'ಗೋಧಿ ಬಣ್ಣ' ನಿರ್ದೇಶಕನ ಮುಂದಿನ ಚಿತ್ರದ 'ಅರ್ಧಸತ್ಯ'
ತಾವು ನಿರ್ದೇಶನ ಮಾಡಿದ ಚೊಚ್ಚಲ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಿಂದಲೇ ಹಲವು ಪ್ರಶಸ್ತಿಗಳನ್ನು ಪಡೆದ ಹೇಮಂತ್ ರಾವ್, ಈಗ ತಮ್ಮ ಎರಡನೇ ಚಿತ್ರ ಮಾಡುವ ತವಕದಲ್ಲಿದ್ದಾರೆ.['ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಿರ್ದೇಶಕ ಹೇಮಂತ್ ರಾವ್ ಗೆ ರಾಷ್ಟ್ರ ಪ್ರಶಸ್ತಿ!]
ಮೊನ್ನೆಯಷ್ಟೇ ನಿರ್ದೇಶಕ ಹೇಮಂತ್ ರಾವ್ ಗೆ 'ಗೊಲ್ಲಪುಡಿ ಶ್ರೀನಿವಾಸ್' ಅವರ ಹೆಸರಿನಲ್ಲಿ ನೀಡುವ ರಾಷ್ಟ್ರ ಪ್ರಶಸ್ತಿ ಲಭಿಸಿರುವ ಬಗ್ಗೆ ಘೋಷಣೆ ಆಗಿದ್ದು, ಈ ಪ್ರಶಸ್ತಿಯನ್ನು ಆಗಸ್ಟ್ 12 ರಂದು ಚೆನ್ನೈನಲ್ಲಿ ಸ್ವೀಕರಿಸಲಿದ್ದಾರೆ. ಇದೇ ಖುಷಿಯಲ್ಲಿರುವ ಹೇಮಂತ್ ರಾವ್ ಈಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದಾರೆ.

ಹೇಮಂತ್ ರಾವ್ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ರಿಲೀಸ್
ನಿರ್ದೇಶಕ ಹೇಮಂತ್ ರಾವ್ ತಮ್ಮ ಎರಡನೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಸಂಭ್ರಮಾಚರಣೆ ಅಂಗವಾಗಿ ಪ್ರೆಸೆಂಟ್ ಮಾಡಿ, ಬಿಡುಗಡೆ ಮಾಡಿದ್ದಾರೆ.

ಯಾವುದು ಆ ಸಿನಿಮಾ?
ಹೇಮಂತ್ ರಾವ್ ಅವರ ಎರಡನೇ ಸಿನಿಮಾ ಹೆಸರು 'ಅರ್ಧಸತ್ಯ'.

ನಿರ್ಮಾಪಕರು ಯಾರು?
ಪುನೀತ್ ರಾಜ್ ಕುಮಾರ್ ಹೊಸ ಬ್ಯಾನರ್ ಪಿಆರ್ ಕೆ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಗಳ ಜಂಟಿ ನಿರ್ಮಾಣದಲ್ಲಿ ಹೇಮಂತ್ ರಾವ್ 'ಅರ್ಧಸತ್ಯ' ಚಿತ್ರ ಮೂಡಿಬರಲಿದೆ.

ಶಾಲೆಯ ಹಳೇ ನೆನಪುಗಳ ಥ್ರಿಲ್ಲಿಂಗ್ ಸಿನಿಮಾ
ಅಂದಹಾಗೆ ಹೇಮಂತ್ ರಾವ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿರುವ 'ಅರ್ಧಸತ್ಯ' ಶಾಲೆಯ ಹಳೇ ನೆನಪುಗಳ ಕುರಿತ ಥ್ರಿಲ್ಲಿಂಗ್ ಚಿತ್ರವಂತೆ. ಈ ಹಿಂದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ನೀಡಿದ ಪ್ರೋತ್ಸಾಹವನ್ನು ನೀಡಿ ಸಹಕರಿಸಿ ಎಂದು ಕನ್ನಡ ಸಿನಿ ಪ್ರೇಮಿಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹೇಮಂತ್ ರಾವ್ ಕೋರಿದ್ದಾರೆ.

ಸಂಗೀತ ಮತ್ತು ಛಾಯಾಗ್ರಹಣ
ಹೇಮಂತ್ ರಾವ್ ನಿರ್ದೇಶನ ಮಾಡಲಿರುವ 'ಅರ್ಧಸತ್ಯ' ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇರಲಿದೆ.

'ಅರ್ಧಸತ್ಯ' ತಾರಾಗಣ
ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಬಗ್ಗೆ ಹೇಮಂತ್ ರಾವ್ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.


Click it and Unblock the Notifications











