ಇಂದ್ರಜಿತ್ ಭೇಟಿಯ ಫೋಟೋ ವೈರಲ್ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿಯ ಫೋಟೋ ವೈರಲ್ ಆದ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 'ಯಾಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ, ನೂರಾರು ಜನ ನನ್ನ ಭೇಟಿ ಮಾಡುತ್ತಾರೆ, ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಇತ್ತೀಚಿಗೆ ಇಂದ್ರಜಿತ್ ನನ್ನ ಭೇಟಿ ಮಾಡಿಲ್ಲ' ಎಂದಿದ್ದಾರೆ.
Recommended Video
ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಹೆಚ್ ಡಿ ಕೆ ಇಂದ್ರಜಿತ್ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ್ರು. "ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳುಕುಹಾಕಿಕೊಂಡಿದ್ದೀರಾ? ನಾನು ರಾಜಕಾರಣ ಮಾಡಿದ್ರೆ ನೇರವಾಗಿ ಮಾಡುತ್ತೇನೆ" ಎಂದು ಹೇಳಿದ್ದಾರೆ. "ನಿನ್ನೆಯಿಂದ ನಡೆಯುತ್ತಿರುವ ಘಟನೆಯ ಬಗ್ಗೆ, ಆ ಫೋಟೊ ಇಟ್ಟುಕೊಂಡು ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ. ಹಲವಾರು ಬಾರಿ ಇಂದ್ರಜಿತ್ ಭೇಟಿ ಮಾಡಿದ್ದಾರೆ ಸಂದರ್ಶನ ಮಾಡಿದ್ದಾರೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಇತ್ತೀಚೆಗೆ ಭೇಟಿ ಮಾಡಿಲ್ಲ" ಎಂದು ಹೆಚ್ ಡಿ ಕೆ ಹೇಳಿದ್ದಾರೆ.
"ಈ ಫೋಟೋ ಯಾರು? ಯಾವ ಕಾರಣಕ್ಕೆ ಬಳಸಿಕೊಂಡು ಉಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಸತ್ಯ ಅವರೇ ತಿಳಿಸುವುದು ಒಳ್ಳೆಯದು ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ಮನವಿ ಮಾಡುತ್ತೇನೆ" ಅಂತ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ (ಜುಲೈ 15) ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಾಲಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ದರ್ಶನ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್ ಮತ್ತು ಕುಮಾರಸ್ವಾಮಿ ಭೇಟಿಯ ಫೋಟೋ ವೈರಲ್ ಆಗಿತ್ತು. ಈ ಫೋಟೋ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಆದರೆ ಇದು ಹಳೆಯ ಫೋಟೋ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸುವ ಮೂಲಕ ಭೇಟಿಯ ಬಗ್ಗೆ ಎದ್ದಿದ್ದ ಚರ್ಚೆ, ಅನುಮಾನಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.


Click it and Unblock the Notifications











