ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ 'ಹೋಮ್ ಸ್ಟೇ' ಹೈಲೈಟ್ಸ್
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸಲ್ಲಿ ಇತ್ತೀಚೆಗೆ ಬರುತ್ತಿರುವ ಹಾರರ್ ಚಿತ್ರಗಳ ಸದ್ದು ಜೋರಾಗಿಯೇ ಇದೆ. ಈಗ ಇನ್ನೊಂದು ಕನ್ನಡ ಹಾರರ್ ಚಿತ್ರ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಬರುತ್ತಿದೆ. ಅಪ್ಪಟ ಕನ್ನಡ ಚಿತ್ರವಾದ 'ಹೋಮ್ ಸ್ಟೇ' ಚಿತ್ರ ಹಿಂದಿ, ತಮಿಳು ಭಾಷೆಯಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ.
ಸುಳ್ಯ ಮೂಲದ ಸಂತೋಷ್ ಕೊಡಂಕಿರಿ ಈ ಚಿತ್ರದ ನಿರ್ದೇಶಕರು. ಸುಳ್ಯದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ನಂತರ ಬೆಂಗಳೂರುನಲ್ಲಿ ಸಿನಿಮಾ ಇಂಡಷ್ಟ್ರಿಗೆ ಅಡಿಯಿಟ್ಟವರು. ಆರಂಭದಲ್ಲಿ ಜಾಹೀರಾತು ನಿರ್ದೇಶಕ. ಸರ್ಕಾರ ಮತ್ತು ಎನ್ ಜಿಓಗಳಿಗೆ ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಹೋಮ್ ಸ್ಟೇ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ. [ಮಂಗಳೂರು ಹೋಮ್ ಸ್ಟೇ ಕಥೆ ಹಾರರ್ ಚಿತ್ರ]
ಈ ಚಿತ್ರವನ್ನು ಬೆಂಗಳೂರು, ಮೈಸೂರು, ಮಡಿಕೇರಿ, ವಿರಾಜಪೇಟೆಯಲ್ಲಿ 35 ದಿನಗಳ ಚಿತ್ರೀಕರಣ ನಡೆದಿದೆ. ಭಾರತದ ಸ್ಕಾಟ್ಲೆಂಡ್ ಎಂದೇ ಗುರುತಿಸಲ್ಪಡುವ ಕೊಡಗಿನ ರಮ್ಯ ಪರಿಸರದ ಹಿನ್ನಲೆಯಲ್ಲಿ ರೋಚಕ, ಕುತೂಹಲತೆ ಹುಟ್ಟಿಸುವ ಕಥೆ ಸಾಗುತ್ತದೆ. ಇಂದಿನ ಯುವ ಪೀಳಿಗೆಯ ವೀಕೆಂಡ್ ವಿಹಾರಗಳಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಲ್ಪಡುವ 'ಹೋಮ್ ಸ್ಟೇ'ನಲ್ಲಿ ನಡೆಯುವ ಒಂದು ಸನ್ನಿವೇಶವೇ ಚಿತ್ರದ ಕಥಾವಸ್ತು.

ತನ್ನ ಭಾವಿ ಪತಿಗೆ ಸರ್ಪ್ರೈಸ್ ನೀಡಲು ಹೊರಡುವ ನಾಯಕಿ
ಚೆಲುವಿನ ಕಥಾ ನಾಯಕಿ ಅಕ್ಷರ ತನ್ನ ಪ್ರಯಾಣದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುತ್ತಾಳೆ. ಫೇಸ್ ಬುಕ್ ನಲ್ಲಿ ತಾನು ಹೋಗುತ್ತಿರುವ ಸ್ಥಳದಲ್ಲಿನ ಹೋಮ್ ಸ್ಟೇ ಕುರಿತಂತೆ ಹುಡುಕಿ, ಹೋಗುತ್ತಿರುವ ಸ್ಥಳ ಮತ್ತು ಉದ್ದೇಶಗಳನ್ನು ಸ್ಟೇಟಸ್ ಮೆಸೇಜ್ ಹಾಕಿ, ಹಿಲ್ ಸ್ಟೇಷನಲ್ಲಿ ವಾಸವಿರುವ ತನ್ನ ಭಾವಿ ಪತಿಗೆ ಸರ್ಪ್ರೈಸ್ ನೀಡಲು ಹೊರಡುತ್ತಿರುತ್ತಾಳೆ.

ನಗರ ಪ್ರದೇಶದಿಂದ ಹೊರಗಿರುವ ಹೋಮ್ ಸ್ಟೇ
ನಾಯಕಿ ತಂಗುವ ಹೋಮ್ ಸ್ಟೇ ಪ್ರದೇಶ ನಗರದಿಂದ ಸ್ವಲ್ಪ ದೂರದಲ್ಲಿ ಸುಂದರ ಪರಿಸರದ ಹಿನ್ನೆಲೆಯಲ್ಲಿ ನಿರ್ಮಿತಿಗೊಂಡಿರುವ ಆಕರ್ಷಕ ವಾಸ್ತು ಮತ್ತು ವಿನ್ಯಾಸವಿರುವ ಕಟ್ಟಡವಾಗಿರುತ್ತದೆ. ಆ ಮನೆಯ ಮಾಲಿಕ ನಾಯಕಿಗೆ ಮನೆಯನ್ನೆಲ್ಲ ತೋರಿಸಿ, ಆಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಹೋಮ್ ಸ್ಟೇಗೆ ಹೊಂದಿಕೊಂಡಂತೆ ಇರುವ ತನ್ನ ಮನೆಯ ಕಡೆ ಹೋಗುತ್ತಾನೆ.

ಒಂಟಿ ನಾಯಕಿಗೆ ಭಯ ಹುಟ್ಟಿಸುವ ಘಟನೆಗಳು
ಕತ್ತಲು ಆವರಿಸುತ್ತಿರುವಂತೆ ಈ ಸಿನಿಮಾದಲ್ಲಿನ ರೋಚಕವೆನಿಸುವಂತ ಭಯ ಹುಟ್ಟಿಸುವಂತ ಘಟನೆಗಳು ಒಂಟಿ ನಾಯಕಿಗೆ ಎದುರಾಗುತ್ತವೆ. ಅದಕ್ಕೆ ಪೂರಕವಾಗಿ ನಿಸರ್ಗದೊಳಗಿನ ರಾತ್ರಿಯ ನೀರವತೆಯಲ್ಲಿ ಹೊರಹೊಮ್ಮುವ ಶಬ್ದಗಳು ಮತ್ತಷ್ಟು ಭಯ ಹುಟ್ಟಿಸುತ್ತವೆ. ಮೊದಲಿಗೆ ತನ್ನ ಸಹಾಯಕ್ಕೆಂದು ಮಾಲಿಕ ಬಿಟ್ಟು ಹೋಗಿರುವ ಸಹಾಯಕಿ ಎದುರಾದಾಗಲೆಲ್ಲ ನಾಯಕಿ ಬೆಚ್ಚಿ ಬೀಳುತ್ತಾಳೆ.

ತನ್ನ ರೂಮಿನಲ್ಲಿ ಅನಾಮಿಕನ ನೆರಳು
ಆಕೆಯ ನೋಟ ನಾಯಕಿಗೆ ಮತ್ತಷ್ಟು ಭಯ ಹುಟ್ಟಿಸುತ್ತವೆ ಮತ್ತು ಆಕೆ ನಾಯಕಿಗೆ ಹಾನಿ ಮಾಡಲು ಬಂದಂತೆ ಭಾಸವಾಗುತ್ತಿರುತ್ತದೆ. ಸಹಾಯಕ್ಕೆಂದು ಕಾವಲುಗಾರನನ್ನು ಕರೆದರೆ ಅಲ್ಲಿ ಕಾವಲುಗಾರ ಇರುವುದಿಲ್ಲ. ಭಯದಿಂದ ಓಡಿ ಬಂದು ರೂಮು ಸೇರಿಕೊಳ್ಳುವ ನಾಯಕಿಗೆ ತನ್ನ ರೂಮಿನಲ್ಲಿ ಅನಾಮಿಕನ ನೆರಳು ಕಾಣುತ್ತದೆ. ಆ ನೆರಳು ಆಕೆಯನ್ನು ಹಿಂಬಾಲಿಸುತ್ತ ಹೋಗುತ್ತದೆ. ಯಾರಿಗಾದರು ಕಾಲ್ ಮಾಡಿ ಕರೆಯೋಣವೆಂದು ಹುಡುಕಿದರೆ ಮೊಬೈಲ್ ಸಿಗುವುದಿಲ್ಲ.

ಭಯದ ವಾತಾವರಣದಲ್ಲಿ ನಾಯಕಿ ವಿಲವಿಲ
ಸಮಯ ಕಳೆದಂತೆಲ್ಲ ಆ ಭಯದ ವಾತಾವರಣದಲ್ಲಿ ನಾಯಕಿಯ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತ ಹೋಗುತ್ತದೆ. ನಾಯಕಿ ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಮಟ್ಟಿಗೆ ಹೋಗುತ್ತದೆ. ಆಕೆಗೆ ಎದುರಾಗುವ ಸಂಗತಿಗಳೆಲ್ಲ, ತಾನು ಇಲ್ಲಿಗೆ ಹೊರಡುವ ಮುಂಚೆ ಬೆಳಗ್ಗೆ ಟೀವಿಯಲ್ಲಿ ಕಂಡ ಕೊಲೆಯ ಸುದ್ದಿಯನ್ನು ನೆನೆಪಿಸಿಕೊಳ್ಳುವಂತೆ ಮಾಡಿ, ತನ್ನನ್ನು ಯಾರೋ ಕೊಲೆಮಾಡಲು ಪ್ರಯತ್ನಿಸುತ್ತಿರಬಹುದೆಂಬ ಅನುಮಾನ ಮತ್ತಷ್ಟು ಆಳವಾಗಿ ಆಕೆಯ ಮನಸ್ಸಲ್ಲಿ ಬೇರೂರ ತೊಡಗುತ್ತದೆ.

ಮಾನಸಿಕ ಸ್ಥಿತಿ ಕಳೆದುಕೊಳ್ಳುವ ನಾಯಕಿ
ರಾತ್ರಿ ಕಳೆದಂತೆಲ್ಲ, ಕತ್ತಲು ಹೆಚ್ಚಾದಂತೆಲ್ಲ ಇಂತಹ ಮತ್ತಷ್ಟು ಭಯ ಹುಟ್ಟಿಸುವಂತ ಸನ್ನಿವೇಶಗಳನ್ನು ಎದುರಿಸುತ್ತ ತನ್ನ ಮಾನಸಿಕ ಸ್ಥಿತಿಯನ್ನು ಕಳೆದುಕೊಳ್ಳುತ್ತಾಳೆ. ಈ ಕಥೆಯಲ್ಲಿನ ಅಂತಿಮವಾಗಿ ಉಳಿಯುವ ನಿರ್ಣಾಯಕ ಅಂಶಗಳೆಂದರೆ, ಈ ಘಟನೆಗಳನ್ನೆಲ್ಲ ಎದುರಿಸಿದ ನಾಯಕಿ ಬೆಳಗಿನವರೆಗೂ ಬದುಕಿದ್ದಳಾ ಇಲ್ಲವಾ?

ಕಡೆಗೂ ಸರ್ಪ್ರೈಸ್ ಮಾಡಿದಳಾ ಇಲ್ಲವೆ?
ಇಡೀ ರಾತ್ರಿಯಲ್ಲಿ ಆಕೆ ಅಲ್ಲಿದ್ದ ಕಾವಲುಗಾರ, ಸಹಾಯಕಿ, ಮತ್ತು ಅನಾಮಿಕ ನೆರಳಿನಿಂದ ಎದುರಿಸಿದ ಉತ್ಕಟ ಸನ್ನಿವೇಶ ಯಾವುದು? ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ ಆ ಅನಾಮಿಕ ನೆರಳು ಯಾರದು? ಮನೆಯ ಮಾಲಿಕ ಹಿಂತಿರುಗಿದನಾ ಇಲ್ಲವಾ? ಕೊನೆಗೂ ತನ್ನ ಭಾವಿ ಪತಿಯನ್ನು ಸಪ್ರ್ರೈಸ್ ಮಾಡಿದಳಾ ಇಲ್ಲವಾ? ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಗೆ ಬರುತ್ತಿದೆ ಹೋಮ್ ಸ್ಟೇ ನೋಡಿ ಆನಂದಿಸಿ.


Click it and Unblock the Notifications











