'ಕಾಂತಾರ' ಸಿನಿಮಾ ನೋಡಿ ರಿಷಬ್ ಶೆಟ್ಟಿ ಎದುರಿಗೆ ಸಿಕ್ಕರೆ ಕಾಲಿಗೆ ಬೀಳ್ತೀನಿ ಎಂದ 'ಧಿಮಾಕಿ'ನ ನಟ!
ಎಲ್ಲೆಲ್ಲೂ 'ಕಾಂತಾರ' ಕಿಚ್ಚು ಜೋರಾಗಿದೆ. ಸಿನಿಮಾ ನೋಡಿದವರೆಲ್ಲಾ ರಿಷಬ್ ಶೆಟ್ಟಿ ಪ್ರಯತ್ನಕ್ಕೆ ಜೈಕಾರ ಹಾಕುತ್ತಿದ್ದಾರೆ. 7ನೇ ದಿನವೂ ಸಿನಿಮಾ ಎಲ್ಲಾ ಕಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡಿದ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಗಾಯಕ ವಿಜಯ್ ಪ್ರಕಾಶ್ ಸಿನಿಮಾ ನೋಡಿ ಕೊಂಡಾಡಿದ್ದರು. ಇದೀಗ ನಟ ನವೀನ್ ಕೃಷ್ಣ ಕೂಡ 'ಕಾಂತಾರ' ಮೋಡಿಗೆ ಫಿದಾ ಆಗಿದ್ದು ರಿಷಬ್ ಶೆಟ್ಟಿಗೆ ಹ್ಯಾಟ್ಸಾಪ್ ಎಂದಿದ್ದಾರೆ.
ಪ್ರಪಂಚದ ಮೂಲೆ ಮೂಲೆಯಲ್ಲಿ 'ಕಾಂತಾರ' ಸಿನಿಮಾ ಸದ್ದು ಮಾಡುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಕ್ಲಾಸ್ ಮಾಸ್ ಎನ್ನುವ ಭೇದಭಾವ ಇಲ್ಲದೇ ಎಲ್ಲರೂ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರ್ತಿದ್ದಾರೆ. ಇನ್ನು ಹಿಂದಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದ್ದು, ಬಾಲಿವುಡ್ನ ದೊಡ್ಡ ಡಿಸ್ಟ್ರಿಬ್ಯೂಷನ್ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಇನ್ನಷ್ಟು ಜೋರಾಗಿ ಸದ್ದು ಮಾಡುವ ಸಾಧ್ಯತೆಯಿದೆ. ಕನ್ನಡ ಅರ್ಥ ಆಗದೇ ಇರುವವರು ಕೂಡ 'ಕಾಂತಾರ' ಸಿನಿಮಾ ನೋಡಿ ಬಹುಪರಾಕ್ ಹೇಳುತ್ತಿದ್ದಾರೆ.
ಹಿರಿಯ ನಟ ಶ್ರೀನಿವಾಸ್ ಮೂರ್ತಿ ಪುತ್ರ ನಟ ನವೀನ್ ಕೃಷ್ಣ ಕೂಡ 'ಕಾಂತಾರ' ಸಿನಿಮಾ ನೋಡಿ ಬೆರಗಾಗಿದ್ದಾರೆ. "ರಿಷಬ್ ಶೆಟ್ಟಿಯವರೇ ನೀವ್ ಎದುರಿಗೆ ಸಿಕ್ಕ್ರೆ ಖಂಡಿತ ನಿಮ್ಮ ಕಾಲ್ ಮುಗಿವೆ. ಅದು ನಿಮಗಲ್ಲ ನಿಮ್ಮ ಕಲೆಗೆ. " ನನ್ನ ಕಾಡ ಮಕ್ಕಳನ್ನ ನಿನ್ನ ಮಡಿಲಿಗೆ ಹಾಕುತ್ತಿರುವೆ ತಾಯಿಯ ಹಾಗೆ ಕಾಪಾಡು ಅಂತ ಮಾತು ತೊಗೋತೀರಲ್ಲಾ. ಅದು ಅಭಿನಯ ಅಲ್ಲವೇ ಅಲ್ಲಾ. ಜೀವಿಸಿದ ಕಲೆಗಾರ ರಿಷಬ್ ಶೆಟ್ಟಿ" ಎಂದು ನವೀನ್ ಕೃಷ್ಣ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ನವೀನ್ ಕೃಷ್ಣ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಧನ್ಯವಾದ ಸರ್ ಎಂದು ಬರೆದುಕೊಂಡಿದ್ದಾರೆ. ನವೀನ್ ಕೃಷ್ಣ ಕೂಡ ಒಬ್ಬ ನಟರಾಗಿ ಮತ್ತೊಬ್ಬ ನಟನ ಕೆಲಸವನ್ನು ಮೆಚ್ಚಿಕೊಂಡಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನವೀನ್ ಕೃಷ್ಣ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಅವರು ಪುಟ್ಟ ಪಾತ್ರದಲ್ಲಿ ನಟಿಸಿದ್ದ 'ಕಟಿಂಗ್ ಶಾಪ್' ಸಿನಿಮಾ ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ನಟ ನವೀನ್ ಕೃಷ್ಣ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇವತ್ತಿಗೂ ಅವರ ಕೇಳಿದ ತಕ್ಷಣ ಕನ್ನಡ ಸಿನಿರಸಿಕರಿಗೆ ನೆನಪಾಗೋದು 'ಧಿಮಾಕು' ಸಿನಿಮಾ.

2008ರಲ್ಲಿ ತೆರೆಕಂಡಿದ್ದ 'ಧಿಮಾಕು' ಚಿತ್ರದಲ್ಲಿ ನವೀನ್ ಕೃಷ್ಣ ಬಹಳ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಸ್ವತಃ ಅವರ ತಾಯಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆದರೆ ಸಿನಿಮಾ ಕಮರ್ಷಿಯಲ್ಲಾಗಿ ಸೋಲುಂಡಿತ್ತು. ಇದರಿಂದ ಸಾಲದ ಸುಳಿವು ಸಿಲುಕುವಂತಾಗಿತ್ತು. ಇತ್ತೀಚೆಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಜೊತೆ ಸೇರಿ ನವೀನ್ ಕೃಷ್ಣ ಒಂದಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡಿದರು. ಆದರೂ ಪ್ರೇಕ್ಷಕರು ಅವರನ್ನು 'ಧಿಮಾಕು' ನವೀನ್ ಕೃಷ್ಣ ಎಂದೇ ಗುರ್ತಿಸುತ್ತಾರೆ. ಇವತ್ತಿಗೂ ಅಂತಹದ್ದೇ ಸಿನಿಮಾ ಮಾಡಿ ಎಂದು ಅವರನ್ನು ಕೇಳುತ್ತಿರುತ್ತಾರೆ.


Click it and Unblock the Notifications











