25 ದಿನ ಪೂರೈಸಿದ 'ಡೇರ್ಡೆವಿಲ್ ಮುಸ್ತಾಫಾ': ಕಲೆಕ್ಷನ್ ಬಗ್ಗೆ ವಿತರಕ ಕಾರ್ತಿಕ್ ಗೌಡ ಹೇಳಿದಿಷ್ಟು
ಶಶಾಂಕ್ ಸೊಗ್ಗಾಲ್ ನಿರ್ದೇಶನದ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಡಾಲಿ ಧನಂಜಯ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಕೆಆರ್ಜಿ ಸ್ಟುಡಿಯೋಸ್ ಜೊತೆ ಸೇರಿ ಡಾಲಿ ಪಿಕ್ಚರ್ಸ್ ಮೂಲಕ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದರು. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಸಣ್ಣ ಕಥೆ ಆಧರಿಸಿ ಮಾಡಿರುವ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.
ತೇಜಸ್ವಿ ಅವರ 100 ಜನ ಅಭಿಮಾನಿಗಳು ಸೇರಿ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಆದಿತ್ಯಾ ಆಶ್ರೀ, ಅಭಯ್, ಸುಪ್ರೀತ್ ಭಾರಧ್ವಜ್, ಆಶಿತ್ ಶ್ರೀವತ್ಸ, ಪ್ರೇರಣಾ, ಎಂ. ಎಸ್ ಉಮೇಶ್, ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಲೆಕ್ಷನ್, ಐಪಿಎಲ್ ಭರಾಟೆನ ನಂತರ ಬಂದ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರಕ್ಕೆ ಪ್ರೇಕ್ಷಕ ಮಹಾ ಪ್ರಭುಗಳು ಜೈ ಎಂದಿದ್ದರು. ರಿಲೀಸ್ಗೂ ಮೊದಲು ಒಂದು ರೂಪಾಯಿ ಟಿಕೆಟ್ ದರದಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು.

ಜನ ಥಿಯೇಟರ್ಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲೂ ಕೂಡ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ನೋಡಲು ಪ್ರೇಕ್ಷಕರು ಬರ್ತಿದ್ದಾರೆ. ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ವಿದೇಶಗಳಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಿದೆ. ಸಂಸದ ಪ್ರತಾಪ್ ಸಿಂಹ, ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ಗಣ್ಯರು ಹೊಸತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಕಾರ್ತಿಕ್ ಗೌಡ ಟ್ವೀಟ್
ಚಿತ್ರದ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ " 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ಇಂದು 25 ದಿನಗಳ ಪೂರೈಸಿದೆ. ಅದರ ಬಜೆಟ್ ಅನ್ನು ಪರಿಗಣಿಸಿ ನೋಡಿದರೆ ಇದು ದೊಡ್ಡ ಯಶಸ್ಸು. ಪ್ರತಿ ಸಿನಿಮಾ ಯಶಸ್ಸು ಕಂಡಿದೆ ಎಂದು ಹಣೆಪಟ್ಟಿ ಕಟ್ಟಲು 10/100 ಕೋಟಿ ಗಳಿಸುವ ಅಗತ್ಯವಿಲ್ಲ. ವಿಭಿನ್ನ ಚಿತ್ರಗಳಿಗೆ ಮಾನದಂಡ ವಿಭಿನ್ನವಾಗಿರುತ್ತದೆ. ವಿತರಕ ಮತ್ತು ಉದ್ಯಮದ ಉತ್ಸಾಹಿಯಾಗಿ ನಾನು ಬಯಸಿದ ಏಕೈಕ ವಿಷಯವೆಂದರೆ ವಾರ ಮೊದಲ 2 ವಾರದಲ್ಲಿ ಇರುವಂತೆ ಪ್ರೇಕ್ಷಕರ ಸಂಖ್ಯೆ 3 ಹಾಗೂ ನಾಲ್ಕನೇ ವಾರದಲ್ಲೂ ಇರಬೇಕು. ದಕ್ಷಿಣದ ಬೇರೆ ಇಂಡಸ್ಟ್ರಿಗಳಲ್ಲಿ ಇದು ನಿಯಮಿತವಾಗಿ ನಡೆಯುತ್ತದೆ. ಈ ಹಾದಿಯಲ್ಲಿ ಸಾಗಲು ಏನು ಮಾಡಬೇಕು ಎಂದು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.
ತೆರಿಗೆ ವಿನಾಯಿತಿಗೆ ಮನವಿ
ಕೋಮು ಸೌಹಾರ್ದತೆ ಸಾರುವ 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರಕ್ಕೆ ತೆರೆಗೆ ವಿನಾಯಿತಿ ಘೋಷಿಸುವಂತೆ ಇತ್ತೀಚೆಗೆ ಚಿತ್ರದ ನಿರ್ದೇಶಕರು, ಕೆಲ ಚಿಂತಕರ ಜೊತೆ ಸೇರಿ ನೂತನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಕಳೆದ ವರ್ಷ 'ದಿ ಕಾಶ್ಮೀರ್ ಫೈಲ್ಸ್', 'ಗಂಧದಗುಡಿ' ಚಿತ್ರಗಳಿಗೆ ಬಿಜೆಪಿ ಸರ್ಕಾರ ತೆರೆಗೆ ವಿನಾಯಿತಿ ಘೋಷಿಸಿತ್ತು.

ಟಿಕೆಟ್ ದರ ಇಳಿಕೆ
ಪ್ರೇಕ್ಷಕರು ಹೆಚ್ಚು ಹೆಚ್ಚು 'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ನೋಡಬೇಕು ಎನ್ನುವ ಕಾರಣಕ್ಕೆ ಚಿತ್ರತಂಡ ಇತ್ತೀಚೆಗೆ ಟಿಕೆಟ್ ದರ ಕಡಿತಗೊಳಿಸಿತ್ತು. ಚಿತ್ರದ ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿ "ಮೇ 6ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾದ ಸಾಮಾನ್ಯ ಟಿಕಿಟ್ ದರ 50 ರೂಪಾಯಿ ಮತ್ತು ಬಾಲ್ಕನಿ ಟಿಕೆಟ್ ದರ 70 ರೂಪಾಯಿ ಆಗಲಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ದರವನ್ನು 99 ರೂಪಾಯಿಗೆ ತಗ್ಗಿಸಲಾಗಿದೆ. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಎಲ್ಲರ ನೆಚ್ಚಿನ ಸಿನಿಮಾದ ಟಿಕೆಟ್ ನೀಡಲಾಗುತ್ತಿದೆ" ಎಂದಿದ್ದರು.
ವಿದೇಶಗಳಲ್ಲೂ 'ಡೇರ್ ಡೆವಿಲ್..
ಸಿನಿಮಾಮರ ಬ್ಯಾನರ್ನಲ್ಲಿ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ನಿರ್ಮಾಣವಾಗಿದೆ. ರಾಜ್ಯ ಹಾಗೂ ಹೊರ ದೇಶಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಗೆಲುವಿನ ಸಂಭ್ರಮ ಹಂಚಿಕೊಂಡಿತ್ತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕಾ, ಯುರೋಪ್ ದೇಶದಲ್ಲಿ ರಿಲೀಸ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಯ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.


Click it and Unblock the Notifications











