ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನಕ್ಕೆ ಎಚ್ ಡಿ ಕುಮಾರಸ್ವಾಮಿ ಸಂತಾಪ
ರಾಜನ್ ನಾಗೇಂದ್ರ ಖ್ಯಾತಿಯ ಸಂಗೀತ ನಿರ್ದೇಶಕ ರಾಜನ್ ನಿನ್ನೆ (ಅಕ್ಟೋಬರ್ 12) ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜನ್- ನಾಗೇಂದ್ರ ಸಹೋದರರ ಪೈಕಿ ರಾಜನ್ ಹಿರಿಯರಾಗಿದ್ದರು. 85 ವರ್ಷದ ರಾಜನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ರಾಜನ್ ಮತ್ತು ನಾಗೇಂದ್ರ ಅವರು 1950 ರಿಂದ1990ರ ವರೆಗೂ ಮೆಲೋಡಿ ಕಿಂಗ್ ಎನಿಸಿಕೊಂಡಿದ್ದ ಖ್ಯಾತ ಸಂಗೀತ ಸಂಯೋಜಕರು. ಇವರಿಬ್ಬರು ಸುಮಾರು 375ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಜೋಡಿ ಕನ್ನಡದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ರಾಜನ್ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. "ಖ್ಯಾತ ಸಂಗೀತ ನಿರ್ದೇಶಕ ರಾಜನ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಕನ್ನಡದಲ್ಲಿ 175 ಕ್ಕೂಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಖ್ಯಾತಿ ರಾಜನ್-ನಾಗೇಂದ್ರ ಜೋಡಿಯದ್ದಾಗಿತ್ತು" ಎಂದಿದ್ದಾರೆ.

"ಗಂಧದಗುಡಿ, ಬಯಲುದಾರಿ, ಎರಡುಕನಸು, ಹೊಂಬಿಸಿಲು, ಆಟೋರಾಜ ಸೇರಿ ಹಲವಾರು ಚಿತ್ರಗಳ ಸಂಗೀತ ನಿರ್ದೇಶನ ಮಾಡಿದ್ದ ಅವರು ಕನ್ನಡ ಚಿತ್ರರಂಗದ ಸಂಗೀತದ ಘನತೆಯನ್ನು ಹೆಚ್ಚಿಸಿದ್ದವರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜನ್ ಕೊಡುಗೆಯನ್ನು ಸ್ಮರಿಸಿದ್ದಾರೆ.
ನಾಲ್ಕು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ರಾಜನ್-ನಾಗೇಂದ್ರ ಜೋಡಿ ಅಸಂಖ್ಯಾತ ಹಿಟ್ಸ್ ಹಾಗೂ ನೂರಾರು ಸುಮಧುರ ಹಾಡುಗಳನ್ನು ರಚಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ, ತುಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಸಂಗೀತ ನೀಡಿದ್ದಾರೆ.


Click it and Unblock the Notifications











