ಕನ್ನಡ ಚಿತ್ರರಂಗದಲ್ಲಿ ಈ ವರ್ಷ ನಡೆದ 20 ಪ್ರಮುಖ ಘಟನಾವಳಿಗಳು
Recommended Video

ಚಿತ್ರರಂಗ ಬಣ್ಣದ ಜಗತ್ತು. ಈ ಮಾಯಾ ಜಗತ್ತಿನಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗುತ್ತಲ್ಲೇ ಇರುತ್ತದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ವರ್ಷ ಸಾಕಷ್ಟು ಘಟನಾವಳಿಗಳು ನಡೆದಿದೆ. 2017ರಲ್ಲಿ ಸಾಕಷ್ಟು ಬೆಳವಣಿಗೆಗಳು ಕನ್ನಡ ಸಿನಿಮಾರಂಗದಲ್ಲಿ ಆಗಿದೆ.
ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ, ಉಪ್ಪಿ ಪ್ರಜಾಕೀಯ, ಕಿರಿಕ್ ಪಾರ್ಟಿ 100 ದಿನ, ಪೋಷಕ ನಟರ ಸರಣಿ ನಿಧನ, ಸ್ಟಾರ್ ಗಳ ಮದುವೆ ಸಂಭ್ರಮ, ದಂಡುಪಾಳ್ಯ ಬೆತ್ತಲೆ ವಿವಾದ, ನಿರ್ಮಾಣಕ್ಕೆ ಇಳಿದ ಪುನೀತ್ ಮತ್ತು ಶಿವಣ್ಣ, ಸಾಲು ಸಾಲು ಸದಭಿರುಚಿಯ ಸಿನಿಮಾಗಳು, ಡಬ್ಬಿಂಗ್ ಗಲಾಟೆ ಹೀಗೆ ಕನ್ನಡ ಚಿತ್ರರಂಗದ ಏನೇನೋ ನಡೆದು ಬಿಟ್ಟಿದೆ.
ಅಂದಹಾಗೆ, ಈ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡ ಚಿತ್ರರಂಗದಲ್ಲಿ ಆದ ಕೆಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ಒಂದು ವಿಶೇಷ ವರದಿ ಮುಂದಿದೆ ಓದಿ...

ಕಿರಿಕ್ ಪಾರ್ಟಿ 100 ದಿನ
ಕಳೆದ ವರ್ಷ ಡಿಸೆಂಬರ್ 30ಕ್ಕೆ ರಿಲೀಸ್ ಆಗಿದ್ದ 'ಕಿರಿಕ್ ಪಾರ್ಟಿ' ಸಿನಿಮಾ 2017ರಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾವಾಗಿದೆ.

ಸದಭಿರುಚಿಯ ಚಿತ್ರಗಳು
ಈ ವರ್ಷ ಕನ್ನಡದಲ್ಲಿ ಅನೇಕ ಸದಭಿರುಚಿಯ ಚಿತ್ರಗಳು ಬಂದವು ಅವುಗಳಲ್ಲಿ 'ರಾಗ', 'ಒಂದು ಮೊಟ್ಟಯ ಕಥೆ', 'ಚೌಕ', 'ಹುಲಿರಾಯ', 'ಅಮರಾವತಿ', ಅಲ್ಲಮ ಸಿನಿಮಾಗಳು ಪ್ರಮುಖವಾಗಿದೆ.

ಸೂಪರ್ ಹಿಟ್ ಸಿನಿಮಾಗಳು
ಧ್ರುವ ಸರ್ಜಾ ನಟನೆಯ 'ಭರ್ಜರಿ', ಶ್ರೀ ಮುರಳಿ ಮತ್ತು ಶಿವರಾಜ್ ಕುಮಾರ್ ಅವರ 'ಮಫ್ತಿ' ಹೆಬ್ಬುಲಿ, ಹಾಗೂ 'ಕಾಲೇಜ್ ಕುಮಾರ್' ಚಿತ್ರಗಳು ಈ ವರ್ಷದ ಯಶಸ್ವಿ ಸಿನಿಮಾಗಳಾಗಿವೆ.

ಜಿ ಎಸ್ ಟಿ
ಕೇಂದ್ರ ಸರ್ಕಾರದ ಜಿ ಎಸ್ ಟಿ ನೀತಿ ಜಾರಿಗೆ ಬಂದಿದ್ದು, ಇದು ಚಿತ್ರರಂಗದ ಮೇಲೆ ಅದು ಪರಿಣಾಮ ಬೀರಿತು. ಮುಖ್ಯವಾಗಿ 28% ಸೇವಾ ತೆರಿಗೆಯಿಂದ ಚಿತ್ರಮಂದಿರದ ಟಿಕೆಟ್ ದರ ಹೆಚ್ಚಾಯಿತು.

ಪಾರ್ವತಮ್ಮ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ದೊಡ್ಮನೆ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಮೇ 31ರಂದು ನಿಧನ ಹೊಂದಿದ್ದರು.

ಉಪೇಂದ್ರ 'ಪ್ರಜಾಕೀಯ'
ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ರಾಜಕೀಯಕ್ಕೆ ಧುಮುಕಿದರು. ರಾಜಕೀಯದ ಬದಲು ಪ್ರಜಾಕೀಯ ವ್ಯವಸ್ಥೆಗಾಗಿ ಉಪ್ಪಿ 'ಕೆಪಿಜೆಪಿ' ಹೊಸ ಪಕ್ಷ ಕಟ್ಟಿದರು.

'ರಾಜಕುಮಾರ' ಶತಕ ಸಂಭ್ರಮ
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಶತಕ ಬಾರಿಸಿತ್ತು. ಮಾತ್ರವಲ್ಲದೆ ಅತಿ ಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

ಮುಗುಳು ನಗೆ
ಯೋಗರಾಜ್ ಭಟ್ ಮತ್ತು ಗಣೇಶ್ 10 ವರ್ಷದ ಬಳಿಕ ಮತ್ತೆ ಒಂದಾಗಿ ಹ್ಯಾಟ್ರಿಕ್ ಸಿನಿಮಾ ಮಾಡಿದರು. ಆದರೆ ನಿರೀಕ್ಷೆ ಹುಟ್ಟಿಸಿದ ಮಟ್ಟಿಗೆ 'ಮುಗುಳುನಗೆ' ಚಿತ್ರ ಹಿಟ್ ಆಗಲಿಲ್ಲ.

ಸುದೀಪ್ ಹುಟ್ಟುಹಬ್ಬ
ಕಿಚ್ಚ ಸುದೀಪ್ ಇನ್ನು ಮುಂದೆ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದರು. ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.

'ಕುರುಕ್ಷೇತ್ರ' ಲಾಂಚ್
ದರ್ಶನ್ 50ನೇ ಚಿತ್ರ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಕುರುಕ್ಷೇತ್ರ' ಸಿನಿಮಾ ಇದೇ ವರ್ಷ ಅದ್ದೂರಿಯಾಗಿ ಲಾಂಚ್ ಆಗಿತ್ತು.

ಬೆತ್ತಲೆ ವಿವಾದ
'ದಂಡುಪಾಳ್ಯ 2' ಸಿನಿಮಾದ ನಟಿ ಸಂಜನಾ ಬೆತ್ತಲೆ ವಿವಾದ ದೊಡ್ಡ ಸುದ್ದಿ ಮಾಡಿತ್ತು.

ಪೋಷಕ ಕಲಾವಿದರ ನಿಧನ
ಈ ವರ್ಷ ಕನ್ನಡ ಚಿತ್ರರಂಗ ಸಾಕಷ್ಟು ಪೋಷಕ ನಟರನ್ನು ಕಳೆದುಕೊಂಡಿದೆ. ಪೋಷಕ ನಟರಾದ ಸುದರ್ಶನ್, ಲುಂಬು ನಾಗೇಶ್, ಬಿ.ವಿ.ರಾಧ, ವೇಣು ಗೋಪಾಲ್, ಜೊತೆಗೆ ಗಾಯಕ ಎಲ್.ಎನ್. ಶಾಸ್ತಿ ಕೊನೆ ಉಸಿರೆಳೆದಿದ್ದಾರೆ.

ಅಪ್ಪು ಪ್ರೋಡಕ್ಷನ್
ನಟ ಪುನೀತ್ ತಮ್ಮ ಸ್ವತಃ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದರು. ಅಪ್ಪು ತಮ್ಮ ಪಿ.ಆರ್.ಕೆ ಪ್ರೋಡಕ್ಷನ್ ಮೂಲಕ 'ಕವಲುದಾರಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಪಿ.ಆರ್.ಕೆ ಆಡಿಯೋ ಸಂಸ್ಥೆಯನ್ನು ಪುನೀತ್ ಈ ವರ್ಷ ಶುರು ಮಾಡಿದರು.

ಕಿರುತೆರೆಯಲ್ಲಿ ಶಿವಣ್ಣ
ಶಿವರಾಜ್ ಕುಮಾರ್ ನಿರ್ಮಾಪಕನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ 'ಶ್ರೀ ಮುತ್ತು ಸಿನಿ ಸರ್ವಿಸ್' ಮೂಲಕ ಒಂದು ಧಾರಾವಾಹಿಯನ್ನು ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ರಾಧಿಕ ಪಂಡಿತ್ ಸಿನಿಮಾ
ಮದುವೆಯ ಬಳಿಕ ಮರೆಯಾಗಿದ್ದ ನಟಿ ರಾಧಿಕ ಪಂಡಿತ್ ಮತ್ತೆ ಸಿನಿಮಾ ಜರ್ನಿ ಮುಂದುವರೆಸಿದರು. ಈ ವರ್ಷ ಅವರ ಹೊಸ ಸಿನಿಮಾ ಮುಹೂರ್ತ ನಡೆದಿದೆ.

ಕಂಕಣ ಭಾಗ್ಯ
ನಟ ಯೋಗಿ, ನಟಿ ಅಮೂಲ್ಯ, ನಿಧಿ ಸುಬ್ಬಯ್ಯ, ಸಿಂಧು ಲೋಕನಾಥ್, ಪ್ರಿಯಾಮಣಿ, ನಿರ್ದೇಶಕ ಪಿಸಿ ಶೇಖರ್, ಸುನಿ ಸೇರಿದಂತೆ ಚಿತ್ರರಂಗದ ಅನೇಕರಿಗೆ ಈ ವರ್ಷ ಕಂಕಣ ಬಲ ಕೂಡಿ ಬಂದಿತ್ತು. ಇನ್ನು ರಕ್ಷಿತ್ ಶೆಟ್ಟಿ - ರಶ್ಮಿಕಾ ಮತ್ತು ಚಿರಂಜೀವಿ ಸರ್ಜಾ - ಮೇಘನಾ ರಾಜ್, ಪವನ್ ಒಡೆಯರ್ ನಿಶ್ಚಿತಾರ್ಥ ಮಾಡಿಕೊಂಡರು.

ನೆಲಕುರುಳಿದ 'ಕಪಾಲಿ'
ಗಾಂಧಿನಗರದ ಮತ್ತೊಂದು ಚಿತ್ರಮಂದಿರ 'ಕಪಾಲಿ' ನೆಲಕುರುಳಿತು.

ಯಶ್ ಸಿನಿಮಾ ಇಲ್ಲ
ನಟ ಯಶ್ ಅಭಿನಯದ ಒಂದೇ ಒಂದು ಸಿನಿಮಾ ಕೂಡ ಈ ವರ್ಷ ರಿಲೀಸ್ ಆಗಿಲ್ಲ. 'ಕೆ.ಜಿ.ಎಫ್' ಈ ವರ್ಷದ ಕೊನೆಯಲ್ಲಿ ತೆರೆಗೆ ಬರುತ್ತದೆ ಎನ್ನುವ ಸುದ್ದಿ ಇತ್ತು. ಆದರೆ ಆ ಚಿತ್ರದ ರಿಲೀಸ್ ಡೇಟ್ 2018ಕ್ಕೆ ಹೋಗಿದೆ.

ವಿಷ್ಣು ಸ್ಮಾರಕ
ನಟ ವಿಷ್ಣುವರ್ಧನ ಸ್ಮಾರಕ ಈ ವರ್ಷವೂ ಸುದ್ದಿ ಮಾಡಿತ್ತು. ಇಷ್ಟು ದಿನ ವಿಷ್ಣು ಸ್ಮಾರಕದ ವಿಷಯವಾಗಿ ಬಹಿರಂಗವಾಗಿ ಕನ್ನಡದ ನಟರು ಮಾತನಾಡಿರಲಿಲ್ಲ. ಆದರೆ ಈಗ ಸುದೀಪ್, ಯಶ್ ಈ ಬಗ್ಗೆ ಹೇಳಿಕೆ ನೀಡಿದ್ದರು.

ಡಬ್ಬಿಂಗ್ ಗಲಾಟೆ
ಈ ಎಲ್ಲ ಸುದ್ದಿಗಳೊಂದಿಗೆ ಡಬ್ಬಿಂಗ್ ಪರ ವಿರುದ್ದ ಗಲಾಟೆಗಳು ಆಗಾಗ ನಡೆಯುತ್ತಿತ್ತು. ಈ ವರ್ಷ 'ವೇಗ ಮತ್ತು ಉದ್ವೇಗ 'ಮತ್ತು 'ಸತ್ಯದೇವ್ ಐಪಿಎಸ್' ಸೇರಿದಂತೆ ಕೆಲ ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಯಿತು.


Click it and Unblock the Notifications











