ಉಪೇಂದ್ರ ನಿರ್ದೇಶನದ ಯುಐ ಚಿತ್ರವನ್ನು ಯಾಕೆ ನೋಡಬೇಕು ? ಇಲ್ಲಿವೆ 5 ಪ್ರಮುಖ ಕಾರಣಗಳು...!
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ಡೈರೆಕ್ಟರ್ ಆಗಿ ಹೊರ ಹೊಮ್ಮಿದ ಉಪ್ಪಿ ಓಂ ಚಿತ್ರದ ಮೂಲಕ ಆ ಕಾಲದಲ್ಲಿಯೇ ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದರು. ಎ, ಉಪೇಂದ್ರ, ಚಿತ್ರಗಳ ಮೂಲಕ ಟ್ರೆಂಡ್ ಸೆಟ್ ಮಾಡಿ ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಸ್ಥಾನವನ್ನು ಕೂಡ ಅಲಂಕರಿಸಿದರು.
ಇಂಥಾ ಉಪೇಂದ್ರ ಈಗ ಯುಐ ಚಿತ್ರದ ಮೂಲಕ ಮತ್ತೊಮ್ಮೆ ಎಲ್ಲರ ತಲೆಗೆ ಹುಳ ಬಿಡುವ ಪ್ರಯತ್ನವನ್ನು ಮಾಡಿದ್ದಾರೆ. ಇದೇ ಶುಭ ಶುಕ್ರವಾರದಂದು ಕೇವಲ ಕನ್ನಡಿಗರ ಮಡಿಲಿಗೆ ಮಾತ್ರವಲ್ಲದೇ ಸಮಸ್ತ ಭಾರತದ ಕಲಾ ರಸಿಕರ ಮಡಿಲಿಗೆ ತಮ್ಮ ಚಿತ್ರವನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆ ಯುಐ ಚಿತ್ರವನ್ನು ನೋಡಲು ಕಾರಣವಾದ ಐದು ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

09 ವರ್ಷಗಳ ನಂತರ ನಿರ್ದೇಶನ
ನಿರ್ದೇಶಕರಾಗಿ ಮೊದಲಿಂದ ಎಲ್ಲರನ್ನೂ ಅಚ್ಚರಿಗೆ ದೂಡುತ್ತಾ ಬಂದವರು ಉಪೇಂದ್ರ. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲಿವುಡ್ ಡೈರೆಕ್ಟರ್ ಶಂಕರ್, ಪ್ರಶಾಂತ್ ನೀಲ್, ಸೇರಿ ಕಳೆದ ಎರಡೂವರೆ ದಶಕಗಳಲ್ಲಿ ಜಗದ್ವಿಖ್ಯಾತರಾದ ಅನೇಕ ನಿರ್ದೇಶಕರು ಇವತ್ತು ಕೂಡ ನಮಗೆ ಉಪೇಂದ್ರ ಅವರೇ ಸ್ಫೂರ್ತಿ ಎನ್ನುತ್ತಾರೆ. ಇಂಥಾ ಉಪೇಂದ್ರ ಈಗ ಒಂಬತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣಕ್ಕೆ ಈ ಬಾರಿ ತಮ್ಮ ಚಿತ್ರದ ಮೂಲಕ ಉಪೇಂದ್ರ ಹೇಳಲು ಹೊರಟಿರುವ ವಿಷಯವಾದರೂ ಏನು ಎನ್ನುವ ಕುತೂಹಲ ಕೇವಲ ಜನಸಾಮಾನ್ಯರಲ್ಲಿ ಮಾತ್ರ ಅಲ್ಲ ಭಾರತದ ಅನೇಕ ನಿರ್ದೇಶಕರಲ್ಲಿ ಕೂಡ ಇದೆ.
ಯುಐ ಚಿತ್ರದ ಕಥಾಹಂದರ
ಸಾಮಾನ್ಯವಾಗಿ ನಿರ್ದೇಶನಕ್ಕಿಳಿದಾಗಲೆಲ್ಲ ಉಪೇಂದ್ರ ಕುತೂಹಲವನ್ನು ಉಳಿಸಿಕೊಂಡೇ ಬರುತ್ತಾರೆ. ತಮ್ಮ ಚಿತ್ರದ ಕಥೆಯ ಕುರಿತಾಗಲಿ, ಚಿತ್ರದ ಉದ್ದೇಶವಾಗಲಿ, ಉಪೇಂದ್ರ ಎಲ್ಲಿಯೂ ಹೇಳುವುದಿಲ್ಲ. ಆದರೆ, ಯುಐ ವಿಚಾರದಲ್ಲಿ ಉಪೇಂದ್ರ ತಮ್ಮ ಚಿತ್ರದ ಕುರಿತು ಚಿಕ್ಕ ಸುಳಿವು ನೀಡಿದ್ದಾರೆ. ಟೀಸರ್ ಬಿಡುಗಡೆ ಮಾಡಿದ್ದಾರೆ. ಆದರೆ, ಎಲ್ಲರಿಗೆ ಗೊತ್ತಿರುವಂತೆ ಉಪೇಂದ್ರ ಬುದ್ದಿವಂತ. ಹೀಗಾಗಿ ಚಿತ್ರದ ಕಥೆಯನ್ನು ಊಹಿಸಿರುವ ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗುವ ಸಾಧ್ಯತೆ ಇದೆ. ಇನ್ನು ಉಪೇಂದ್ರ ಹಿಂದೆ ಅನೇಕ ಸಂದರ್ಶನಗಳಲ್ಲಿ ಹೇಳಿರುವಂತೆ ಯುಐ ಚಿತ್ರದಲ್ಲಿನ ಪ್ರತಿಯೊಂದು ಪಾತ್ರ ಮತ್ತು ಆ ಪಾತ್ರದ ಉಡುಗೆ ತೊಡುಗೆ ಕೂಡ ಕಥೆ ಹೇಳುತ್ತವೆ. ಅನೇಕ ಉಪಮೇಯಗಳಿರುವ ಕಥೆ ಇದು ಎಂದು ಖುದ್ದು ಉಪೇಂದ್ರ ಅವರೇ ಹೇಳಿದ್ಧಾರೆ. ಈ ಕಾರಣ ಚಿತ್ರದ ಕಥೆಯ ಕುರಿತು ಕುತೂಹಲ ಇದ್ದೇ ಇದೆ.
ಯುಐ ಚಿತ್ರದಲ್ಲಿ ಟೆಕ್ನಾಲಜಿಯ ಬಳಕೆ
ತಲೆಯನ್ನು ಖರ್ಚು ಮಾಡುವುದಲ್ಲದೇ ಉಪೇಂದ್ರ ಈ ಬಾರಿ ತಂತ್ರಜ್ಞಾನದ ಸದ್ಭಳಕೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. AI ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ ಮತ್ತು ಬಾಡಿ ಸ್ಕ್ಯಾನಿಂಗ್ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಇನ್ನು ಸಾಮಾನ್ಯವಾಗಿ ಕತ್ತಲೆಯ ದೃಶ್ಯಗಳನ್ನು ಕತ್ತಲಿನಲ್ಲಿಯೇ ಸೆರೆಹಿಡಿಯಲಾಗುತ್ತೆ. ಇಲ್ಲವಾದಲ್ಲಿ ಹಗಲಿನಲ್ಲಿ ಚಿತ್ರೀಕರಣ ಮಾಡಿ ಆ ನಂತರ ನೈಟ್ ಎಫೆಕ್ಟ್ ನೀಡಲಾಗುತ್ತೆ. ಇದನ್ನು ಚಿತ್ರರಂಗದ ಭಾಷೆಯಲ್ಲಿ ಡೇ ಫಾರ್ ನೈಟ್ ಎನ್ನುತ್ತಾರೆ. ಆದರೆ ಉಪೇಂದ್ರ ಯುಐ ಚಿತ್ರಕ್ಕೆ ನೈಟ್ ಫಾರ್ ಡೇ ಕಾನ್ಸೆಪ್ಟ್ ಬಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ತರಹದ ಪ್ರಯೋಗವನ್ನು ಮಾಡಿದ ಮೊದಲ ವ್ಯಕ್ತಿ ಅಂದರೆ ಅದು ಬಹುಶಃ ಉಪೇಂದ್ರ ಮಾತ್ರ. ಇನ್ನು ಚಿತ್ರಕ್ಕೆ ಸರ್ರಿಯಲಿಸ್ಟಿಕ್ ಸೆಟ್ ಹಾಕಲಾಗಿದ್ದು ಈ ಸೆಟ್ನಲ್ಲಿ ಕೂಡ ಒಳಾರ್ಥಗಳಿವೆ ಎಂದು ಉಪೇಂದ್ರ ಅವರೇ ಹೇಳಿದ್ಧಾರೆ. ವಿಎಫ್ಎಕ್ಸ್ ತಂತ್ರಜ್ಞಾನವನ್ನು ನಾವು ದೊಡ್ಡ ಮಟ್ಟದಲ್ಲಿ ಇಲ್ಲಿ ಬಳಿಸಿಕೊಂಡಿದ್ದೇವೆ ಎಂದು ಹೇಳಿದ್ಧಾರೆ. ಇದಲ್ಲದೇ ಚಿತ್ರದ ಹಿನ್ನೆಲೆ ಸಂಗೀತದ ಕೆಲಸಗಳನ್ನು ಅಜನೀಶ್ ಲೋಕನಾಥ್ ಹೊರದೇಶಗಳಲ್ಲಿ ರೆಕಾರ್ಡಿಂಗ್ ಮಾಡಿಕೊಂಡು ಬಂದಿದ್ಧಾರೆ
ಉಪೇಂದ್ರ ಮತ್ತು ವೇಣು ಕಾಂಬಿನೇಶನ್
ಉಪೇಂದ್ರ ನಿರ್ದೇಶನದ ಆರಂಭದ ಚಿತ್ರಗಳನ್ನು ಹೊರತು ಪಡಿಸಿ, ಎ, ಉಪೇಂದ್ರ, ಎಚ್ ಟು ಓ, ಹೀಗೆ ಪ್ರತಿಯೊಂದು ಚಿತ್ರದಲ್ಲಿ ಕ್ಯಾಮರಾವನ್ನು ಸಂಭಾಳಿಸಿದ ಛಾಯಾಗ್ರಾಹಕ ಎಚ್ ಸಿ ವೇಣು ಯುಐ ಚಿತ್ರದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಈ ಕುರಿತು ಕೂಡ ಸಂದರ್ಶನಗಳಲ್ಲಿ ಮಾತನಾಡಿರುವ ಉಪೇಂದ್ರ, ವೇಣು ಅದ್ಭುತ ಛಾಯಾಗ್ರಾಹಕ. ಅವರ ಹಲವು ವರ್ಷಗಳ ಅನುಭವ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದು ಹೇಳಿದ್ದಾರೆ. ಚಿತ್ರದ ಕ್ಯಾಮರಾ ಕಣ್ಣಿಗೆ ಮುದ ನೀಡುತ್ತೆ ಎಂದು ಹೇಳಿದ್ದಾರೆ.
ಯುಐ ಹಿಂದಿರುವ ನಿರ್ಮಾಣ ಸಂಸ್ಥೆ ಮತ್ತು ಕಲಾವಿದರ ದಂಡು
ಕೆ.ಪಿ.ಶ್ರೀಕಾಂತ್ ಮತ್ತು ಆಡಿಯೋ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಲಹರಿ ಸಂಸ್ಥೆ ಯುಐ ಚಿತ್ರದ ಹಿಂದಿನ ಎರಡು ಪ್ರಮುಖ ಶಕ್ತಿಗಳು. ಚಿತ್ರಕ್ಕೆ ಅಗತ್ಯ ಇರುವುದೆಲ್ಲವನ್ನು ಪೂರೈಸಿರುವ ನಿರ್ಮಾಪಕರು ಚಿತ್ರದ ವಿಚಾರದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ ಎನ್ನುವುದಕ್ಕೆ ಚಿತ್ರದಲ್ಲಿ ಬಳಿಸಿರುವ ತಂತ್ರಜ್ಞಾನ ಸಾಕ್ಷಿ. ಇನ್ನು, ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ರೀಶ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮಠ ಗುರುಪ್ರಸಾದ್ ಹೀಗೆ ಅನೇಕರು ಚಿತ್ರದಲ್ಲಿದ್ಧಾರೆ


Click it and Unblock the Notifications











