ಬಿಗ್ಬಾಸ್ ಮನೆಯಿಂದ ಹೊರಬಂದ ಪ್ರಶಾಂತ್ ಸಂಬರ್ಗಿಗೆ ಹೈಕೋರ್ಟ್ನಿಂದ ರಿಲೀಫ್!
ಪ್ರಶಾಂತ್ ಸಂಬರ್ಗಿ ಎರಡನೇ ಬಾರಿ ಬಿಗ್ಬಾಸ್ ಮನೆಯ ಒಳಗೆ ಹೋದವರು ಕಳೆದ ವಾರವಷ್ಟೆ ಮನೆಯಿಂದ ಹೊರಬಂದಿದ್ದಾರೆ. ಹೊರಗೆ ಬಂದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಶಾಂತ್, ಧರ್ಮದ ವಿಷಯವಾಗಿ ವ್ಯಂಗ್ಯದ ಪೋಸ್ಟ್ಗಳನ್ನು ಹಾಕಲು ಆರಂಭಿಸಿದ್ದಾರೆ.
ಈ ನಡುವೆ ಕನ್ನಡದ ನಟಿಯೊಬ್ಬರು ಪ್ರಶಾಂತ್ ಸಂಬರ್ಗಿ ವಿರುದ್ಧ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಹೈಕೋರ್ಕ್ ವಿಚಾರಣೆ ನಡೆಸಿ ಪ್ರಶಾಂತ್ ಸಂಬರ್ಗಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ನಟಿ ಶ್ರುತಿ ಹರಿಹರನ್, ಕೆಲ ವರ್ಷಗಳ ಹಿಂದೆ ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದ್ದರು. ಆ ದೂರಿನ ವಿರುದ್ಧ ಹೈಕೋರ್ಟ್ಗೆ ಪ್ರಶಾಂತ್ ಸಂಬರ್ಗಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ದೂರಿನ ವಿರುದ್ಧ ತನಿಖೆಗೆ ತಡೆಯಾಜ್ಞೆ ನೀಡಿದೆ.
'ವಿಸ್ಮಯ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಟ ಅರ್ಜುನ್ ಸರ್ಜಾ ತಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡರು, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಆಗ ಅರ್ಜುನ್ ಸರ್ಜಾ ಪರವಾಗಿ ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಪ್ರಶಾಂತ್ ಸಂಬರ್ಗಿ, ಶ್ರುತಿ ಹರಿಹರನ್ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದರು.
ಅದೇ ಸಮಯದಲ್ಲಿ ನಟಿ ಶ್ರುತಿ ಹರಿಹರನ್, ಪ್ರಶಾಂತ್ ಸಂಬರ್ಗಿ ವಿರುದ್ಧ ಮಹಿಳೆಯ ಮಾನವಹಾನಿ, ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಪ್ರಕರಣಗಳನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್, ಪ್ರಶಾಂತ್ ಸಂಬರಗಿಗೆ ಸಮನ್ಸ್ ನೀಡಿತ್ತು.

ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿ ಪ್ರಶಾಂತ್ ಸಂಬರಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸಂಬರಗಿ ವಿರುದ್ಧ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ವಿಚಾರಣೆಯನ್ನು 2023ರ ಫೆಬ್ರುವರಿ 1ಕ್ಕೆ ಮುಂದೂಡಿದೆ. ಅಲ್ಲದೇ ಈ ಬಗ್ಗೆ ಹೈಕೋರ್ಟ್, ನಟಿ ಶೃತಿ ಹರಿಹರನ್ಗೆ ನೋಟಿಸ್ ಸಹ ನೀಡಿದೆ.


Click it and Unblock the Notifications











