ಸೋಷಿಯಲ್ ಮೀಡಿಯಾದಿಂದ ಹೊರಬಂದಿದ್ಯಾಕೆ.? ರಕ್ಷಿತ್ ಶೆಟ್ಟಿ ಬಾಯ್ಬಿಟ್ಟ ಕಠೋರ ಸತ್ಯ..
Recommended Video

ಸಂತಸದ ವಿಷಯಗಳನ್ನು ಹಂಚಿಕೊಳ್ಳಲು.. ಸಿನಿಮಾಗಳಿಗೆ ಪ್ರಚಾರ ನೀಡಲು.. ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನ ಟ್ರೆಂಡಿಂಗ್ ಮಾಡಲು ಸೋಷಿಯಲ್ ಮೀಡಿಯಾ ಉತ್ತಮ ವೇದಿಕೆ.
ಇದೇ ಕಾರಣಕ್ಕೆ ಹಲವಾರು ಸ್ಟಾರ್ ಗಳು ಸೋಷಿಯಲ್ ಮೀಡಿಯಾಗೆ ಜೋತು ಬಿದ್ದಿದ್ದಾರೆ. ಆದ್ರೆ, ಅದೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು, ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿರುವ ಕಾರಣ ತಾರೆಯರು ಒಬ್ಬೊಬ್ಬರಾಗಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗೆ ಗುಡ್ ಬೈ ಹೇಳುತ್ತಿದ್ದಾರೆ.
ತಮ್ಮ ನಗ್ನ ಚಿತ್ರಗಳನ್ನ ನೋಡಿ ನೋಡಿ ಬೇಸೆತ್ತು, ಫೇಸ್ ಬುಕ್ ನಿಂದ ಇತ್ತೀಚೆಗಷ್ಟೇ ಬಾಲಿವುಡ್ ನಟಿಯೊಬ್ಬರು ಹೊರಬಂದಿದ್ದರು. ಇದೀಗ ನಟ ರಕ್ಷಿತ್ ಶೆಟ್ಟಿ ಸರದಿ.
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಿಂದ ಜನಪ್ರಿಯತೆ ಪಡೆದ 'ಸಿಂಪಲ್ ಹುಡುಗ' ಇಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿದ್ದರು. ಆದ್ರೀಗ, ಸೋಷಿಯಲ್ ಮೀಡಿಯಾದ ಸಹವಾಸ ಸಾಕು ಅಂತಿದ್ದಾರೆ ರಕ್ಷಿತ್ ಶೆಟ್ಟಿ. ಏಕಾಏಕಿ ರಕ್ಷಿತ್ ಶೆಟ್ಟಿ ಇಂತಹ ನಿರ್ಧಾರ ಕೈಗೊಂಡಿದ್ದರ ಹಿಂದೆ ಒಂದು ಕಠೋರ ಕಾರಣ ಇದೆ. ಅದನ್ನ ಸ್ವತಃ ರಕ್ಷಿತ್ ಶೆಟ್ಟಿ ಬಾಯಿಬಿಟ್ಟಿದ್ದಾರೆ. ಮುಂದೆ ಓದಿರಿ...

ನೆಗೆಟಿವಿಟಿ ಹೆಚ್ಚಾಗಿದೆ
''ಸೋಷಿಯಲ್ ಮೀಡಿಯಾದಿಂದ ಹೊರಗೆ ಬರಲು ವೈಯುಕ್ತಿಕವಾಗಿ ಸುಮಾರು ಕಾರಣ ಇವೆ. ಸೋಷಿಯಲ್ ಮೀಡಿಯಾನ ನಾನು ಎಂಜಾಯ್ ಮಾಡುತ್ತಿಲ್ಲ. ಒಂದು ಕಾಲದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ, ಜನ ಯಾವ ತರಹ ಕಾಮೆಂಟ್ ಮಾಡುತ್ತಾರೆ ಅಂತ ನೋಡಲು ಕಾಯುತ್ತಿದ್ದೆ. ಆದ್ರೀಗ, ಇದನ್ನೆಲ್ಲ ನಾನು ಎಂಜಾಯ್ ಮಾಡುತ್ತಿಲ್ಲ. ಯಾಕಂದ್ರೆ, ಅಲ್ಲಿ ನೆಗೆಟಿವಿಟಿ ಹೆಚ್ಚಾಗಿದೆ'' ಅಂತಾರೆ ನಟ ರಕ್ಷಿತ್ ಶೆಟ್ಟಿ.

ನೆಗೆಟಿವಿಟಿಯಿಂದ ದುಷ್ಪರಿಣಾಮ
''ಅಲ್ಲಿನ ನೆಗೆಟಿವಿಟಿಯಿಂದ ನನ್ನ ಕೆಲಸದ ಮೇಲೆ ಪ್ರಭಾವ ಬೀರುತ್ತಿದೆ. ಜೀವನದಲ್ಲಿ ನಾವು ಖುಷಿ ಆಗಿರಬೇಕು. ಕೆಲಸ ಮಾಡುವಾಗ ನೆಮ್ಮದಿ ಇರಬೇಕು. ಸೋಷಿಯಲ್ ಮೀಡಿಯಾದಿಂದ ನೆಮ್ಮದಿ ಸಿಗುತ್ತಿಲ್ಲ. ಹೀಗಾಗಿ, ಅದರಿಂದ ಪ್ರಯೋಜನ ಇಲ್ಲ'' - ರಕ್ಷಿತ್ ಶೆಟ್ಟಿ, ನಟ

ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ
''ಸಿನಿಮಾ ಮಾಡಲು ವರ್ಷ ತೆಗೆದುಕೊಳ್ತೀವಿ. ಆದ್ರೆ, ಐದು ನಿಮಿಷದಲ್ಲಿ ಟ್ರೋಲ್ ಮಾಡುತ್ತಾರೆ. ಟ್ರೋಲ್ ಗಳಿಂದ ಯಾವುದೇ ಸಿನಿಮಾಗೆ ಸಹಾಯ ಆಗಲ್ಲ. ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ, ಓಡುತ್ತೆ. ಇಲ್ಲಾಂದ್ರೆ ಇಲ್ಲ.!'' - ರಕ್ಷಿತ್ ಶೆಟ್ಟಿ, ನಟ

ಬೇಸಿಕ್ ಫೋನ್ ಸಾಕು
''ಸೋಷಿಯಲ್ ಮೀಡಿಯಾ ನನಗೆ ಅವಶ್ಯಕತೆ ಇಲ್ಲ. ನಾನು ನೋಕಿಯಾ 1100 ಗೆ ಶಿಫ್ಟ್ ಆಗಬೇಕು ಅಂತಿದ್ದೀನಿ. ಯಾಕಂದ್ರೆ, ಅದೇ ಬೆಸ್ಟ್. ಅವಶ್ಯಕತೆ ಇದ್ದರೆ ಫೋನ್ ಮಾಡಬಹುದು. ಈ ವಾಟ್ಸ್ ಆಪ್ ಕೂಡ ನನಗೆ ಬೇಕಾಗಿಲ್ಲ'' - ರಕ್ಷಿತ್ ಶೆಟ್ಟಿ, ನಟ

ಯದ್ವಾತದ್ವಾ ಟ್ರೋಲ್ ಆಗಿದ್ದ ರಶ್ಮಿಕಾ-ರಕ್ಷಿತ್
'ಗೀತ ಗೋವಿಂದಂ' ಸಿನಿಮಾದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ನೋಡಿದ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಟ್ರೋಲ್ ಆಯ್ತು. ಅದ್ರಲ್ಲೂ, ಲಿಪ್ ಲಾಕ್ ವಿಡಿಯೋ ಲೀಕ್ ಆದ್ಮೇಲೆ ಕೆಲವರು ನಿಂದಿಸಲು ಆರಂಭಿಸಿದರು. ಸಾಲದಕ್ಕೆ, ರಕ್ಷಿತ್-ರಶ್ಮಿಕಾ ನಡುವೆ ಬ್ರೇಕಪ್ ಆಗಿದೆ ಅಂತ ಪುಕಾರು ಹಬ್ಬಿಸಿದರು.

ಪುಕ್ಕಟೆ ಸಲಹೆ
''ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿ ಚೆನ್ನಾಗಿದೆ. ಇಬ್ಬರೂ ಮೇಡ್ ಫಾರ್ ಈಚ್ ಅದರ್. ಹೀಗಾಗಿ, ನೀವಿಬ್ಬರೂ ಮದುವೆ ಆಗಿ'' ಅಂತ ಕೆಲವರು ಪುಕ್ಕಟೆ ಸಲಹೆ ನೀಡುತ್ತಿದ್ದರು. ಅಲ್ಲದೇ, ರಕ್ಷಿತ್ ಶೆಟ್ಟಿಯನ್ನ ಹೀಯಾಳಿಸುತ್ತಿದ್ದರು. ಇವನ್ನೆಲ್ಲ ನೋಡಿ ಬೇಸೆತ್ತ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗೆ ದೊಡ್ಡ ನಮಸ್ಕಾರ ಹಾಕಿದ್ದಾರೆ. ಕೆಲಸದ ಬಗ್ಗೆ ಮಾತ್ರ ಗಮನ ಹರಿಸಲು ತೀರ್ಮಾನಿಸಿದ್ದಾರೆ.


Click it and Unblock the Notifications











