾದ ರಾಜ್ ಕುಮಾರ್, ವಿಷ್ಣುವರ್ಧನ, ಅಂಬರೀಶ್, ಅನಂತನಾಗ್ ಅವರೊಂದಿಗೆ ಕೂಡಾ ಅಭಿನಯಿಸಿ ಜನಮೆಚ್ಚುಗೆ ಪಡೆದಿದ್ದಾರೆ.

ವೈವಿಧ್ಯಮಯ ಪಾತ್ರಧಾರಿ
ಅನುರಾಗ ಸಂಗಮ'ದಲ್ಲಿ ಕಣ್ಣಿಲ್ಲದ ಹುಡುಗಿಯಾಗಿ, ಕೆ. ಎಸ್. ನರಸಿಂಹ ಸ್ವಾಮಿಗಳ ಪ್ರಖ್ಯಾತ ‘ಮೈಸೂರು ಮಲ್ಲಿಗೆ'ಯ ನಗೆ ಮಲ್ಲಿಗೆಯನ್ನು ಚೆಲ್ಲಿದ ಪ್ರೇಮದ ಹುಡುಗಿಯಾಗಿ, ಪಂಚಮ ವೇದ, ಅವನೇ ನನ್ನ ಗಂಡ, ಶ್ರೀಗಂಧ ಅಂತಹ ವಿಭಿನ್ನ ಕಥೆಗಳ ನಾಯಕಿಯಾಗಿ, ನಿನ್ನಂಥ ಅಪ್ಪ ಇಲ್ಲ ಎನ್ನುತ್ತಾ ರಾಜ್ ಅಂತಹ ಹಿರಿಯ ನಟರಿಗೆ ಸರಿಸಮಾನವಾಗಿ ಸುಧಾರಾಣಿ ಹಾಕಿದ ಹೆಜ್ಜೆ ಮುದ ನೀಡುವಂತದ್ದು.

ಪ್ರಶಸ್ತಿ ಪುರಸ್ಕಾರ
ಪಂಚಮವೇದ ಚಿತ್ರದ ನಟನೆಗಾಗಿ 1988ರಲ್ಲಿ ಕರ್ನಾಟಕ ರಾಜ್ಯ ಶ್ರೇಷ್ಠ ನಟಿ ಪ್ರಶಸ್ತಿ, ಮೈಸೂರು ಮಲ್ಲಿಗೆ ಚಿತ್ರದ ಪಾತ್ರಕ್ಕೆ ರಾಜ್ಯ ಹಾಗೂ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಚಿತ್ರರಂಗಕ್ಕಾಗಿ ಸದಾ ಸಿದ್ಧ
ಕನ್ನಡ ಚಿತ್ರರಂಗ ಯಾವುದೇ ಹೋರಾಟಕ್ಕೆ ಮುಂದಾದರೂ ನಾಯಕಿಯರ ಪೈಕಿ ಸುಧಾರಣಿ ಮೊದಲಿಗರಾಗಿ ಕೈ ಜೋಡಿಸಿದ ಉದಾಹರಣೆಗಳಿದೆ. ಚಿತ್ರರಂಗದವರು ನಡೆಸುವ ಕ್ರೀಡಾಕೂಟಗಳು, ಸಾಮಾಜಿಕ ಕಾರ್ಯಗಳಲ್ಲಿ ಸುಧಾರಾಣಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಬ್ರೇಕ್ ಕೊಟ್ಟ ರೀ ಎಂಟ್ರಿ
1995ರಲ್ಲಿ ಕಾವ್ಯ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದ ಸುಧಾರಾಣಿ 1999ರ ತನಕ ಚಿತ್ರರಂಗದಲ್ಲಿ ಇದ್ದರೂ ನಂತರ ಬ್ರೇಕ್ ತೆಗೆದುಕೊಂಡಿದ್ದರು, ಸ್ಪರ್ಶ ಚಿತ್ರದ ಮೂಲಕ ರೀ ಎಂಟ್ರಿ ಪಡೆದು ಫಿಲಂ ಫೇರ್ ಪ್ರಶಸ್ತಿಯನ್ನು ಗಳಿಸಿದರು. ನಂತರ ಅನೇಕ ಉತ್ತಮ ಪೋಷಕ ಪಾತ್ರಗಳು ಇವರನ್ನು ಅರಸಿ ಬಂದವು.

ಶುಭ ಹಾರೈಕೆ
ಸುಧಾರಾಣಿ ಅವರ ಸುಂದರವಾದ ನಗೆ ಅವರೊಂದಿಗೆ ನಿರಂತರವಾಗಿರಲಿ ಅವರ ಪ್ರತಿಭೆಗೆ ಸವಾಲೊಡ್ಡುವ ಇನ್ನಷ್ಟು ಪಾತ್ರಗಳು ಅವರನ್ನು ಹುಡುಕಿಕೊಂಡು ಬರಲಿ, ಹುಟ್ಟುಹಬ್ಬದ ಖುಷಿ ಸದಾ ಇರಲಿ ಎಂದು ಒನ್ ಇಂಡಿಯಾ ತಂಡ ಶುಭ ಹಾರೈಸುತ್ತದೆ.


Click it and Unblock the Notifications











