ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ: ಹೈಕೋರ್ಟ್ ಆದೇಶದಿಂದ ಹಂಸಲೇಖ ನಿರಾಳ
ಸಂಗೀತ ನಿರ್ದೇಶಕ, ಚಿತ್ರಸಾಹಿತಿ ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದು ದೊಡ್ಡ ವಿವಾದವಾಗಿ ಮಾರ್ಪಟ್ಟು ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಹೈಕೋರ್ಟ್ ನೀಡಿರುವ ಆದೇಶದಿಂದ ಹಂಸಲೇಖ ನಿರಾಳರಾಗಿದ್ದಾರೆ.
ಪೇಜಾವರ ಶ್ರೀಗಳ ವಿರುದ್ಧ ನೀಡಲಾಗಿದ್ದ ಹೇಳಿಕೆಯನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾ ಸೇರಿದಂತೆ ಇನ್ನೂ ಕೆಲವರು ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿರುದ್ಧ ದೂರು ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಹಂಸಲೇಖ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ತನಿಖೆಗೆ ಸದ್ಯಕ್ಕೆ ತಡೆ ನೀಡಿದೆ. ಹಂಸಲೇಖ ಅವರ ಪರವಾಗಿ ಸಿಎಸ್ ದ್ವಾರಕಾನಾಥ್, ಕಾಶೀನಾಥ್ ಅವರುಗಳು ವಾದ ಮಂಡಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಸಲೇಖ ಅವರು ನವೆಂಬರ್ 25ರಂದು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದರು. ಅಂದು ಠಾಣೆಯ ಮುಂದೆ ಹಂಸಲೇಖ ವಿರೋಧವಾಗಿ ಹಾಗೂ ಹಂಸಲೇಖ ಪರವಾಗಿ ಚೇತನ್ ಅಹಿಂಸ ಹಾಗೂ ಇನ್ನೂ ಕೆಲವರು ಪ್ರತಿಭಟನೆ ನಡೆಸಿದ್ದರು.
ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ್ದ ಹಂಸಲೇಖ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟಿದ್ದರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು. ದಲಿತರ ಮನೆಗೆ ಮೇಲ್ಜಾತಿಯವರು ಹೋದರೂ ಅಲ್ಲಿಯೂ ಅವರು ಮೇಲ್ಜಾತಿಯವರಾಗಿಯೇ ವರ್ತಿಸುತ್ತಾರೆ ಎಂಬುದನ್ನು ಹಂಸಲೇಖ ತಮಾಷೆ ಧಾಟಿಯಲ್ಲಿ ಹೀಗೆ ಹೇಳಿದರು.
ಹಂಸಲೇಖರ ಈ ಹೇಳಿಕೆ ತೀವ್ರ ವಿವಾದ ಹುಟ್ಟುಹಾಕಿತ್ತು, ಬ್ರಾಹ್ಮಣ ಸಮುದಾಯ ಹಾಗೂ ಪೇಜಾವರ ಶ್ರೀಗಳ ಭಕ್ತರು ಹಂಸಲೇಖರ ಮಾತನ್ನು ತೀವ್ರವಾಗಿ ಖಂಡಿಸಿದರು. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಹಂಸಲೇಖರ ಹೇಳಿಕೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ತಮ್ಮ ಹೇಳಿಕೆ ಬಗ್ಗೆ ಹಂಸಲೇಖ ಕ್ಷಮೆ ಸಹ ಕೇಳಿದರು. ಆದರೂ ಅವರ ವಿರುದ್ಧ ದೂರು ದಾಖಲಿಸಲಾಗಿದ್ದು, ಹಂಸಲೇಖ ಅವರು ಶ್ರೀಗಳ ಬೃಂದಾವನದ ಮುಂದೆ ನಿಂತು ಕ್ಷಮೆ ಕೇಳಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.


Click it and Unblock the Notifications











