CCL 2026 ; ಕಳೆದ ಬಾರಿಯ ಚಾಂಪಿಯನ್ ಪಂಜಾಬ್ಗೆ ಮುಖಭಂಗ, ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಕಿಚ್ಚನ ಪಡೆ
ಸಿಸಿಎಲ್ ಶುರುವಾಗುವ ಸಮಯದಲ್ಲಿ ಪ್ರತಿ ಬಾರಿ ಕುತೂಹಲ ಮನೆ ಮಾಡುತ್ತೆ. ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗುತ್ತೆ. ಈ ಬಾರಿ ಕಪ್ ಯಾರದ್ದು ಎನ್ನುವ ಪ್ರಶ್ನೆ ಕೂಡ ಕೇಳಿ ಬರಲು ಶುರುವಾಗುತ್ತೆ. ಯಾಕೆಂದರೆ, ಸಿಸಿಎಲ್ ಯಾವ ಐಪಿಎಲ್ಗಿಂತ ಕಡಿಮೆ ಇಲ್ಲ. ಇಲ್ಲಿಯೂ ಅದೇ ಕಿಚ್ಚಿರುತ್ತೆ. ಗೆಲ್ಲುವ ಹುಚ್ಚಿರುತ್ತೆ. ರನ್ ಗಳಿಸಲು, ವಿಕೆಟ್ ಕಬಳಿಸಲು ಇಲ್ಲಿಯೂ ಕೂಡ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿರುತ್ತೆ.
ಕಳೆದ ಹನ್ನೊಂದು ವರ್ಷಗಳಿಂದ ಸಿಸಿಎಲ್ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದಿರುವುದೇ ಸಿಸಿಎಲ್ನ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಇಂಥಾ ಸಿಸಿಎಲ್ ಈ ಬಾರಿ ಮತ್ತೆ ಶುರುವಾಗಿದೆ. ಇಂದು (ಜನವರಿ 16 ) ಕರ್ನಾಟಕ ಬುಲ್ಡೋಜರ್ಸ್ ಮತ್ತು ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ದಿ ಶೇರ್ ನಡುವೆ ಮೊದಲ ಪಂದ್ಯ ನಡೆದಿದೆ. ಕಳೆದ ಬಾರಿ ಕೊನೆಯ ಹಂತದಲ್ಲಿ ಎಡವಿದ್ದ ಕರ್ನಾಟಕ ಬುಲ್ದೋಜರ್ಸ್ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣ್ಣು ಮುಕ್ಕಿಸಿದೆ.

ವಿಶಾಖಪಟ್ಟಣಂನ ACA-VDCA ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ಡಿ ಸಂಧು ನೇತೃತ್ವದ ಪಂಜಾಬ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಇನ್ನೂ ಈ ಹಿಂದೆ ಎರಡು ತಂಡಕ್ಕೆ ಎರಡು ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶ ಇತ್ತು. ಹತ್ತು-ಹತ್ತು ಓವರ್ಗಳ ಹಣಾಹಣಿ ನಡೆಯುತ್ತಿತ್ತು. ಆದರೆ.. ಈ ಬಾರಿ ಈ ಸಂಪ್ರದಾಯವನ್ನು ಬದಲಿಸಲಾಗಿತ್ತು. ಎರಡು ಹತ್ತು ಓವರ್ ಅವಕಾಶ ನೀಡದೇ ಒಮ್ಮೆಲೆ 20 ಓವರ್ಗಳಿಗೆ ಮಾರ್ಪಾಡು ಮಾಡಲಾಗಿತ್ತು. ಈ ಬದಲಾದ ನಿಯಮದಡಿ ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆರಂಭದಲ್ಲಿಯೇ ಆಘಾತವಾಯ್ತು.
ಪಂದ್ಯದ ನಾಲ್ಕನೇ ಓವರ್ನಲ್ಲಿ ದಕ್ಷ್ ಸಿಂಗ್ ಹ್ಯಾಟ್ರಿಕ್ ವಿಕೆಟ್ ಪಡೆದರು. ಡಾರ್ಲಿಂಗ್ ಕೃಷ್ಣ.. ರಾಜೀವ್ ಹನು ಮತ್ತು ಕಿಚ್ಚ ಸುದೀಪ್ ಅವರ ವಿಕೆಟ್ ಪಡೆದು ದಕ್ಷ್ ಸಿಂಗ್ ಈ ಬಾರಿಯ ಮೊದಲ ಪಂದ್ಯದಲ್ಲಿ ಈ ಮೂಲಕ ದಾಖಲೆ ಬರೆದರು. ಆ ನಂತರ ಪ್ರದೀಪ್ ಕೂಡ ನಿಂಜಾಗೆ ವಿಕೆಟ್ ಒಪ್ಪಿಸಿದರು.
ಹೀಗೆ ಐದು ಓವರ್ನಲ್ಲಿ ಕೇವಲ 32 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ 9 ಓವರ್ಗಳಲ್ಲಿ 53 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಆಗ ತಂಡಕ್ಕೆ ಕರಣ್ ಆರ್ಯನ್ ಆಧಾರವಾದರು. ಅಪಾಯದಿಂದ ಪಾರು ಮಾಡಿದರು.

ಪಂಜಾಬ್ ಬೌಲರ್ಸ್ಗಳ ಬೆವರಿಳಿಸಿದ ಕರಣ್ ಆರ್ಯನ್ ಕೇವಲ 33 ಎಸೆತಗಳಲ್ಲಿ 83ರನ್ ಸಿಡಿಸಿದರು. ಕರಣ್ ಆರ್ಯನ್ ಅವರ ಈ ಅಬ್ಬರದಿಂದ ಕರ್ನಾಟಕ ಬುಲ್ಡೋಜರ್ಸ್ ತಂಡ 20 ಓವರ್ಗಳಲ್ಲಿ 170ರನ್ಗಳನ್ನು ಗಳಿಸಿತ್ತು. 171 ರನ್ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ತಂಡಕ್ಕೆ ಮೊದಲ ಎಸೆತದಲ್ಲಿಯೇ ಪ್ರದೀಪ್ ಆಘಾತ ನೀಡಿದರು. ಎರಡು ಓವರ್ನಲ್ಲಿ ಎರಡು ವಿಕೆಟ್ ಪಡೆದರು. ಆ ನಂತರ ಸುನಿಲ್ ರಾವ್ ಮತ್ತೊಂದು ವಿಕೆಟ್ ಕಬಳಿಸಿದರು.
5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದ್ದ ಪಂಜಾಬ್ ತಂಡ ಆ ನಂತರ ಚೇತರಿಸಿಕೊಳ್ಳಲೇ ಇಲ್ಲ. ರಾಹುಲ್ ಜೇಟ್ಲಿ ತಂಡವನ್ನು ಅಪಾಯದಿಂದ ಪಾರು ಮಾಡುವ ಪ್ರಯತ್ನ ಮಾಡಿದರಾದರೂ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. 44 ಬಾಲ್ಗಳಲ್ಲಿ 68 ರನ್ ಬಾರಿಸಿದ ರಾಹುಲ್ 13ನೇ ಓವರ್ನಲ್ಲಿ ಕರಣ್ ಆರ್ಯನ್ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಂಜಾಬ್ ದಿ ಶೇರ್ ತಂಡ 139ರನ್ಗಳಿಗೆ ಆಲೌಟ್ ಆಯ್ತು. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 31ರನಗಳಿಂದ ಗೆಲುವಿನ ನಗೆಯನ್ನು ಬೀರಿತು.


Click it and Unblock the Notifications











