ಪ್ರತಿಭೆಯ 'ಕಾಶಿ' ಗರಡಿಯಲ್ಲಿ ಪಳಗಿದ ಕನ್ನಡ ತಾರೆಯರಿವರು
ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ ನಟ ನಿರ್ದೇಶಕ ಕಾಶಿನಾಥ್ ತಾವು ಬೆಳೆಯುವುದರ ಜೊತೆಯಲ್ಲಿ ಸಾಕಷ್ಟು ಕಲಾವಿದರನ್ನೂ ಬೆಳಸಿದ ಕೀರ್ತಿ ಹೊಂದಿದವರು. ಸುಮಾರು 80ರ ದಶಕದಲ್ಲಿ ಅನೇಕ ನವ ನಿರ್ದೇಶಕರು ಮತ್ತು ಬರಹಗಾರರಿಗೆ ತಮ್ಮದೇ ಮನೆಯಲ್ಲಿ ಉಳಿದುಕೊಳ್ಳಲು ಜಾಗಕೊಟ್ಟಿದ್ದರು.
ನೈಜತೆಯ ಪ್ರತಿಬಿಂಬ ಆಗಿದ್ದ ಕಾಶಿನಾಥ್ ಮಡಿವಂತಿಕೆಯ ಸಿನಿಮಾರಂಗದಲ್ಲಿ ಸಾಮಾಜಿಕ ಚೌಕಟ್ಟನ್ನ ಮೀರಿದ ಸಿನಿಮಾಗಳನ್ನ ಪ್ರೇಕ್ಷಕರ ಮುಂದೆ ತಂದವರು. ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನ ನಿರ್ದೇಶನ ಮಾಡುವ ಶಿಷ್ಯವೃಂದವನ್ನ ಬೆಳೆಸಿದ ಕಾಶಿನಾಥ್ ಅನೇಕರಿಗೆ ಅಸರೆ ಆಗಿದ್ದರು.
ಕೇವಲ ತಂತ್ರಜ್ಞರಷ್ಟೇ ಅಲ್ಲದೆ ನಟ-ನಟಿಯರನ್ನೂ ಚಿತ್ರರಂಗಕ್ಕೆ ಪರಿಚಯಿಸಿ ಇಂದು ಆ ಕಲಾವಿದರು ಬಣ್ಣ ಹಚ್ಚುತ್ತಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹಾಗಾದ್ರೆ ಕಾಶಿನಾಥ್ ಪರಿಚಯಿಸಿದ ಪ್ರತಿಭೆಗಳು ಯಾರು? ಇಲ್ಲಿದೆ ಮಾಹಿತಿ ಓದಿರಿ...

ಕಾಶಿನಾಥ್ ಶಿಷ್ಯ ಉಪೇಂದ್ರ
ಕೇವಲ ಕನ್ನಡ ಸಿನಿಮಾರಂಗವಲ್ಲದೆ ಪರಭಾಷೆಯ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಂತೆ ಮಾಡಿದ, ಗುರುವಿಗೆ ತಕ್ಕ ಶಿಷ್ಯ ಎನ್ನಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ಕಾಶಿನಾಥ್ ಗರಡಿಯಲ್ಲಿ ಬೆಳೆದವರು. ಒಳ್ಳೆಯ ಸಿನಿಮಾ ಹಾಗೂ ನಾಯಕನಾಗಲು ಸುಂದರ ರೂಪ ಮುಖ್ಯವಲ್ಲ ಎಂದು ತೋರಿಸಿಕೊಟ್ಟವರು ಈ ಗುರು-ಶಿಷ್ಯರು.

ಕಾಶಿನಾಥ್ ಮನೆ ಮಗ ವಿ.ಮನೋಹರ್
ಸಂಗೀತ ನಿರ್ದೇಶಕ ವಿ.ಮನೋಹರ್ ಕೂಡ ಕಾಶಿನಾಥ್ ಅವರ ಶಿಷ್ಯರೇ. ಸುಮಾರು ಆರು ವರ್ಷಗಳ ಕಾಲ ವಿ.ಮನೋಹರ್, ಕಾಶಿನಾಥ್ ಅವರ ಮನೆಯಲ್ಲೇ ಇದ್ದುಕೊಂಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.

ಚಿತ್ರರಂಗಕ್ಕೆ ನಾಯಕಿಯಾದ ಉಮಾಶ್ರೀ
ಕಾಶಿನಾಥ್ ನಿರ್ದೇಶನದ 'ಅನುಭವ' ಸಿನಿಮಾದ ಮೂಲಕ ನಟಿ ಉಮಾಶ್ರೀ ಅವರನ್ನ ಕನ್ನಡ ಸಿನಿಮಾರಂಗಕ್ಕೆ ಕಾಶಿನಾಥ್ ಪರಿಚಯಿಸಿದರು. ನಂತರದ ದಿನಗಳಲ್ಲಿ ಉಮಾಶ್ರೀ ಸಾಕಷ್ಟು ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸ್ಸು ಗೆಲ್ಲುವುದರಲ್ಲಿ ಯಶಸ್ಸು ಕಂಡರು.

ಅನುಭವ ಚಿತ್ರದ ಮೂಲಕ 'ಅಭಿನಯ' ಪರಿಚಯ
ಅನುಭವ ಸಿನಿಮಾ ಮೂಲಕ ಕೇವಲ ಉಮಾಶ್ರೀ ಅವರನ್ನ ಮಾತ್ರವಲ್ಲದೆ ನಟಿ ಅಭಿನಯ ಅವರನ್ನೂ ನಾಯಕಿಯನ್ನಾಗಿ ಮಾಡಿದರು ನಿರ್ದೇಶಕ ಕಾಶಿನಾಥ್. ಅಭಿನಯ ಅವರ ಮನೆಗೆ ಭೇಟಿ ನೀಡಿ ಪೋಷಕರ ಒಪ್ಪಿಗೆ ಪಡೆದು ಅಭಿನಯ ಅವರನ್ನ ಹೀರೋಯಿನ್ ಮಾಡಿದರು ಕಾಶಿನಾಥ್.

ಕಾಶಿ ಸಿನಿಮಾದಲ್ಲಿ ಕೆಲಸ ಮಾಡಲು ತಯಾರಿದ್ದ ನಿರ್ದೇಶಕ
ಕನ್ನಡ ಸಿನಿಮಾರಂಗಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನ ನೀಡಿದ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಕಾಶಿನಾಥ್ ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದವರು. ಗುರುಗಳಂತೆ ಸುನೀಲ್ ಕುಮಾರ್ ದೇಸಾಯಿ ಕೂಡ ವಿಭಿನ್ನ ಚಿತ್ರಗಳತ್ತ ಮುಖ ಮಾಡಿದವರು.

ಬುದ್ದಿವಂತ ಗುರುಗಳಿಗೆ ಪ್ರತಿಭಾನ್ವಿತ ಶಿಷ್ಯರು
ಉಪೇಂದ್ರ, ಉಮಾಶ್ರೀ, ಸುನೀಲ್ ಕುಮಾರ್ ದೇಸಾಯಿ, ವಿ.ಮನೋಹರ್ ಗಳಷ್ಟೇ ಅಲ್ಲದೆ ಹಿರಿಯ ನಟಿ ಸತ್ಯಭಾಮ, ಕಾಮಿನಿ ಧರಣ್, ನಟ ಟೆನ್ನಿಸ್ ಕೃಷ್ಣ, ಹಾಗೂ ನಿರ್ದೇಶಕ ಮುರಳಿ ಕೃಷ್ಣ ಕೂಡ ಕಾಶಿ ಅವರ ತಂಡದಲ್ಲೇ ಕಲಿತವರು.


Click it and Unblock the Notifications











