ಹರ್ಷಿಕಾ, ಭುವನ್ ಮದುವೆಯಲ್ಲಿ ಊಟದ ಗಮ್ಮತ್ತು! ಶುಭ ಹಾರೈಸಿದ ಯಡಿಯೂರಪ್ಪ, ದೊಡ್ಡಣ್ಣ
ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕುಟುಂಬಸ್ಥರ ಆಶೀರ್ವಾದದೊಂದಿಗೆ ಸತಿ ಪತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಸಮಾರಂಭ ನಡೆದಿದೆ. ಕುಟುಂಬಸ್ಥರು, ಬಂಧು ಬಳಗವರು, ಗಣ್ಯರ ಸಮ್ಮುಖದಲ್ಲಿ ಜೋಡಿ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದು, ತಮ್ಮ ದಶಕಗಳ ಪ್ರೀತಿಗೆ ಮದುವೆಯ ಮೂಲಕ ಹೊಸ ಅರ್ಥ ನೀಡಿದೆ. ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು, ಕೊಡವ ಸಮುದಾಯದಲ್ಲಿ ಆರತಕ್ಷತೆ ಸಂಪ್ರದಾಯ ಇಲ್ಲದ ಕಾರಣ ಯಾವುದೇ ರಿಸೆಪ್ಷನ್ ಇರುವುದಿಲ್ಲ ಎಂದು ತಿಳಿದುಬಂದಿದೆ.

ಹರ್ಷಿಕಾ- ಭುವನ್ ಮದುವೆ ಊಟದ ಗಮ್ಮತ್ತು!
ಕೊಡವ ಜೋಡಿಯ ಮದುವೆಯಲ್ಲಿ ಬಗೆ ಬಗೆಯ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆ ಬಂದ ಅತಿಥಿಗಳಿಗಾಗಿ ವೆಜ್ ಮತ್ತು ನಾನ್ ವೆಜ್ ಎರಡು ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ಕೊಡವ ಶೈಲಿಯ ನೂಪಟ್ಟು, ಪೋರ್ಕ್ ಪ್ರೈ, ಪೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಪ್ರೈ, ಚಿಕನ್ ಪ್ರೈ ಅತಿಥಿಗಳ ಹೊಟ್ಟೆ ತುಂಬಿಸಿದೆ.
ಇನ್ನು, ಸಸ್ಯಹಾರದಲ್ಲಿಯೂ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಲಾಗಿತ್ತು. ವೆಜಿಟೇಬಲ್ ಪಲಾವ್, ಆಲಸಂಡೆ ಪಲ್ಯ, ಬೆಂಡೆ ಪ್ರೈ, ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಸೇರಿ ಮಾಮೂಲಿಯಂತೆ ಅನ್ನ ಸಾಂಬಾರ್ ಎಲ್ಲವನ್ನೂ ಸಿದ್ಧ ಮಾಡಲಾಗಿತ್ತು.

ಹರ್ಷಿಕಾ- ಭುವನ್ ಮದುವೆಯಲ್ಲಿ ಅತಿಥಿಗಳ ದಂಡು
ನಟ ಭುವನ್ - ಹರ್ಷಿಕಾ ಮದುವೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಸುಧಾಕರ್, ಮುರುಗೇಶ್ ನಿರಾಣಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದ್ದಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಕುಟುಂಬ ಸಮೇತರಾಗಿ ಮದುವೆ ಬಂದು ಶುಭ ಹಾರೈಸಿದ್ದಾರೆ. ಹಿರಿಯ ನಟ ದೊಡ್ಡಣ್ಣ, ತಬಲಾ ನಾಣಿ, ನಟಿ ಅನುಪ್ರಭಾಕರ್, ಅವರ ಪತಿ ರಘು ಮುಖರ್ಜಿ ಮದುವೆಯಲ್ಲಿ ಹಾಜರಿದ್ದರು.
ಕೊಡವ ಸಂಪ್ರದಾಯದಂತೆ ಹರ್ಷಿಕಾ ಮದುವೆ
ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಮದುವೆ ಕೊಡವ ಪದ್ಧತಿಯಂತೆ ನಡೆದಿದೆ. ಆಗಸ್ಟ್ 23 ರಿಂದ ಎರಡು ದಿನ ನಡೆದ ಕೊಡವ ಶೈಲಿಯ ಅದ್ದೂರಿ ವಿವಾಹಕ್ಕೆ ಅತಿಥಿಗಳು ಸಾಕ್ಷಿಯಾಗಿದ್ದಾರೆ. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆದಿದೆ. ಊರು ಕೂಡುವ ಶಾಸ್ತ್ರದ ದಿನವೆ ಹರ್ಷಿಕಾಗೆ ಅವರ ತಾಯಿ ಮಾಂಗಲ್ಯದಾರಣೆ ಮಾಡಿದ್ದಾರೆ. ಕೊಡವ ಸಂಪ್ರದಾಯದಲ್ಲಿ ಗಂಡು-ಹೆಣ್ಣಿಗೆ ತಾಳಿ ಕಟ್ಟುವ ಶಾಸ್ತ್ರ ಇರುವುದಿಲ್ಲ.
ಇದಾದ ನಂತರ ಮದುಮಕ್ಕಳು ಒಬ್ಬರನ್ನೊಬ್ಬರು ನೋಡುವ ಹಾಗಿಲ್ಲ. ಹೀಗಾಗಿ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನಡೆದಿದೆ. ಎರಡನೇ ದಿನ ಬೆಳಗ್ಗೆ ಬಳೆ ಶಾಸ್ತ್ರ, ನಂತರ ಪೊಂಬಣ ಪೂಜೆ ಅಂದರೆ ವರ ಪೂಜೆ ರೀತಿಯಲ್ಲಿ ನಡೆಯುತ್ತದೆ. ಹುಡುಗ ಮಂಟಪಕ್ಕೆ ಬಂದ ನಂತರ ಬಾಳೆ ಗಿಡ ಕಟ್ ಮಾಡಿಕೊಂಡು ಬರುತ್ತಾರೆ ಅವರನ್ನು ಹುಡುಗಿ ಮನೆಯವರು ಕರೆದುಕೊಂಡು ಮಂಟಪಕ್ಕೆ ಕರೆದುಕೊಂಡು ಹೋಗುತ್ತಾರೆ.
ಮದುಮಗನಿಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸುತ್ತಾರೆ. ಇದಾದ ಬಳಿಕ ಎಡಬದಿಯಲ್ಲಿ ವಧು ಹಾಗೂ ಬಲಗಡೆಯಲ್ಲಿ ವರನನ್ನು ಮೂರು ಕಾಲಿನ ಮಣೆ ಹಾಕಿ ಕೂರಿಸಿ, ಸಾಂಪ್ರದಾಯಿಕ ರೀತಿಯ ಶಾಸ್ತ್ರವನ್ನು ಮಾಡುತ್ತಾರೆ. ಮದುವೆಗೆ ಬಂದವರು ಈ ವೇಳೆ ಇಬ್ಬರ ಮೇಲೂ ಅಕ್ಷತೆ ಹಾಕಿ ಆಶೀರ್ವಾದ ಮಾಡುತ್ತಾರೆ.
ಸ್ಯಾಂಡಲ್ವುಡ್ ಜೋಡಿ ಮದುವೆಯಲ್ಲಿ ಕೊಡವ ಲುಕ್ನಲ್ಲಿ ಮಿಂಚಿದ್ದಾರೆ. ನಟಿ ಹರ್ಷಿಕಾ ಕೆಂಪು ಬಣ್ಣದ ಸೀರೆ ಧರಿಸಿದ್ದರೇ, ಭುವನ್ ಕೊಡವ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಬುಧವಾರ ರಾತ್ರಿ ಮೆಹಂದಿ ಶಾಸ್ತ್ರ ನಡೆದಿದ್ದು, ಅತಿ ಸರಳವಾಗಿ ನಟಿ ಹರ್ಷಿಕಾ ಪೂಣಚ್ಚ ಮೆಹಂದಿ ಹಾಕಿಸಿಕೊಂಡಿದ್ದರು.


Click it and Unblock the Notifications











