ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ- ಶ್ರುತಿ ಹರಿಹರನ್...!
ಮಲಯಾಳಂ ಚಿತ್ರರಂಗ ಅಲ್ಲೋಲ..ಕಲ್ಲೋಲವಾಗಿದೆ. ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ಸಲ್ಲಿಸಿದ ವರದಿಯಿಂದ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿ ಬಿದ್ದಿದೆ. ಅದು ತೆರೆದಿಟ್ಟಿರುವ ಸತ್ಯ ಕೇವಲ ಮಲಯಾಳಂ ಚಿತ್ರರಂಗವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಇದಕ್ಕೆ ಪೂರಕವಾಗಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿರುವ ಪುರುಷರ ಮನಸ್ಥಿತಿಯ ಕುರಿತು ಕಿಡಿ ಕಾರುತ್ತಿದ್ದಾರೆ.
ಹಾಗಂಥ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಬೇರೆ ಕಡೆ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇಲ್ಲ ಅಂತ ಅಲ್ಲ. ಯಾಕೆಂದರೆ.. ಮಿಲನಾ ಚಿತ್ರದ ನಾಯಕಿ ಪಾರ್ವತಿ ಸೇರಿ ಹಲವರು ಹೇಳಿರುವ ಪ್ರಕಾರ ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಬದಲಿಗೆ ಎಲ್ಲ ಭಾಷೆಯ ಚಿತ್ರರಂಗದ ಸಮಸ್ಯೆ. ಕೆಲಸ ಮಾಡುವ ಸ್ಥಳ ಯಾವುದೇ ಇರಲಿ ಅಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಈಗ ತುರ್ತಾಗಿ ಆಗಬೇಕಿದೆ. ಹೀಗಾಗಿಯೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಅನೇಕರು ನಮ್ಮಲ್ಲಿಯೂ ಕೇರಳದಲ್ಲಿ ರಚನೆಯಾದಂತೆ ಸಮಿತಿಯೊಂದನ್ನು ರಚನೆ ಮಾಡಿ ಎಂಬ ಮನವಿಯನ್ನು ಸರ್ಕಾರಕ್ಕೆ ಮಾಡಿಕೊಳ್ಳುತ್ತಿದ್ಧಾರೆ. ಕನ್ನಡ ಚಿತ್ರರಂಗದಲ್ಲಿ ಕೂಡ ಈ ಕೂಗು ಕೇಳಿ ಬಂದಿದೆ. ಸಮಿತಿ ರಚನೆ ಮಾಡೋಣ ಎಂಬ ಭರವಸೆ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಸಿಕ್ಕಿದೆ.

ಹೌದು, ನಿನ್ನೆಯಷ್ಟೇ ಕನ್ನಡದಲ್ಲಿ ಕೂಡ ಇಂತಹದ್ದೊಂದು ಸಮಿತಿ ಬೇಕೆಂದು 153 ತಾರೆಯರು ಪತ್ರಕ್ಕೆ ಸಹಿ ಹಾಕಿದ್ದರು. ಮುಂದುವರೆದು ಇಂದು ಚೇತನ್ ಅಹಿಂಸಾ , ಶ್ರುತಿ ಹರಿಹರನ್, ನೀತು, ಹಿರಿಯ ಪತ್ರಕರ್ತೆ ವಿಜಯಮ್ಮ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕೇರಳದ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಒಂದು ಸಮಿತಿಯನ್ನು ರಚಿಸುವಂತೆ ಸಿಎಂ ಸಿದ್ಧರಾಮಯ್ಯ ಅವರ ಬಳಿ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ಧಾರೆ.
ಇನ್ನೂ ಲೈಂಗಿಕ ದೌರ್ಜನ್ಯ, ಶೋಷಣೆಯನ್ನು ತಡೆಗಟ್ಟುವ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಳಿ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಶ್ರುತಿ ಹರಿಹರನ್, ಮಹಿಳೆಯರು ಇಲ್ಲಿ ಕೆಲಸ ಮಾಡುವ ವಾತಾವರಣ ಹೇಗಿದೆ ಎಂದು ತನಿಖೆಯನ್ನು ಮಾಡಿ ಅದರಿಂದ ಶಿಫಾರಸು ನೀಡಿದರೆ ನಮ್ಮ ಚಿತ್ರರಂಗ ಇನ್ನಷ್ಟು ಚೆನ್ನಾಗಿರುತ್ತೆ ಎಂದಿದ್ದಾರೆ.

ನಾವು ಮಾಡಿಕೊಂಡ ಮನವಿಗೆ ಸಿಎಂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದಿರುವ ಶ್ರುತಿ ಹರಿಹರನ್, ಇದು ತುಂಬಾ ವಿಸ್ತ್ರತವಾದ ವಿಚಾರ ಮತ್ತೆ ಭೇಟಿಯಾಗಿ ಇನ್ನಷ್ಟು ಚರ್ಚೆ ಮಾಡಿ ಸಮಿತಿ ರಚನೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದು ಸರ್ಕಾರದ ಮೂಲಕ ಕೆಲವೊಂದು ಕಾನೂನು, ನಿಯಮಗಳು ಬಂದರೆ ಮಹಿಳೆಯರ ವರ್ಕಿಂಗ್ ಕಂಡೀಷನ್ ಬೆಟರ್ ಆಗುತ್ತೆ ಎಂಬ ನಂಬಿಕೆ ನಮಗೆ ಇದೆ. ಲೈಂಗಿಕ ದೌರ್ಜನ್ಯ ಒಂದು ಭಾಗ ಅಷ್ಟೇ. ಇನ್ನೂ ಸಾಕಷ್ಟು ವಿಚಾರಗಳಿವೆ, ಸಮಸ್ಯೆಗಳಿವೆ. ಹೀಗಾಗಿ ಸಮಿತಿ ರಚಿಸಲು ಕೋರಿದ್ದೇವೆ ಎಂದು ಹೇಳಿದ್ದಾರೆ ಶ್ರುತಿ ಹರಿಹರನ್.


Click it and Unblock the Notifications











