ಅಂಬಿ ಹುಟ್ಟುಹಬ್ಬಕ್ಕೆ ಶುಭಕೋರಿದ ಸಿಎಂ ಕುಮಾರಸ್ವಾಮಿ
ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವನ್ನ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದರು. ಮತ್ತೊಂದೆಡೆ ಮಂಡ್ಯದಲ್ಲಿ 'ಸ್ವಾಭಿಮಾನಿ ವಿಜಯೋತ್ಸವ' ಎಂಬ ಹೆಸರಿನಲ್ಲಿ ಅಂಬಿ ಹುಟ್ಟುಹಬ್ಬವನ್ನ ಸಂಭ್ರಮಿಸಲಾಗುತ್ತಿದೆ.
ಈ ಕಡೆ ಅಂಬರೀಶ್ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸುವ ಮೂಲಕ ಸ್ನೇಹಿತನನ್ನ ನೆನಪಿಸಿಕೊಂಡಿದ್ದಾರೆ.

''ಅಂಬರೀಷ್ ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು. ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ..'' ಎಂದು ಟ್ವೀಟ್ ಮಾಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮತ್ತು ಅಂಬರೀಶ್ ಒಳ್ಳೆಯ ಸ್ನೇಹಿತರಾಗಿದ್ದರು. ಬೇರೆ ಬೇರೆ ಪಕ್ಷದಲ್ಲಿದ್ದರೂ ಅದರಿಂದ ಹೊರಗೆ ಇಬ್ಬರ ನಡುವೆ ಉತ್ತ ಬಾಂಧವ್ಯ ಇತ್ತು. ಆದ್ರೆ, ಸುಮಲತಾ ಅಂಬರೀಶ್ ಅವರು ಮಂಡ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಕುಮಾರಸ್ವಾಮಿ ಅವರ ವಿರೋಧ ಕಟ್ಟಿಕೊಂಡರು.
ತಮ್ಮ ಮಗ ನಿಖಿಲ್ ಕುಮಾರ್ ವಿರುದ್ಧ ಸುಮಲತಾ ಸ್ಪರ್ಧೆ ಮಾಡಿ ಗೆದ್ದು ಬೀಗಿದರು. ಇದು ಸಹಜವಾಗಿ ಸಿಎಂಗೆ ಮುಖಭಂಗ ಉಂಟು ಮಾಡಿತು. ಇದೀಗ, ಅಂಬಿ ಹುಟ್ಟುಹಬ್ಬಕ್ಕೆ ಗೆಳೆಯನನ್ನು ನೆನಪಿಸಿಕೊಂಡು ಶುಭಕೋರಿದ್ದಾರೆ. ಸಿಎಂ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











