ಕೃಷ್ಣನೂರಿನಲ್ಲಿ ರಾಧೆ ವೇಷದಲ್ಲಿ ಡ್ರೀಮ್ಗರ್ಲ್ ಹೇಮಾಮಾಲಿನಿ
ಉಡುಪಿ : ಮುಂಬಯಿಯಿಂದ ಬಂದ ಬಾಲಿವುಡ್ 'ಡ್ರೀಮ್ ಗರ್ಲ್" ಕೃಷ್ಣನೂರಿನಲ್ಲಿ ಆದದ್ದು ರಾಧೆ !
ಹಿಂದಿ ಚಿತ್ರದ ಹೊಸ ನಾಯಕಿಯಾಗಿರುವ ಯುವತಿಯ ತಾಯಿಯ ನೃತ್ಯ ವಯಸ್ಸನ್ನು ಗೌಣವಾಗಿಸುವಷ್ಟು ಶಕ್ತ. ನೂಪುರ ಕಟ್ಟಿ, ಗೀತ ಗೋವಿಂದ ರೂಪಕಕ್ಕೆ ಜೀವ ತುಂಬಿದ ಈ ಮಾನಿನಿ ಹೇಮಾ ಮಾಲಿನಿ.
ಸುರೇಶ್ ವಾಡ್ಕರ್ ಕಂಠದ ಕೆಸೆಟ್ಟು ಗಣೇಶ ವಂದನ ಹೇಳಿತು. ಮೆಲ್ಲನೆ ಸರಿದ ಪರದೆಯ ಹಿಂದೆ ರಾಧೆ ವೇಷದ ಹೇಮಾಮಾಲಿನಿ. ಬಗಲಲ್ಲಿ ಶ್ರೀ ಕೃಷ್ಣ. ಸಮುದ್ರದ ಅಲೆ ಹಿನ್ನೆಲೆ. ಜಯ ಜಯ ದೇವ ಹಾಡು ಮೊಳಗುತ್ತಲೇ ಕೈಮುಗಿದು ನಿಂತ ಸಖಿಯರು. ಮೊದಲ ಅಂಕಕ್ಕೆ ಪರದೆ. ಕಿವಿಗಡಚಿಕ್ಕುವ ಕರತಾಡನ.
ಮತ್ತೆ ಪರದೆ ಸರಿದಾಗ, ಮುಸುಕುಧಾರಿ ಬಾಲೆ. ಕೃಷ್ಣ ಮೆಲ್ಲಗೆ ಆಕೆಯ ಕೈ ಹಿಡಿಯುತ್ತಾನೆ. ಮುಸುಕು ಸರಿಸಿ ನೋಡಿದರೆ ಆಕೆ ರಾಧೆಯಲ್ಲ, ಸಖಿ. ಹತ್ತಿರದಲ್ಲೇ ನಿಂತ ರಾಧೆಗೆ ನಖಶಿಖಾಂತ ಸಿಟ್ಟು. ಅವಳನ್ನು ಒಲಿಸಲು ಕೃಷ್ಣ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಕೊನೆಗೂ ಆಗುತ್ತದೆ ರಾಧಾ- ಕೃಷ್ಣರ ಮಿಲನ. ರಾಧೆಗೆ ಕೃಷ್ಣ ಎಣ್ಣೆ ಹಚ್ಚಿ ತಲೆ ಬಾಚುತ್ತಾನೆ, ಸಿಂಗಾರ ಮಾಡಿ ಮನತಣಿಯೆ ಕಣ್ಣುತುಂಬಿಕೊಳ್ಳುತ್ತಾನೆ. ಮತ್ತೆ ಪರದೆ.
ಉಡುಪಿಯಲ್ಲಿ ನಡೆದ ಈ ಗೀತ ಗೋವಿಂದ ನೃತ್ಯ ರೂಪಕದ ಮುಖ್ಯ ಆಕರ್ಷಣೆ ರಾಧೆ ಅರ್ಥಾತ್ ಹೇಮಾಮಾಲಿನಿ. ಆಕೆಯನ್ನು ನೋಡಲೆಂದೇ ದೂರದೂರಿನಿಂದಲೂ ಜನ ಬಂದಿದ್ದರು. ರೂಪಕದ ನಂತರ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಮಾಮಾಲಿನಿಯವರನ್ನು ಸನ್ಮಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಮಮೂರ್ತಿ ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಹಾಜರಿದ್ದರು.


Click it and Unblock the Notifications