ಏನದು ಶಿವಣ್ಣ- ಹೇಮಂತ್ 'ಭೈರವನ ಕೊನೆ ಪಾಠ'? ನಿರ್ದೇಶಕರು ಹೇಳಿದ್ದಿಷ್ಟು
ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಆಕ್ಟರ್ ಶಿವರಾಜ್ಕುಮಾರ್. ಸದಾ ಒಂದಿಲ್ಲೊಂದು ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿರುತ್ತಾರೆ. ಇದೀಗ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ಶಿವಣ್ಣನ ಚಿತ್ರಕ್ಕೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸದ್ಯ ಚಿತ್ರದ ಟೈಟಲ್ ರಿವೀಲ್ ಆಗಿದೆ. 'ಭೈರವನ ಕೊನೆ ಪಾಠ' ಎನ್ನುವ ವಿಭಿನ್ನ ಟೈಟಲ್ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ವಿಭಿನ್ನ ರೀತಿಯ ಪೋಸ್ಟರ್ ಡಿಸೈನ್ ಮಾಡಿ ಚಿತ್ರತಂಡ ಗಮನ ಸೆಳೆದಿದೆ. ಭೈರವ ಎನ್ನುವ ಪವರ್ಫುಲ್ ಪಾತ್ರದಲ್ಲಿ ಶಿವಣ್ಣ ನಟಿಸುವ ಸಾಧ್ಯತೆಯಿದೆ. ಆದರೆ ಭೈರವ ಕಲಿಸುವ ಪಾಠ ಏನು? ಎಂದು ಸಿನಿರಸಿಕರು ತಲೆ ಚರ್ಚೆಸುತ್ತಿದ್ದಾರೆ.

ಶಿವಣ್ಣ ಸದ್ಯ 'ಭೈರತಿ ರಣಗಲ್' ಚಿತ್ರೀಕರಣ ಮುಗಿಸಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಜೊತೆಗೆ ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಧೀರ್ ಚಂದ್ರ ಪದಿರಿ ನಿರ್ಮಾಣದಲ್ಲಿ ತಮಿಳಿನ ಕಾರ್ತಿಕ್ ಅದ್ವೈತ್ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ 'ಭೈರವನ ಕೊನೆ ಪಾಠ' ನ್ಯೂಸ್ ಬಂದಿದೆ.
3 ದಿನಗಳ ಹಿಂದೆಯೇ ಟೈಟಲ್ ಘೋಷಣೆ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಕೆಲವೇ ಗಂಟೆಗಳ ಹಿಂದೆ ಕಲಿಕೆಗೆ ಕೊನೆಯಿಲ್ಲ; ಅಲ್ವಾ? ಎಂದು ಶಿವಣ್ಣ ಟ್ವಿಟ್ಟರ್ನಲ್ಲಿ ಪೋಲ್ ಸಹ ನಡೆಸಿದ್ದರು. ಆ ಮೂಲಕ ಟೈಟಲ್ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದ್ದರು. ಇದೀಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಸಿನಿಮಾ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ.
"ಶಿವಣ್ಣನ ಬರ್ತ್ಡೇಗೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗುತ್ತದೆ. ಈಗಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಸಾಧ್ಯವಿಲ್ಲ. ನಿಧಾನವಾಗಿ ಎಲ್ಲಾ ಗೊತ್ತಾಗುತ್ತದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಶುರು. 4 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಭೈರವನ ಕೊನೆ ಪಾಠ' ಮೂಡಿ ಬರಲಿದೆ. ಭಾರೀ ಬಜೆಟ್ಟಿನ ಬಹಳ ದೊಡ್ಡ ಸ್ಕೇಲ್ ಸಿನಿಮಾ ಇದು. ಹಾಗಾಗಿ ಅಕ್ಕಪಕ್ಕದ ಭಾಷೆಗಳ ಸ್ಟಾರ್ ನಟರು ಚಿತ್ರದಲ್ಲಿ ನಟಿಸಲಿದ್ದಾರೆ. ನೈಜ ಘಟನೆ ಆಧರಿತ ಸಿನಿಮಾ ಅಲ್ಲ. ಸದ್ಯಕ್ಕೆ ಇಷ್ಟೇ ಹೇಳೊಕೆ ಸಾಧ್ಯ" ಎಂದು ಹೇಮಂತ್ ರಾವ್ ಮಾಹಿತಿ ನೀಡಿದ್ದಾರೆ.
ಬೆಟ್ಟ.. ಆ ಬೆಟ್ಟದ ನಡುವೆ ಅರಳಿದ ಹೂವು.. ಸುತ್ತಾ ಭೂಮಿಗಿಳಿದ ಬಾಣಗಳು. ಇನ್ನು ಟೈಟಲ್ ಹಿಂದೆ ಇರುವ ಗರುಡ ಚಿತ್ರ. ಇದನ್ನೆಲ್ಲಾ ಗಮನಿಸಿದರೆ ಇದೊಂದು ಪೀರಿಯಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಶಿವಣ್ಣನ ಹುಟ್ಟುಹಬ್ಬದ ದಿನ ಬರುವ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ. ಚಿತ್ರಕ್ಕೆ ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜೆಎಫ್ ಫಿಲ್ಮ್ಸ್ ಬ್ಯಾನರ್ನಲ್ಲಿ ವೈಶಾಕ್ ಜೆ ಗೌಡ ಬಂಡವಾಳ ಹೂಡುತ್ತಿದ್ದಾರೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವನ್ನು ಮೊದಲಿಗೆ ಹೇಮಂತ್ ರಾವ್ ಕಟ್ಟಿಕೊಟ್ಟಿದ್ದರು. ಬಳಿಕ 'ಕವಲುದಾರಿ' ಕಥೆಯನ್ನು ತೆರೆಗೆ ತಂದರು. ನಂತರ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಟ್ಟರು. ಬಾಲಿವುಡ್ 'ಅಂಧಾದೂನ್' ಚಿತ್ರಕ್ಕೆ ಬರಹಗಾರರಾಗಿ ಕೆಲಸ ಮಾಡಿದ್ದರು. ಹಾಗಾಗಿ ಹೇಮಂತ್- ಶಿವಣ್ಣ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











