Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಜಿ ಸಿಎಂ ಕುಮಾರಸ್ವಾಮಿಯ ಮನಕಲಕಿದ ಎರಡು ಸಿನಿಮಾಗಳು
ಮಾಜಿ ಸಿಎಂ ಕುಮಾರಸ್ವಾಮಿ ರಾಜಕಾರಣಿಯಾಗುವ ಮುಂಚೆ ಸಿನಿಮಾ ಕರ್ಮಿಯಾಗಿದ್ದರು. ವಿತರಕರಾಗಿ ಚಿತ್ರರಂಗ ಪ್ರವೇಶಿಸಿದ ಕುಮಾರಸ್ವಾಮಿ ಬಳಿಕ ನಿರ್ಮಾಪಕರಾದರು.
'ಸೂರ್ಯವಂಶ', 'ಚಂದ್ರ ಚಕೋರಿ', 'ಜಾಗ್ವಾರ್' ಸೇರಿದಂತೆ ಹಲವು ಸಿನಿಮಾಗಳನ್ನು ನೀಡಿರುವ ಕುಮಾರಸ್ವಾಮಿ ಈಗಲೂ ಆಗಾಗ್ಗೆ ಸಿನಿಮಾ ನಿರ್ಮಾಣ ಮಾಡುತ್ತಿರುತ್ತಾರೆ. ಡಾ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಕುಮಾರಸ್ವಾಮಿ ತಮ್ಮ ಕಾಲೇಜು ದಿನಗಳಲ್ಲಿ ಹಲವಾರು ಸಿನಿಮಾಗಳನ್ನು ನೋಡುತ್ತಿದ್ದುದಾಗಿ ಅವರೇ ಹೇಳಿಕೊಂಡಿದ್ದಾರೆ.
'ಪೂಲ್ ಔರ್ ಕಾಂಟೆ' ನೆನಪಿಸಿ ಅಜಯ್ಗೆ ಬುದ್ಧಿ ಹೇಳಿದ ಎಚ್ಡಿ ಕುಮಾರಸ್ವಾಮಿ
ಸಿನಿಮಾ ಪ್ರೇಮಿಯಾಗಿರುವ ಕುಮಾರಸ್ವಾಮಿ, ಇತ್ತೀಚೆಗೆ ಅವರಿಗೆ ಕೋವಿಡ್ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನೋಡಿದ ಎರಡು ಸಿನಿಮಾಗಳು ಅವರನ್ನು ಬಹುವಾಗಿ ಕಾಡಿವೆಯಂತೆ. ಆಸ್ಕರ್ ಪ್ರವೇಶ ಪಡೆದಿದ್ದ ತಮಿಳು ಸಿನಿಮಾ 'ಜೈ ಭೀಮ್' ಹಾಗೂ ಮಲಯಾಳಂ ಸಿನಿಮಾ 'ಜನ ಗಣ ಮನ' ಸಿನಿಮಾಗಳನ್ನು ಕುಮಾರಸ್ವಾಮಿ ವೀಕ್ಷಿಸಿದ್ದು, ಆ ಸಿನಿಮಾಗಳೆರಡರ ಬಗ್ಗೆ ಟ್ವಿಟ್ಟರ್ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಜೈ ಭೀಮ್, ಜನ ಗಣ ಮನ ಸಿನಿಮಾ ನೋಡಿದ ಎಚ್ಡಿ ಕುಮಾರಸ್ವಾಮಿ
''ಕೋವಿಡ್ ಸೋಂಕಿನಿಂದ ಒಂದು ವಾರ ಮನೆಯಲ್ಲೇ ಚಿಕಿತ್ಸೆ ಪಡೆದ ನಾನು, ಓದು & ಸಿನಿಮಾ ವೀಕ್ಷಣೆಯಲ್ಲಿಯೇ ಸಮಯ ಕಳೆದೆ. ಈ ಬಿಡುವಿನಲ್ಲಿ ಎರಡು ಸಿನಿಮಾಗಳನ್ನು ವೀಕ್ಷಿಸಿದೆ. 1.ʼಜೈ ಭೀಮ್ʼ. 2.ಜನ ಗಣ ಮನ. ಸೂಕ್ಷ್ಮ ಕಥಾಹಂದರದ ಈ ಸಿನಿಮಾಗಳೆರಡೂ ನನ್ನ ಮನ ಕಲಕಿವೆ, ಮತ್ತೂ ತೀವ್ರ ತಳಮಳಕ್ಕೆ ಕಾರಣವೂ ಆಗಿವೆ. ಸುಪ್ರೀಂ ಕೋರ್ಟ್'ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು; ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ & ʼಜೈ ಭೀಮ್ʼ ಚಿತ್ರದಲ್ಲಿ ಅದೇ ಕೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ. ಬದಲಾವಣೆಗೆ ಖಂಡಿತಾ ಪ್ರಯತ್ನಿಸುವೆ'' ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.
6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ಜನ ವಿಚಾರಣಾಧೀನ ಖೈದಿಗಳೇ: ಎಚ್ಡಿಕೆ
''ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು, ಅಶಕ್ತರಿಗೆ ಗಗನ ಕುಸುಮವಾ? ಓರ್ವ ಸಿರಿವಂತ ಅಪರಾಧಿಗೆ ಕೆಲ ಗಂಟೆಗಳಲ್ಲೇ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ (ಅನೇಕ ಪ್ರಕರಣಗಳಲ್ಲಿ ಮುಗ್ಧರು) ಅರ್ಜಿಗಳಿಗೆ ಮೋಕ್ಷವೇ ಕಾಣುವುದಿಲ್ಲ. ಸರಳುಗಳ ಹಿಂದಿನ ನರಕವನ್ನು ʼಜೈ ಭೀಮ್ʼ ನೈಜವಾಗಿ ತೋರಿಸಿದೆ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದು ಇದನ್ನೇ. ವಿಚಾರಣೆಯೇ ಇಲ್ಲದೆ ಕೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ.ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ಜನ ವಿಚಾರಣಾಧೀನ ಕೈದಿಗಳೇ!! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೇ ಕಂಬಿಗಳ ಹಿಂದೆ ಜೀವಶ್ಚವಗಳಂತೆ ಬದುಕುತ್ತಿದ್ದಾರೆ'' ಎಂದು ವಿಚಾರಣಾಧೀನ ಖೈದಿಗಳ ಸ್ಥಿತಿ ತೆರೆದಿಟ್ಟಿದ್ದಾರೆ ಕುಮಾರಸ್ವಾಮಿ.
ಕರಾಳತೆಯ ಮೇಲೆ ʼಜೈ ಭೀಮ್ʼ ಬೆಳಕು ಚೆಲ್ಲಿದೆ: ಎಚ್ಡಿಕೆ
''ಹಾಗಾದರೆ, 5 ವರ್ಷಗಳ ಅವರ ಸೆರೆವಾಸಕ್ಕೆ ಉತ್ತರದಾಯಿಗಳು ಯಾರು? ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಪರಿಹಾರವೇನು? ಆತುರಗೆಟ್ಟ ಆರೋಪ ಪಟ್ಟಿ, ವಿವೇಚನೆ ಇಲ್ಲದ ಬಂಧನ, ಜಾಮೀನು ಪಡೆಯಲು ಹೆಣಗಾಟದ ಕರಾಳತೆಯ ಮೇಲೆ ʼಜೈ ಭೀಮ್ʼ ಬೆಳಕು ಚೆಲ್ಲಿದೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಇದನ್ನೇ ಹೇಳಿ ಕಳವಳ ವ್ಯಕ್ತಪಡಪಡಿಸಿದ್ದಾರೆ. ಅವರ ದನಿ ದೇಶಕ್ಕೇ ಕೇಳಿಸಿದೆ. ಹಾಗಾದರೆ, ನಾವು ಬದಲಾಗುವುದು ಯಾವಾಗ? ಸುಧಾರಣೆಗಳು ಯಾವಾಗ?'' ಎಂದು ಪ್ರಶ್ನೆ ಮಾಡಿದ್ದಾರೆ ಎಚ್ಡಿ ಕುಮಾರಸ್ವಾಮಿ.
ಸಿನಿಮಾ ನಿರ್ದೇಶಕರ ಅಭಿನಂದಿಸಿದ ಎಚ್ಡಿ ಕುಮಾರಸ್ವಾಮಿ
''ಸಂವಿಧಾನ ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ ಬಿಲಿನಿಯರ್ʼನಿಂದ ಕಟ್ಟಕಡೆಯ ಬಡಪ್ರಜೆವರೆಗೂ ಎಲ್ಲರೂ ಕೋರ್ಟ್ ಕಡೆ ನೋಡುತ್ತಾರೆ. ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ 'ಜೈ ಭೀಮ್' ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಜನ ಗಣ ಮನʼ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು'' ಎಂದು 'ಜೈ ಭೀಮ್' ಹಾಗೂ 'ಜನ ಗಣ ಮನ' ಸಿನಿಮಾ ನಿರ್ದೇಶಕರನ್ನು ಹೊಗಳಿದ್ದಾರೆ ಕುಮಾರಸ್ವಾಮಿ.
Recommended Video