ಸಿನಿಮಾ ಪ್ರಚಾರದಲ್ಲಿ ಜನಸಾಗರ: ಸ್ಟಾರ್ ಕಲಾವಿದರಿಗೆ ಸಚಿವ ಸುಧಾಕರ್ ಮನವಿ
ಕೊರೊನಾ ಎರಡನೇ ಅಲೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಸಿಗದ ಕೊರೊನಾ ಹತೋಟಿಗೆ ಸರ್ಕಾರ ಸಾಹಸ ಪಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ಜನ ಸೇರಿರುವುದಲ್ಲದೆ ಮುಗಿಬೀಳುತ್ತಿರುವ ಜನಸಾಗರ ನೋಡಿ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೊನಾ ನಿಯಮ ಪಾಲನೆ ಮಾಡದೆ ಇರುವ ಸ್ಟಾರ್ ಕಲಾವಿದರಿಗೆ ಆರೋಗ್ಯ ಸಚಿವ ಸುಧಾಕರ್ ಕೋವಿಡ್ ನಿಯಮ ನೆನಪಿಸಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಸಿನಿಮಾದ ಪ್ರೋಮೋಷನ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೊರೊನಾ ನಿಯಂತ್ರಣಕ್ಕೆ ಕಲಾವಿದರು ಸಹ ಬೆಂಬಲಿಸಬೇಕು ಎಂದು ಹೇಳಿದ್ದಾರೆ.
'ಚಿತ್ರ ತಾರೆಯರಿಗೆ ನಾನು ಮನವಿ ಮಾಡುತ್ತೇನೆ. ಸಾವಿರಾರು ಜನರು ಸೇರಿ ಸಿನಿಮಾಗಳನ್ನು ಪ್ರಮೋಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿದೆ. ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣದಲ್ಲಿ ತಮ್ಮ ಪಾತ್ರ ಕೂಡ ಸರ್ಕಾರಕ್ಕೆ ಮುಖ್ಯ. ತಾವು ಮಾಸ್ಕ್ ಧರಿಸಿ, ಅಭಿಮಾನಿಗಳಿಗೂ ಹೇಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದು ಎಲ್ಲಾ ಚಿತ್ರ ತಾರೆಯರಿಗೂ ನನ್ನ ಕಳಕಳಿಯ ಮನವಿ' ಎಂದು ಹೇಳಿದ್ದಾರೆ.

ಯಾವ ಸ್ಟಾರ್ ನಟರ ಹೆಸರನ್ನು ಹೇಳದೆ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಯುವರತ್ನನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರುತ್ತಿದ್ದಾರೆ.
ಸತತ ಮೂರು ದಿನಗಳಿಂದ ಪವರ್ ಸ್ಟಾರ್ ಮತ್ತು ತಂಡ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಭೇಟಿ ಮಾಡಿ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ. ಸಾಗರೋಪಾದಿಯಲ್ಲಿ ಜನ ಸೇರುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಧರಿಸದೆ ಇರುವುದು ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸುಧಾಕರ್ ಕೊರೊನಾ ನಿಯಮದ ನೆನಪು ಮಾಡಿಕೊಟ್ಟಿದ್ದಾರೆ.
ಯುವರತ್ನ ಮುಗಿಯುತ್ತಿದ್ದಂತೆ ದರ್ಶನ್ ಮತ್ತು ತಂಡ, ರಾಬರ್ಟ್ ವಿಜಯ ಯಾತ್ರೆ ಹೊರಡಲು ಸಿದ್ಧರಾಗಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ಮಾರ್ಚ್ 29ರಿಂದ ರಾಬರ್ಟ್ ವಿಜಯ ಯಾತ್ರೆ ಪ್ರಾರಂಭವಾಗಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಭೇಟಿ ಮಾಡಲು ನಿರ್ಧರಿಸಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದು, ಕೋವಿಡ್ ನಿಯಮ ಪಾಲಿಸಬೇಕಾಗಿದೆ.


Click it and Unblock the Notifications











