Suriya X Hombale: ಸೂರ್ಯ ಜೊತೆ ಕೈಜೋಡಿಸಿದ ಹೊಂಬಾಳೆ; ನಿರ್ದೇಶಕರು ಯಾರು? ಕಥೆಯೇನು?
'ಕೆಜಿಎಫ್', 'ಕಾಂತಾರ' ಹಾಗೂ 'ಸಲಾರ್' ಸರಣಿ ಸಿನಿಮಾಗಳ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡ್ತಿದೆ. ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ಕೈಗೆತ್ತಿಕೊಳ್ತಿದೆ. ಇದೀಗ ತಮಿಳು ನಟ ಸೂರ್ಯ ಕಾಂಬಿನೇಷನ್ನಲ್ಲಿ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಬಿಡಿಸಿ ಹೇಳಬೇಕಿಲ್ಲ.
ಈಗಾಗಲೇ ಹಲವು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿದೆ. 'ರಿಚರ್ಡ್ ಆಂಟನಿ', 'ಕೆಜಿಎಫ್- 3', 'ಸಲಾರ್- 2' ಅಷ್ಟೇ ಅಲ್ಲ ಹೃತಿಕ್ ರೋಷನ್ ಜೊತಗೂ ಸಿನಿಮಾ ಮಾಡಬೇಕಿದೆ. ಆದರೆ ಕಾರಣಾಂತರಗಳಿಂದ ಯಾವುದು ಸದ್ಯಕ್ಕೆ ಚಿತ್ರೀಕರಣ ಆರಂಭಿಸಿಲ್ಲ. ಸೂರ್ಯ ನಟನೆಯ ಸಿನಿಮಾ ಆದಷ್ಟು ಬೇಗ ಶುರುವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ಟಿ. ಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಸೂರ್ಯ ಹಾಗೂ ಜ್ಞಾನವೇಲ್ ಕಾಂಬಿನೇಷನ್ನಲ್ಲಿ ಬಂದಿದ್ದ 'ಜೈಭೀಮ್' ಸಿನಿಮಾ ಹಿಟ್ ಆಗಿತ್ತು.

ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಸಾಯಿ ಅಭಯಂಕರ್ ಈ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ಎಸ್. ಆರ್ ಕತ್ತಿರ್ ಐಎಸ್ಸಿ ಛಾಯಾಗ್ರಹಣ ಚಿತ್ರಕ್ಕಿದೆ. ಕಯಾದು ಲೋಹರ್ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. 'ಜೈಭೀಮ್' ಬಳಿಕ ಚೆನ್ನೈನ ಡಾಕ್ಟರ್ ಒಬ್ಬರ ಜೀವನಾಧರಿತ ಚಿತ್ರವನ್ನು ಜ್ಞಾನವೇಲ್ ಕೈಗೆತ್ತಿಕೊಂಡಿದ್ದಾರೆ. ಸೂರ್ಯ ಹೀರೊ ಆಗಿ ನಟಿಸುತ್ತಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಇದೇ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುವ ಸಾಧ್ಯತೆಯಿದೆ.
ಡಾ. ಎಸ್. ಜಯಚಂದ್ರನ್ ಚೆನ್ನೈನಲ್ಲಿ 5 ರೂಪಾಯಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದರು. ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗಬೇಕು ಎನ್ನುವ ಕಾರಣಕ್ಕೆ ಕೇವಲ 5 ರೂಪಾಯಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದರು. 8 ವರ್ಷಗಳ ಹಿಂದೆ ಅವರು ನಿಧನರಾಗಿದ್ದರು. ಎಲ್ಲರಿಗೂ ಮಾದರಿಯಾದ ಡಾ. ಎಸ್. ಜಯಚಂದ್ರನ್ ಅವರ ಕುರಿತು ಸಿನಿಮಾ ಮಾಡಲು ಜ್ಞಾನವೇಲ್ ಬಹಳ ದಿನಗಳಿಂದ ತಯಾರಿ ನಡೆಸಿದ್ದರು. 'ಜೈಭೀಮ್' ಚಿತ್ರದಲ್ಲಿ ಸೂರ್ಯ ಅವರನ್ನು ವಕೀಲನ ಪಾತ್ರದಲ್ಲಿ ತೋರಿಸಿ ಗೆದ್ದಿದ್ದರು. ಇದೀಗ ಡಾಕ್ಟರ್ ವೇಷ ಹಾಕಿಸಲು ಮುಂದಾಗಿದ್ದಾರೆ.
ಸೂರ್ಯ ನಟನೆಯ ಸಿನಿಮಾಗಳು ಕರ್ನಾಟಕದಲ್ಲಿ ಕೂಡ ಸದ್ದು ಮಾಡುತ್ತವೆ. ಇತ್ತೀಚೆಗೆ ಬಂದ 'ಕರಪ್ಪು' ಸಿನಿಮಾ ರಾಜ್ಯದಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಸದ್ಯ 'ವಿಶ್ವನಾಥ್ ಅಂಡ್ ಸನ್ಸ್' ಎಂಬ ಸಿನಿಮಾ ಚಿತ್ರೀಕರಣವನ್ನು ಸೂರ್ಯ ಮುಗಿಸಿದ್ದಾರೆ. ಆಗಸ್ಟ್ 14ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಹೊಂಬಾಳೆ ಜೊತೆ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಇನ್ನು ಸೂರ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಹೊಂಬಾಳೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. "ಮುಂದಿನ ಅಧ್ಯಾಯ ಸೂರ್ಯ ಹಾಗೂ ಹೊಂಬಾಳೆ.. ಇವ್ರು ತಾವಾಗಿಯೇ ಗೆದ್ದು ಬಂದವರು. ಫ್ರೇಮ್ ಬೈ ಫ್ರೇಮ್. ಫಿಲ್ಮ್ ಬೈ ಫಿಲ್ಮ್. ಫೈಟ್ ಬೈ ಫೈಟ್. ಸತ್ಯವನ್ನು ರಕ್ತಸಿಕ್ತಗೊಳಿಸಿದ ಪಾತ್ರಗಳು. ನಿಜ ಜೀವನದ ಭಾರವನ್ನು ಹೊತ್ತ ಪಾತ್ರಗಳು. ಪ್ರತಿ ಬಾರಿಯೂ ಸೌಕರ್ಯಕ್ಕಿಂತ ಧೈರ್ಯವನ್ನು ಆರಿಸಿಕೊಂಡ ವೃತ್ತಿಜೀವನ. ಪರದೆಯ ಮೇಲೆ ಮೂರು ದಶಕಗಳ ಸತ್ಯ. ಲೆಕ್ಕವಿಲ್ಲದಷ್ಟು ಹೃದಯಗಳು ಅದನ್ನು ಮೀರಿ ಸ್ಪರ್ಶಿಸಿದವು. ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಸ್ವಾಗತಿಸುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.
'ರಿಚರ್ಡ್ ಆಂಟನಿ' ಸಿನಿಮಾ ತಡವಾಗುತ್ತಿದೆ. ಸಂತೋಷ್ ಆನಂದ್ರಾಮ್ ಹಾಗೂ ಶಿವಕಾರ್ತಿಕೇಯನ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಲು ಹೊಂಬಾಳೆ ಸಂಸ್ಥೆ ಚರ್ಚಿಸುತ್ತಿದೆ. ಅದೆಲ್ಲದರ ನಡುವೆ ಸೂರ್ಯ ನಟನೆಯ ಚಿತ್ರವನ್ನು ಪ್ರಾರಂಭಿಸುತ್ತಿದೆ. ಜ್ಞಾನವೇಲ್ ಆಕ್ಷನ್ ಕಟ್ ಹೇಳುವುದರಿಂದ ಸೆಟ್ಟೇರುವ ಮುನ್ನ ಸಿನಿಮಾ ಕುತೂಹಲ ಮೂಡಿಸಿದೆ. ಅಭಿಮಾನಿಗಳು ಚಿತ್ರಕ್ಕೆ ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications