ಕಾವೇರಿ ಬಂದ್ ಬೆಂಬಲಿಸಿದ ಶಿವಣ್ಣ ಹೇಳಿದ್ದೇನು?
ಈ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿರುವ ಶಿವರಾಜ್ ಕುಮಾರ್ "ಕಾವೇರಿ ಹೋರಾಟಕ್ಕೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಎಂದೂ ಕನ್ನಡಿಗರು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಹೋರಾಟಕ್ಕೆ ನಾಡಿನ ಎಲ್ಲಾ ಜನರೂ ಕೈಜೋಡಿಸಿ ಸಹಕರಿಸಬೇಕು.
ಅಲ್ಲದೇ ಇಲ್ಲಿ ನೆಲೆಸಿರುವ ಬೇರೆ ಭಾಷೆಗಳ ಜನರೂ ಹೋರಾಟದಲ್ಲಿ ಭಾಗಿಯಾಗಬೇಕು. ಆ ಮೂಲಕ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಬಲ ತುಂಬಬೇಕು. ಇದು ಯಾವುದೇ ಒಂದು ರಾಜ್ಯದ ವಿರುದ್ಧ ಹೋರಾಟವಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಇದು ಬರೀ ಕನ್ನಡಿಗರಿಗೆ ಮಾತ್ರ ಸೇರಿದ್ದಲ್ಲ. ಕರ್ನಾಟಕದಲ್ಲಿರುವ ಎಲ್ಲಾ ಭಾಷೆಯ ಜನರೂ ಈ ಹೋರಾಟಕ್ಕೆ ಧುಮುಕಬೇಕು.
ನಮ್ಮ ನಾಯಕರು ಸರಿಯಾದ, ಒಳ್ಳೆಯ ನಿರ್ಣಯ ತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕು. ಅದು ಬಿಟ್ಟು ಸಾರ್ವಜನಿಕರು ಬಗೆಹರಿಸಬೇಕು. ಅದು ಬಿಟ್ಟು ಸಾರ್ವಜನಿಕರು ಬೀದಿಗಿಳಿಯುವಂತೆ ಮಾಡುವುದು ಸರಿಯಲ್ಲ. ಕಾವೇರಿ ಯಾವತ್ತಿದ್ದರೂ ನಮ್ಮದು. ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ನಮ್ಮ ಈ ಕನ್ನಡಪರ ಹೋರಾಟಕ್ಕೆ ನಾವು ಯಾವತ್ತಿಗೂ ಸಿದ್ಧ. ಆದರೆ ಶಾಂತಿಯುತವಾಗಿ ಹೋರಾಡಿ ನ್ಯಾಯ ನಮ್ಮದಾಗಿಸಿಕೊಳ್ಳೋಣ" ಎಂದು ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












