ಬಾಂಬೆಯಿಂದ ಬರುವ ನಾಯಕಿಯರಿಗೇ ಇಲ್ಲಿ ಅಗ್ರ ತಾಂಬೂಲ
ಉದ್ಭವ ಚಿತ್ರದಿಂದ ಹಿಡಿದು ಕನ್ನಡಕ್ಕೆ ಹತ್ತಾರು ಕಾದಂಬರಿ ಆಧಾರಿತ ಚಿತ್ರಗಳನ್ನು ನೀಡಿ, ಕೊನೆಗೆ ರೀಮೇಕ್ಗೇ ಶರಣಾಗಿದ್ದ ನಿರ್ದೇಶಕ ಕೋಡ್ಲು ರಾಮಕೃಷ್ಣ ಈಗ ಮತ್ತೊಮ್ಮೆ ಕಾದಂಬರಿ ಆಧಾರಿತ ಚಿತ್ರ ನಿರ್ದೇಶನದೆಡೆಗೆ ವಾಲಿದ್ದಾರೆ. ಬಲು ದುಬಾರಿಯಾದ ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಅನ್ನು ನಿರ್ದೇಶಿಸುತ್ತಿದ್ದಾರೆ.
ಜುಗಾರಿ ಕ್ರಾಸ್ ನಿರ್ದೇಶಿಸುತ್ತಿರುವ ಹಿನ್ನೆಲೆಯಲ್ಲಿ ಆವರೇಜ್ ನಿರ್ದೆಶಕರೆನಿಸಿಕೊಂಡಿದ್ದ ಕೋಡ್ಲು ಅವರ ತಾರಾಮೌಲ್ಯ ಏರಿದೆ. ಮಾಧ್ಯಮ ಪ್ರತಿನಿಧಿಗಳು ಕೋಡ್ಲು ಅವರ ಸಂದರ್ಶನಗಳನ್ನೂ ಪ್ರಕಟಿಸುತ್ತಿದ್ದಾರೆ. ಹೀಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೋಡ್ಲು, ಕರ್ನಾಟಕದಲ್ಲಿ ಅದೂ ಬೆಂಗಳೂರಲ್ಲಿ ಚೆಂದುಳ್ಳಿ ಚೆಲುವೆಯರಿಗೆ ಕೊರತೆಯೇ? ಸಾವಿರಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ನಾಯಕಿಯರಾಗುವಷ್ಟು ಚೆಂದದ ಹುಡುಗಿಯರು ಬೆಂಗಳೂರಲ್ಲೇ ಇದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
1000 ಹಿಂದಿ ಚಿತ್ರಕ್ಕೆ ಸಾಕಾಗುವಷ್ಟು ಹೀರೋಯಿನ್ಗಳು ಬೆಂಗಳೂರಲ್ಲೇ ಇದ್ದಾರಾದರೂ, ಕನ್ನಡ ಚಿತ್ರರಂಗದಲ್ಲಿ ಮಾತ್ರ ಪರಭಾಷಾ ನಟಿಯರ ದಂಡೇ ಕಾಣುತ್ತಿದೆ. ಮನೆಯವಳಿಗಿಂತ ನೆರೆಮನೆಯಾಕೆಯೇ ಚೆನ್ನ ಎನ್ನುವ ಧೋರಣೆಯೇ ಇದಕ್ಕೆ ಕಾರಣ. ಉದಾ: ಲಂಕೇಶನ ರಾಣಿಯಾಗಿ ಬಾಲಿವುಡ್ ಬೆಡಗಿ ಶೀತಲ್ ಬೇಡಿ ಬಂದರೆ, ಅವಳಿ ಕಥೆಯಿಂದ ವಿವಾದ ಸೃಷ್ಟಿಸಿದ ಮುಂಬಯಿ ಬೆಡಗಿ ಸಾಕ್ಷಿ ಶಿವಾನಂದ್ ಸೈನಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಲಾಟೆ ಅಳಿಯಂದಿರು ಚಿತ್ರದಲ್ಲೂ ಸಾಕ್ಷಿ ನಟಿಸಿದ್ದರು.
ಇನ್ನು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಆಂಧ್ರ ಹೆಂಡ್ತಿಯ ನಾಯಕಿ ರಮ್ಯಕೃಷ್ಣ ನೀಲಾಂಬರಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಮಾಫಿಯಾ ಚಿತ್ರದ ಸ್ವರ್ಣ, ಉಸಿರೆ ಚಿತ್ರದ ನಾಯಕಿ ರಚನಾ, ಆಂಟಿ ಪ್ರೀತ್ಸೆಯ ಖುಷ್ಬೂ, ಕೇರಳದಿಂದ ವಲಸೆ ಬಂದ ಚಾರುಲತಾ, ಉಪೇಂದ್ರ ಚಿತ್ರದ ರವೀನಾ ಟಂಡನ್, ಜನುಮದ ಜೋಡಿಯ ಶಿಲ್ಪಾ, ದಿಗ್ಗಜರು ಚಿತ್ರದ ಸಾಂಘವಿ, ರಕ್ಷಾ .. ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಕನ್ನಡದಲ್ಲೇನು ಕಲಾವಿದರಿಗೆ ಕೊರತೆಯೇ? ನಂ 1. ಸ್ಥಾನದಲ್ಲಿರುವ ಪ್ರೇಮ, ನೂರಾರು ಚಿತ್ರಗಳಲ್ಲಿ ನಟಿಸಿರುವ ಶ್ರುತಿ, ಹಲವಾರು ಪ್ರಶಸ್ತಿ ದೋಚಿಕೊಂಡ ಕೃಷ್ಣ ಸುಂದರಿ ತಾರಾ, ಚಂದ್ರಮುಖಿ ಪ್ರಾಣಸಖಿಯ ಭಾವನಾ, ನಾಗಮಂಡಲದ ವಿಜಯಲಕ್ಷ್ಮೀಯೇ ಮೊದಲಾದ ಗ್ಲಾಮರಸ್ ಹೀರೋಯಿನ್ಗಳಿದ್ದರೂ, ಅದೇಕೋ ನಿರ್ಮಾಪಕರಿಗೆ ಬಾಲಿವುಡ್ ಬೆಡಗಿಯರ ಮೇಲೆ ಎಲ್ಲಿಲ್ಲದ ವ್ಯಾಮೋಹ. ಕೋಡ್ಲು ಚಿತ್ರಗಳಲ್ಲಾದರೂ ಅಚ್ಚ ಕನ್ನಡದ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಾರೇನೋ ಕಾದು ನೋಡೋಣ.
ಅಂದಹಾಗೆ ಕೋಡ್ಲು ಈಗ ನಾ. ಡಿಸೋಜರ ಕಾದಂಬರಿ ಆಧರಿಸಿ ಚಿತ್ರಕಥೆ ಬರೆಯುತ್ತಿದ್ದಾರೆ, ವರ್ಷದ ಅಂತ್ಯಕ್ಕೆ ಸಿ.ಎನ್. ಮುಕ್ತಾ ಅವರ ಕತೆ ರೆಡಿ ಆಗತ್ತೆ ಅಂತ್ಲೂ ಹೇಳಿದ್ದಾರೆ.


Click it and Unblock the Notifications