Oscars 2026: ಹೊಂಬಾಳೆ ಫಿಲ್ಮ್ಸ್ ಐತಿಹಾಸಿಕ ಆಸ್ಕರ್ ಮೈಲಿಗಲ್ಲು; ಪ್ರಶಸ್ತಿಗೆ ಇನ್ನು ಎರಡೇ ಮೆಟ್ಟಿಲು
ಆಸ್ಕರ್ ವೇದಿಕೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡುವ ಸಮಯದ ಹತ್ತಿರ ಬಂದಿದೆ. 'ಮಹಾವತಾರ್ ನರಸಿಂಹ' ಹಾಗೂ 'ಕಾಂತಾರ: ಅಧ್ಯಾಯ 1' ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಸ್ಥಾನ ಪಡೆದಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣವಾಗಿದೆ.
ಕಳೆದ ವರ್ಷ 'ಕಾಂತಾರ-1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಚಿತ್ರಗಳನ್ನು ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆನಿಮೇಟೆಡ್ ಸಿನಿಮಾ ವಿಭಾಗದಲ್ಲಿ 'ಮಹಾವತಾರ್ ನರಸಿಂಹ' ಚಿತ್ರಕ್ಕೆ ಪ್ರಶಸ್ತಿ ಗ್ಯಾರಂಟಿ ಎನ್ನಲಾಗ್ತಿದೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಕಾಣಿಸಿಕೊಂಡ ಐದು ಭಾರತೀಯ ಚಿತ್ರಗಳಲ್ಲಿ ಎರಡು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾಗಳು ಎನ್ನುವುದು ವಿಶೇಷ.

ಈ ಎರಡೂ ಸಿನಿಮಾಗಳಲ್ಲಿ ಕಥೆ ಹೇಳಿದ ಪರಿ, ತಾಂತ್ರಿಕ ಪ್ರತಿಭೆ ಮತ್ತು ಸಿನಿಮೀಯ ದೃಷ್ಟಿಕೋನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡೂ ಚಿತ್ರಗಳು ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಜಾಗ ಮಾಡಿಕೊಂಡು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಪ್ರಮುಖ ಆಸ್ಕರ್ ವಿಭಾಗಗಳಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿ.
ಭಾರತೀಯ ಚಿತ್ರರಂಗದ ಮಟ್ಟಿಗೆ ಆಸ್ಕರ್ ಪ್ರಶಸ್ತಿ ಇನ್ನು ಮರೀಚಿಕೆ ಆಗಿಯೇ ಉಳಿದಿದೆ. ಆಗೊಮ್ಮೆ ಈಗೊಮ್ಮೆ ಪ್ರಶಸ್ತಿಗಳು ಬಂದಿದೆ. ಭಾರತದಲ್ಲಿ ನಿರ್ಮಾಣವಾದ ಫೀಚರ್ ಚಿತ್ರಕ್ಕೆ ಪ್ರಶಸ್ತಿಗಳು ಬಂದಿಲ್ಲ. 3 ವರ್ಷದ ಹಿಂದೆ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕಿದ್ದೇ ಈವರೆಗಿನ ಅತ್ಯುತ್ತಮ ಸಾಧನೆ. ಇನ್ನುಳಿದಂತೆ ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶನ ಹೀಗೆ ಪ್ರಮುಖ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿಲ್ಲ. ಕೊನೆ ಪಕ್ಷ ನಾಮಿನೇಷನ್ ಹಂತದವರೆಗೂ ಹೋಗಿಲ್ಲ.

ಭಾರತದ ಕೆಲ ಡಾಕ್ಯುಮೆಂಟರಿ, ಶಾರ್ಟ್ ಫಿಲ್ಮ್ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಫೀಚರ್ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಬಹುದು. ಇತ್ತೀಚೆಗೆ ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿವೆ. ಹಾಲಿವುಡ್ ಮಂದಿ ಗಮನ ಸೆಳೆಯುತ್ತಿದೆ. 'ನಾಟು ನಾಟು' ಗೀತೆಯ ಆರ್ಭಟವೇ ಅದಕ್ಕೆ ಉದಾಹರಣೆ. ರಾಜಮೌಳಿ ಕೂಡ ಆಸ್ಕರ್ ಮೇಲೆ ಕಣ್ಣಿಟ್ಟು ಸಿನಿಮಾಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೇರೆ ಚಿತ್ರರಂಗಗಳಲ್ಲಿ ಕೂಡ ಆ ಪ್ರಯತ್ನ ಶುರುವಾಗಿದೆ. ಕನ್ನಡದಲ್ಲಿ ಹೊಂಬಾಳೆ ಫಿಲ್ಮ್ಸ್ ಈ ದಿಶೆಯಲ್ಲಿ ಯೋಚಿಸುತ್ತಿದೆ.
'ಕಾಂತಾರ- 1' ಚಿತ್ರವನ್ನು ಆಸ್ಕರ್ ರೇಸ್ಗೆ ಕೊಂಡೊಯ್ಯುತ್ತೇವೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ಸಿನಿಮಾ ತೆರೆಕಂಡ ಬಳಿಕ ಅದಕ್ಕಾಗಿ ಪ್ರಯತ್ನ ಶುರುವಾಗಿದೆ. ಕ್ಲೀಮ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಮಹಾವತಾರ್ ನರಸಿಂಹ' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತ್ತು. ಚಿತ್ರವನ್ನು ವಿತರಣೆ ಮಾಡಿ ಗೆದ್ದಿತ್ತು. ಇದೀಗ ಚಿತ್ರವನ್ನು ಆಸ್ಕರ್ ವೇದಿಕೆಯಲ್ಲಿ ಮೆರೆಸುವ ಪ್ರಯತ್ನ ಜೋರಾಗಿದೆ. ಈ ಎರಡೂ ಸಿನಿಮಾಗಳು ಈಗ ಹಾಲಿವುಡ್ ಸಿನಿಮಾಗಳ ಜೊತೆ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುವಂತಾಗಿದೆ.
ಆಸ್ಕರ್ ಅಂತಿಮ ನಾಮಿನೇಷನ್ ಪಟ್ಟಿಗೆ ಎಂಟ್ರಿ ಕೊಟ್ಟರೂ ಅದು ದೊಡ್ಡ ಸಾಧನೆ ಆಗಲಿದೆ. ಆಸ್ಕರ್ ವೇದಿಕೆಯಲ್ಲಿ ನಾಮಿನೇಷನ್ ಚಿತ್ರಗಳನ್ನು ಘೋಷಿಸಲಾಗುತ್ತದೆ. ಆ ಮೂಲಕ ವಿಶ್ವ ಸಿನಿಜಗತ್ತು ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಆಗಲಿದೆ. ಅಭಿಮಾನಿಗಳು ಕೂಡ ಅಂಥಾದೊಂದು ಕ್ಷಣಕ್ಕಾಗಿ ಕಾಯುತ್ತಿದ್ದಾರೆ.


Click it and Unblock the Notifications











