ದರ್ಶನ್ 'ಜೈಲಿನಲ್ಲಿದ್ದಾಗ' ಕೆಂಡ ಕಾರುತ್ತಿದ್ದ ರಮ್ಯಾ ಈಗ 'ದಾಸ'ನ ಬಗ್ಗೆ ಹೇಳಿದ್ದೇನು..?
ಪೂರ್ವಾಶ್ರಮದಲ್ಲಿ ರಮ್ಯಾ ನಾಯಕಿಯಾಗಿದ್ದರಲ್ಲಾ ? ಆಗ ಇವರು ಕುಂತಲ್ಲಿ ನಿಂತಲ್ಲಿ ಬರೀ ವಿವಾದಗಳೇ ಸದ್ದು ಮಾಡುತ್ತಿದ್ದವು. ಆ ನಂತರ ಅದಾವ ಮಾರಿ ಮಸಣಿ ಕಣ್ಣು ಬಿತ್ತೋ ಪದ್ಮಾವತಿಗೆ ಕನ್ನಡ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆಯಾಗಿ ಪೂರ್ಣ ಪ್ರಮಾಣದಲ್ಲಿ ರಾಜಕಾರಣದ ಕಡೆ ಮುಖ ಮಾಡಿದರು. ಹಾಗಂಥ ವಿವಾದಗಳೇನು ಇವರ ಬೆನ್ನು ಬಿಡಲಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಕೂಡ ರಮ್ಯಾ ಬೇರೆಯವರ ಕಾಲೆಳೆಯಲು ಹೋಗಿ ಬಹುತೇಕ ಸಂದರ್ಭದಲ್ಲಿ ತಾವೇ ತೋಡಿದ ಖೆಡ್ಡಾಗೆ ತುಪುಕ್ ಎಂದು ಬೀಳುತ್ತಲೇ ಇದ್ದರು. ಟ್ರೋಲಿಗರಿಗೆ ಆಹಾರವೂ ಆಗಿದ್ದರು.
ಇಂಥಾ ರಮ್ಯಾ ಕಳೆದ ವರ್ಷ ಮಾಡಬಾರದ ಕೆಲಸ ಮಾಡಿ ದರ್ಶನ್ ಜೈಲು ಪಾಲಾದಾಗ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದರು. ಅಡಿಗಡಿಗೂ ದರ್ಶನ್ ವಿರುದ್ಧ ಕೆಂಡ ಕಾರಿದ್ದರು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ, ಜನರಿಗೆ ಹೊಡೆದು ಸಾಯಿಸುವುದಕ್ಕೆ ಆಗಲ್ಲ ಎಂದು ಹೇಳಿದ್ದರು. ದರ್ಶನ್ ಸುತ್ತಾ ಮುತ್ತಾ ಇರುವವರು ನಟೋರಿಯಸ್, ಅವರೆಲ್ಲಾ ರೌಡಿಗಳ ತರಹ. ಬೇಕಿದ್ದರೆ ಅವರನ್ನು ಹಾಗೆ ಕರೆಯಬಹುದು. ಹಾಗಾಗಿ ಅವರೆಲ್ಲಾ ಎಲ್ಲರ ಗಮನ ಸೆಳೆಯುತ್ತಾರೆ. ಎಲ್ಲಾ ಅಂದುಕೊಂಡಿರುವಂತೆ ದರ್ಶನ್ಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇಲ್ಲ. ಇಂಡಸ್ಟ್ರಿಯಲ್ಲಿ ಮತ್ತಷ್ಟು ಕಲಾವಿದರಿಗೆ ಇದಕ್ಕಿಂತ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಹಿಂದೆ ಕೂಡ ಜೈಲಿಗೆ ಹೋಗಬೇಕಿತ್ತು. ಹೋಟೆಲ್ ವೇಯ್ಟರ್ಗೆ ಹೊಡೆದಿದ್ದ ಘಟನೆ ಸಹ ನಡೆದಿತ್ತು ಎಂದು ಕೂಡ ರಮ್ಯಾ ಹೇಳಿದ್ದರು.

ದರ್ಶನ್ ಕರಾಳ ಮುಖ ಈಗ ಬಯಲಾಗುತ್ತಿದೆ. ಆತನಿಂದ ನೊಂದಿರುವವರು ಈಗ ಹೊರಗೆ ಬಂದು ಮಾತನಾಡುತ್ತಿದ್ದಾರೆ. ಈ ಬಾರಿ ಕೂಡ ಅದೇ ರೀತಿ ತಪ್ಪಿಸಿಕೊಳ್ಳಬಹುದು ಎಂದಕೊಂಡಿದ್ದರು ಅನ್ನಿಸುತ್ತದೆ. ಆದರೆ ಆ ರೀತಿ ಆಗಲಿಲ್ಲ. ಈ ಬಾರಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಆ ರೀತಿ ಆಗಲ್ಲ ಎನಿಸುತ್ತದೆ ಎಂದು ರಮ್ಯಾ ತಮ್ಮ ಆಶಯವನ್ನು ಕೂಡ ವ್ಯಕ್ತಪಡಿಸಿದ್ದರು.
ಆದರೆ ಇವರ ಈ ಆಶಯ ಈಡೇರಲಿಲ್ಲ. ಯಾಕೆಂದರೆ ದರ್ಶನ್ ಜಾಮೀನು ಪಡೆದು ಸದ್ಯ ಹೊರ ಬಂದಿದ್ದಾರೆ. ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಭೆ-ಸಮಾರಂಭಕ್ಕೆಲ್ಲ ಆರಾಮಾಗಿ ತೆರಳುತ್ತಿದ್ದಾರೆ. ಇಷ್ಟೇ ಯಾಕೆ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಮರು ಚಾಲನೆ ನೀಡುವ ಆಲೋಚನೆಯಲ್ಲಿ ಕೂಡ ಇದ್ದಾರೆ. ಹೀಗಿರುವಾಗ ರಮ್ಯಾಗೆ ದರ್ಶನ್ ಕುರಿತ ಪ್ರಶ್ನೆ ಎದುರಾಗಿದೆ.
ಹೌದು, ರಮ್ಯಾ ನಿನ್ನೆ ರಾಜು ಜೇಮ್ಸ್ ಬಾಂಡ್ ಚಿತ್ರದ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಸಮಯದಲ್ಲಿ ರಮ್ಯಾ ಅವರಿಗೆ ದರ್ಶನ್ ಕುರಿತ ಪ್ರಶ್ನೆಯನ್ನು ಕೇಳಲಾಗಿದೆ. ಆದರೆ ಈ ಬಾರಿ ರಮ್ಯಾ ಮಾತನಾಡಲು ನಿರಾಕರಿಸಿದ್ದಾರೆ. ದರ್ಶನ್ ಹೆಸರು ಕಿವಿಗೆ ಬೀಳುತ್ತಿದ್ದಂತೆಯೇ ಮುಖ ತಿರುಗಿಸಿದ ರಮ್ಯಾ ನೋ ನೋ ಎಂಬಂತೆ ತಲೆಯಾಡಿಸಿದ್ದಾರೆ. ಮೇಲು ಧ್ವನಿಯಲ್ಲಿ ನೋ ಕಾಮೆಂಟ್ಸ್ ಎಂದು ಹೇಳಿದ್ದಾರೆ. ಬೇರೆ ಮಾಧ್ಯಮದವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಮತ್ತೊಂದು ಕಡೆ ತೆರಳಿದ್ದಾರೆ. ಸದ್ಯ ದರ್ಶನ್ ಕುರಿತು ರಮ್ಯಾ ಅವರು ನೀಡಿರುವ ಈ ರಿಯ್ಯಾಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಳಗಡೆ ಇದ್ದಾಗ ಮಾತನಾಡುವ ಶಕ್ತಿ ಹೊರಗಡೆ ಬಂದ ನಂತರ ಯಾಕೆ ಇರಲ್ಲ ಎನ್ನುವ ಪ್ರಶ್ನೆಯನ್ನು ದರ್ಶನ್ ಅಭಿಮಾನಿ ಬಳಗ ಕೇಳುತ್ತಿದೆ. ಇನ್ನು ಕೆಲವರು ರಮ್ಯಾ ಅವರ ಪರ ವಕಾಲತ್ತು ವಹಿಸಿದ್ದಾರೆ. ರಮ್ಯಾ ನಯವಾಗಿ ಆ ಪ್ರಶ್ನೆಯನ್ನು ತಿರಸ್ಕರಿಸಿದ್ದಾರೆ ಅದರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರೆ.


Click it and Unblock the Notifications











