ಅಪ್ಪು ಅಗಲಿಕೆ.. ಚಿತ್ರರಂಗದಲ್ಲಿ ಹೀರೊಗಳ ಕೊರತೆ.. ಇಂಡಸ್ಟ್ರಿಯಲ್ಲಿ ನಿಖಿಲ್ ಇದ್ದರೆ ಸೂಕ್ತ.. ಹೆಚ್ಡಿಕೆ ಮಾತಿನ ಮರ್ಮವೇನು?
ನಿಖಿಲ್ ಕುಮಾರಸ್ವಾಮಿ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಲೈಕಾ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇನ್ನು ಹೆಸರಿಡದ ಈ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ನಿರ್ಮಾಣವಾಗಲಿದ್ದು 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಈ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಭಾಗಿ ಆಗಿದ್ದರು.
ನಿಖಿಲ್ ಹೊಸ ಚಿತ್ರಕ್ಕೆ ಹಾರೈಸಲು ತಂದೆ ಕುಮಾರಸ್ವಾಮಿ ಜೊತೆಗೆ ತಾನ ಮಾಜಿ ಪ್ರಧಾನಿ ದೇವಗೌಡರು ಹಾಜರಾಗಿದ್ದರು. ಇನ್ನು ಮುಹೂರ್ತ ಸಮಾರಂಭದಲ್ಲಿ ಹೆಚ್. ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಬಹಳ ಹೊತ್ತು ಮಾತನಾಡಿದರು. ಸಿನಿಮಾ ವಿತರಕರಾಗಿ ನಿರ್ಮಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಹೆಚ್. ಡಿ ಕುಮಾರಸ್ವಾಮಿ ಬಳಿಕ ರಾಜಕೀಯರಂಗಕ್ಕೆ ಧುಮುಕಿದರು. ಚಿತ್ರರಂಗದ ತಮ್ಮ ದಿನಗಳನ್ನು ನೆನಪಿಸಿಕೊಂಡರು. ತಾವು ನಿರ್ಮಿಸಿದ, ವಿತರಿಸಿದ ಸಿನಿಮಾಗಳ ಬಜೆಟ್, ಕಲೆಕ್ಷನ್ ಲೆಕ್ಕ ತೆಗೆದಿಟ್ಟರು.

ಕುಮಾರಸ್ವಾಮಿ ಮಾತನಾಡುತ್ತಾ "ನನ್ನ ಮಗನಿಗೆ ರಾಜಕೀಯರಂಗಕ್ಕೆ ಬರಬೇಡ ಎಂದು ಸಲಹ ನೀಡಿದ್ದೆ. ನನ್ನ ಮಾತು ಕೇಳಿ ಚಿತ್ರರಂಗಕ್ಕೆ ಬಂದ. ಅವನಿಗಾಗಿ 'ಜಾಗ್ವಾರ್' ಸಿನಿಮಾ ಮಾಡಿದ್ವಿ. ಬಳಿಕ 'ಸೀತಾರಾಮ ಕಲ್ಯಾಣ' ಸಿನಿಮಾ ನಿರ್ಮಾಣ ಮಾಡಿದ್ವಿ. ಆಗ ಸಾಕಷ್ಟು ದಿಗ್ಗಜರು ಹೇಳಿದರು. ಮಗನನ್ನು ರಾಜಕೀಯಕ್ಕೆ ಕಳುಹಿಸಬೇಡಿ ಅಂತ. ನಾನು ಕೂಡ ಹೇಳಿದ್ದೆ ರಾಜಕೀಯಕ್ಕೆ ಬರಬೇಡ ಅಂತ. 4 ವರ್ಷ ಸಮಯ ವ್ಯರ್ಥ ಮಾಡಿದ್ದಾನೆ" ಎಂದರು.
"ಪುನೀತ್ ರಾಜ್ಕುಮಾರ್ ಅಕಾಲಿಕವಾಗಿ ಮರಣ ಹೊಂದಿದರು. ಚಿತ್ರರಂಗಕ್ಕೆ ಪುನೀತ್ ಕೊಡುಗೆ ಅಪಾರ. ಸಾಕಷ್ಟು ನಿರ್ಮಾಪಕರಿಗೆ ಅವನ ನಟನೆಯಿಂದ ಅನುಕೂಲವಾಗಿತ್ತು. ಒಬ್ಬ ಉತ್ತಮವಾದ ಕಲಾವಿದನನ್ನು ನಾವು ಬಹಳ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡಿದ್ದೇವೆ. ನನಗೆ ಸಾಕಷ್ಟು ಜನ, ಚಿತ್ರರಂಗದ ಮಾಲೀಕರು, ಸಿನಿಮಾಗಳ ಬಗ್ಗೆ ಆಸಕ್ತಿ ಇರುವವರು ಹೇಳುತ್ತಿರುತ್ತಾರೆ. ಆ ಘಟನೆ ಬಳಿಕ ನಿಖಿಲ್ಗೆ ಸೀರಿಯಸ್ ಆಗಿ ಹೇಳಿ, ಕನ್ನಡ ಚಿತ್ರರಂಗದಲ್ಲಿ ಹೀರೊಗಳ ಕೊರತೆ ಇದೆ. ಅವರು ಚಿತ್ರರಂಗದಲ್ಲಿ ಇದ್ದರೆ ಸೂಕ್ತ ಎಂದು ಬಹಳ ಜನ ಹೇಳಿದರು" ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ಪುನೀತ್ರಿಂದ ತೆರವಾದ ಸ್ಥಾನಕ್ಕೆ ನಿಖಿಲ್ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ ನಿಖಿಲ್- ಲೈಕಾ ಸಂಸ್ಥೆಯ ಚಿತ್ರಕ್ಕೆ ಲಕ್ಷ್ಮಣ್ ಆಕ್ಷನ್ ಕಟ್ ಹೇಳಲಿದ್ದಾರೆ. ಯುಕ್ತಿ ತರೇಜಾ ನಾಯಕಿಯಾಗಿ ನಿಖಿಲ್ಗೆ ಸಾಥ್ ಕೊಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಹಾಸ್ಯ ನಟ ಕೋಮಲ್ ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications










