ಆಂಕರ್ ಆದ RGV, ವಿದೇಶದಲ್ಲಿ 'ಯಜಮಾನ' ಸೇರಿದಂತೆ ಇಂದಿನ 5 ಸುದ್ದಿಗಳು
ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಸಿನಿಮಾಗಳ ಕೆಲಸಗಳು ನಡೆಯುತ್ತಲೇ ಇರುತ್ತದೆ. ಯಾವುದೋ ಸಿನಿಮಾದ ಮುಹೂರ್ತ, ಇನ್ಯಾವುದೋ ಸಿನಿಮಾದ ಬಿಡುಗಡೆ, ಮತ್ತೊಂದು ಕಡೆ ವಿವಾದ, ಇನ್ನೊಂದು ಕಡೆ ವಿವಾಹ ಹೀಗೆ ಒಂದೇ ದಿನ ಸಾಕಷ್ಟು ಬೆಳವಣಿಗೆಗಳು ಆಗುತ್ತದೆ.
ಈ ದಿನ 'ನಟ ಸಾರ್ವಭೌಮ' ಸಿನಿಮಾದ ವಿಶೇಷವಾಗಿ ಪವನ್ ಒಡೆಯರ್ ಒಂದು ಫೋಟೋ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ 'ಯಜಮಾನ' ಚಿತ್ರೀಕರಣ ನಡೆಯುತ್ತಿದೆ. ಅಣ್ಣನಿಗೆ ಶ್ರೀ ಮುರಳಿ ಶುಭಾಶಯ ತಿಳಿಸಿದ್ದಾರೆ. 'ಕವಚ' ಚಿತ್ರದ ಸೆನ್ಸಾರ್ ಆಗಿದೆ, ಹಾಗೂ 'ಭೈರವ ಗೀತಾ' ಚಿತ್ರದ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯವನ್ನು ವರ್ಮ ಹೇಳಿದ್ದಾರೆ.
ಅಂದಹಾಗೆ, ಕನ್ನಡ ಚಿತ್ರರಂಗದ ಈ ದಿನದ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...
ಸ್ವಿಡನ್ ನಲ್ಲಿ 'ಯಜಮಾನ'
ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಚಿತ್ರೀಕರಣ ಸದ್ಯ ಸ್ವಿಡನ್ ನಲ್ಲಿ ನಡೆಯುತ್ತಿದೆ. ಚಿತ್ರೀಕರಣದ ನಡುವೆ ಅಲ್ಲಿನ ಫೋಟೋವನ್ನು ನಿರ್ಮಾಪಕಿ ಶೈಲಜಾ ನಾಗ್ ಹಂಚಿಕೊಂಡಿದ್ದಾರೆ. ಸಖತ್ ಚಳಿಯಲ್ಲಿ ದರ್ಶನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಶೂಟಿಂಗ್ ಮಾಡುತ್ತಿದ್ದಾರೆ. ಪಿ ಕುಮಾರ್ ಈ ಸಿನಿಮಾದ ನಿರ್ದೇಶಕನಾಗಿದ್ದಾರೆ.
'ನಟ ಸಾರ್ವಭೌಮ'ನ ನೆನಪು
ಪುನೀತ್ 'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇದೇ ಸಮಯದಲ್ಲಿ ನಿರ್ದೇಶಕ ಪವನ್ ಒಡೆಯರ್ ಒಂದು ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಣ್ಣವ್ರಿಗೆ ಗುಬ್ಬಿ ವೀರಣ್ಣನವರು 'ನಟ ಸಾರ್ವಭೌಮ' ಬಿರುದು ನೀಡಿ ಗೌರವಿಸುತ್ತಿರುವ ಅಪರೂಪದ ಫೋಟೋ ಇದಾಗಿದೆ. ರಾಜ್ ಬಿರುದೇ ಪುನೀತ್ ಚಿತ್ರದ ಹೆಸರಾಗಿದೆ.
ಶ್ರೀ ಮುರಳಿ ಶುಭಾಶಯ
ನಟ ವಿಜಯ್ ರಾಘವೇಂದ್ರ ಅಭಿನಯದ 'ಕಿಸ್ಮತ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾಗೆ ಒಳ್ಳೆಯದಾಗಲಿ ಅಂತ ನಟ ಹಾಗೂ ವಿಜಯ್ ರಾಘವೇಂದ್ರ ಸಹೋದರ ಶ್ರೀ ಮುರಳಿ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ, 'ಕಿಸ್ಮತ್' ವಿಜಯ್ ರಾಘವೇಂದ್ರ ನಿರ್ದೇಶನದ ಮೊದಲ ಚಿತ್ರ.

'ಕವಚ' ಸೆನ್ಸಾರ್
'ಕವಚ' ಸಿನಿಮಾ ಸೆನ್ಸಾರ್ ಆಗಿದ್ದು, ಚಿತ್ರಕ್ಕೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರ ಡಿಸೆಂಬರ್ 7 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿವೆ.
ಆಂಕರ್ ಆದ ಆರ್ ಜಿ ವಿ
ರಾಮ್ ಗೋಪಾಲ್ ಅರ್ಪಿಸುತ್ತಿರುವ 'ಭೈರವ ಗೀತಾ' ಸಿನಿಮಾ ಮುಂದಿನ ಶುಕ್ರವಾರ ಬಿಡುಗಡೆಯಾಗುತ್ತಿದೆ. ಇಂದು ಆ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಆರ್ ಜಿ ವಿ ಅವರೇ ನಿರೂಪಕರಾಗುತ್ತಾರಂತೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ವರ್ಮ ಒಂದು ಕಾರ್ಯಕ್ರಮದಲ್ಲಿ ಆಂಕರ್ ಆಗಿರುವುದು.


Click it and Unblock the Notifications











