ಒಮ್ಮೆಲೆ 7 ಚಿತ್ರಗಳನ್ನು ಘೋಷಿಸಿದ ಹೊಂಬಾಳೆ; 2037ರಲ್ಲಿ ಕೊನೆ ಸಿನಿಮಾ ರಿಲೀಸ್
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಅತಿದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಸ್ಟಾರ್ ನಟರ ಜೊತೆಗೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹೃತಿಕ್ ರೋಷನ್ ಜೊತೆಗೂ ಒಂದು ಸಿನಿಮಾ ಘೋಷಿಸಿದೆ ಚಿತ್ರತಂಡ. ಇದೆಲ್ಲದರ ನಡುವೆ 7 ಪೌರಾಣಿಕ ಸಿನಿಮಾಗಳನ್ನು ಸಂಸ್ಥೆ ಕೈಗೆತ್ತಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ-1' ಸಿನಿಮಾ ಈ ವರ್ಷವೇ ತೆರೆಗೆ ಬರಬೇಕಿದೆ. ಬಳಿಕ ಪ್ರಭಾಸ್ ಹೀರೊ ಆಗಿ 'ಸಲಾರ್-2' ಚಿತ್ರ ನಿರ್ಮಾಣವಾಗಲಿದೆ. 'KGF- 3' ಸಿನಿಮಾ ಕೂಡ ಘೋಷಣೆಯಾಗಿದೆ. ಇನ್ನು ಪ್ರಭಾಸ್ ಜೊತೆ ಮತ್ತೆರಡು ಸಿನಿಮಾಗಳನ್ನು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.

ಹೀಗೆ ಸ್ಟಾರ್ ನಟರ ಜೊತೆ ದೊಡ್ಡ ಸಿನಿಮಾಗಳನ್ನು ಪ್ಲ್ಯಾನ್ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಆನಿಮೇಷನ್ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕಿದೆ. ಈಗಾಗಲೇ 'ಮಹಾವತಾರ್ ನರಸಿಂಹ' ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 25ಕ್ಕೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಇದೀಗ 'ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್' ಹೆಸರಿನಲ್ಲಿ 7 ಪೌರಾಣಿಕ ಆನಿಮೇಷನ್ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಘೋಷಿಸಿ ಅಚ್ಚರಿ ಮೂಡಿಸಿದೆ. ಯಾವಾಗ ಸಿನಿಮಾ ಬಿಡುಗಡೆ ಎನ್ನುವುದನ್ನು ತಿಳಿಸಿದ್ದಾರೆ. ಒಮ್ಮೆಲೆ 7 ಸಿನಿಮಾಗಳು ಎನ್ನುವ ವಿಚಾರವೇ ಅಚ್ಚರಿಗೆ ಕಾರಣವಾಗಿದೆ. ಈ ಸರಣಿಯ ಕೊನೆಯ ಸಿನಿಮಾ 2037ನೇ ಇಸವಿಯಲ್ಲಿ ಬಿಡುಗಡೆ ಎಂದು ಚಿತ್ರತಂಡ ಹೇಳಿದೆ.
ಮಹಾವಿಷ್ಣುವಿನ ವಿವಿಧ ಅವತಾರಗಳ ಸುತ್ತಾ ಈ ಆನಿಮೇಷನ್ ಸಿನಿಮಾಗಳು ನಿರ್ಮಾಣವಾಗಲಿದೆ. ಸದ್ಯ ಸಿದ್ಧವಾಗಿರುವ 'ಮಹಾವತಾರ್ ನರಸಿಂಹ' ಸಿನಿಮಾ ನೋಡಿ ಚಿತ್ರತಂಡ ಥ್ರಿಲ್ಲಾಗಿದೆ. ಹಾಗಾಗಿ ಇದನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾ ಬಳಿಕ 'ಮಹಾವತಾರ್ ಪರಶುರಾಮ್' ಸಿನಿಮಾ 2027ರಲ್ಲಿ ತೆರೆಗೆ ಬರಲಿದೆ. ತಲಾ ಎರಡು ವರ್ಷಗಳ ಅಂತರದಲ್ಲಿ 'ಮಹಾವತಾರ್ ರಘುನಂದನ್' (2029), 'ಮಹಾವತಾರ್ ದ್ವಾರಕಾದೀಶ್'(2031), 'ಮಹಾವತಾರ್ ಗೋಕುಲನಂದ'(2033), 'ಮಹಾವತಾರ್ ಕಲ್ಕಿ ಪಾರ್ಟ್-1' (2035) ಹಾಗೂ 'ಮಹಾವತಾರ್ ಕಲ್ಕಿ ಪಾರ್ಟ್-2'(2037) ಸಿನಿಮಾ ತೆರೆಗೆ ಬರಲಿದೆ.
ಸಣ್ಣ ಟೈಟಲ್ ಟೀಸರ್ ಸಮೇತ 'ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್' ಬಗ್ಗೆ ಮಾಹಿತಿ ನೀಡಿದ್ದಾರೆ. ಆನಿಮೇಷನ್ ಸಿನಿಮಾಗಳು ಹೊಸದಲ್ಲ. ಆದರೆ ಕನ್ನಡದಲ್ಲಿ ಹೀಗೆ ದೊಡ್ಡಮಟ್ಟದಲ್ಲಿ ಆನಿಮೇಷನ್ ಸಿನಿಮಾ ಮಾಡಿ ಅದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುತ್ತಿರುವ ಪ್ರಯತ್ನ ಇದೇ ಮೊದಲು. ಬಹಳ ಹಿಂದೆಯೇ ವಿಜಯ್ ಕಿರಗಂದೂರ್ ಮಾತನಾಡಿ ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದ ಮೇಲೆ 3000 ಕೋಟಿ ರೂ. ಬಂಡವಾಳ ಹೂಡುವುದಾಗಿ ಹೇಳಿದ್ದರು.
ವಿಷ್ಣುವಿನ ದಶಾವತಾರಗಳನ್ನು ಕಾವ್ಯ, ಸಿನಿಮಾ, ಧಾರಾವಾಹಿ, ನಾಟಕ ರೂಪಗಳಲ್ಲಿ ಈಗಾಗಲೇ ನೋಡಿದ್ದೇವೆ. ಆನಿಮೇಷನ್ನಲ್ಲಿ ಕೂಡ ಅದನ್ನು ತೋರಿಸುವ ಪ್ರಯತ್ನ ನಡೆದಿದೆ. ಆದರೆ ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಬಹಳ ದೊಡ್ಡ ಮಟ್ಟದಲ್ಲಿ ಆ ಕಥೆಗಳನ್ನು ಹೇಳುವ ಪ್ರಯತ್ನ ಇದೀಗ ನಡೀತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.
ಫೀಚರ್ ಸಿನಿಮಾಗಳ ಜೊತೆ ಜೊತೆಗೆ ಆನಿಮೇಷನ್ ಸಿನಿಮಾಗಳ ನಿರ್ಮಾಣಕ್ಕೆ ಹೊಂಬಾಳೆ ಸಂಸ್ಥೆ ಮುಂದಾಗಿದೆ. ಮತ್ತೊಂದು ಕಡೆ ಓಟಿಟಿ ಎಕ್ಸ್ಕ್ಲೂಸಿವ್ ಕಂಟೆಂಟ್ ತಯಾರಿಸುವ ಪ್ರಯತ್ನವನ್ನು ಸಂಸ್ಥೆ ಮಾಡುತ್ತಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ ಜೊತೆ ಚರ್ಚಿಸುತ್ತಿರುವುದಾಗಿ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು.


Click it and Unblock the Notifications











