ಯುಗಾದಿಗೆ 'ಕಾಂತಾರ'- 2ಗೆ ಆದಿ: ಕಾಡುಬೆಟ್ಟು ಶಿವನ ತಂದೆ ಪ್ರಪಂಚದಲ್ಲಿ ಕಳೆದು ಹೋದ ರಿಷಬ್
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯುಗಾದಿ ಸಂಭ್ರಮದಲ್ಲೇ 'ಕಾಂತಾರ- 2' ಅಪ್ಡೇಟ್ ಕೊಟ್ಟಿದೆ. ಹಬ್ಬದ ದಿನವೇ ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂದು ಸಂಸ್ಥೆ ಘೋಷಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ಇದೀಗ ಚಿತ್ರದ ಪ್ರೀಕ್ವೆಲ್ ಪ್ರೀ ಪ್ರೊಡಕ್ಷನ್ ವರ್ಕ್ ಅಧಿಕೃತವಾಗಿ ಆಗಿ ಶುರುವಾಗಿದೆ.
'ಕಾಂತಾರ' ಸಿನಿಮಾ ನೋಡಿದವರೆಲ್ಲಾ ಪ್ರೀಕ್ವೆಲ್ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಬಹಳ ಹಿಂದೆಯೇ ತಂಡ ಸರಣಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ಹೇಳಿತ್ತು. ರಿಷಬ್ ಶೆಟ್ಟಿ ಬೇರೆ ಎಲ್ಲಾ ಕಮೀಟ್ಮೆಂಟ್ಗಳನ್ನು ಪಕ್ಕಕ್ಕಿಟ್ಟು 'ಕಾಂತಾರ' -2 ಚಿತ್ರಕ್ಕಾಗಿ ಶ್ರಮಿಸುತ್ತಿದ್ದಾರೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಅಷ್ಟೇ ರೋಚಕವಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ.

ಹಬ್ಬದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ಹೊಂಬಾಳೆ ಸಂಸ್ಥೆ "ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ಕಾಂತಾರ ಚಿತ್ರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಅಪ್ಡೇಟ್ಗಾಗಿ ಕಾಯುತ್ತಿರಿ" ಎಂದು ಬರೆದುಕೊಂಡಿದೆ. ಸಿನಿರಸಿಕರು ಕಾಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.
'ಕಾಂತಾರ' ಚಿತ್ರಕ್ಕಾಗಿ ಕೆಲಸ ಮಾಡಿದ ಬಹುತೇಕ ತಂಡ ಪ್ರೀಕ್ವೆಲ್ಗೂ ಕೆಲಸ ಮಾಡುತ್ತಿದೆ. ಅನಿರುದ್ಧ್ ಮಹೇಶ್, ಶನಿಲ್ ಗುರು, ಶ್ಯಾಮ್ ಪ್ರಸಾದ್ ಹಾಗೂ ಪ್ರಕಾಶ್ ತುಮ್ಮಿನಾಡು ಈ ಬಾರಿ ಕೂಡ ರಿಷಬ್ ಶೆಟ್ಟಿ ಬರವಣಿಗೆಗೆ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ತಂಡ ಒಂದೆಡೆ ಸೇರಿ ಕಾಡುಬೆಟ್ಟು ಶಿವನ ತಂದೆ ಪ್ರಪಂಚವನ್ನು ಕಲ್ಪಿಸಿಕೊಂಡು ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಈಗಾಗಲೇ ತಮಗೆ ಹೊಳೆದಿರುವ ಒಂದೆಳೆಯನ್ನು ವಿಸ್ತರಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಎಲ್ಲರೂ 'ಕಾಂತಾರ' ಚಿತ್ರದಲ್ಲಿ ಕಾಡುಬೆಟ್ಟು ಶಿವನ ಕಥೆ ನೋಡಿದ್ದೇವೆ. ರಿಷಬ್ ಶೆಟ್ಟಿ ತಂದೆ- ಮಗನಾಗಿ ಡಬಲ್ ರೋಲ್ ಪ್ಲೇ ಮಾಡಿದ್ದರು. ಆದರೆ ತಂದೆ ಪಾತ್ರ ಚಿತ್ರದ ಆರಂಭದ ಕೆಲ ನಿಮಿಷಗಳು ಮಾತ್ರ ಕಾಣಿಸಿಕೊಂಡಿತ್ತು. ಆ ಪಾತ್ರವನ್ನು ಹಿಗ್ಗಿಸುವ ಕೆಲಸ ನಡೀತಿದೆ. ಕಾಡನ್ನೇ ನಂಬಿ ಬದುಕುವ ಜನರ ಕಥೆಯನ್ನು ಮತ್ತೊಮ್ಮೆ ಹೇಳುತ್ತಿದ್ದಾರೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಕಥೆಯೇ ಇದರ ಕೇಂದ್ರ ಬಿಂದು. ಇದರ ಸುತ್ತಾ ಪ್ರೀಕ್ವೆಲ್ ಕಥೆ ಕುಡ ಸಾಗುತ್ತದೆ ಎಂದು ಚಿತ್ರತಂಡ ಹೇಳಿದೆ.
ಈಗಾಗಲೇ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿರುವುದರಿಂದ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ರಿಷಬ್ ಮೇಲಿನ ಒತ್ತಡ ಹಾಗೂ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ನಿಭಾಯಿಸುವ ಗಟ್ಟಿ ನಿರ್ಧಾರದೊಂದಿಗೆ ರಿಷಬ್ ಶೆಟ್ಟಿ ಟೀಂ ಅಖಾಡಕ್ಕೆ ಇಳಿದಿದೆ. ಅಂದಾಜು 15 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಬಾರಿ ಹೊಂಬಾಳೆ ಸಂಸ್ಥೆ ಅದಕ್ಕಿಂತ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ, ಪ್ರಚಾರ ಹಾಗೂ ರಿಲೀಸ್ ಪ್ಲ್ಯಾನ್ ಮಾಡ್ತಿದೆ.

ಕರಾವಳಿಯ ಕಾಂತಾರ ಕಥೆಯನ್ನು 'ಕಾಂತಾರ' ಬರೀ ಕನ್ನಡದಲ್ಲಿ ಮಾತ್ರ ಪ್ರಪಂಚಕ್ಕೆ ಹೇಳಬೇಕು ಎಂದು ರಿಷಬ್ ಶೆಟ್ಟಿ ತೀರ್ಮಾನಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ 4 ಭಾಷೆಗಳಿಗೆ ಡಬ್ ಆಗುವಂತೆ ಆಯಿತು. ನಂತರ ಇಂಗ್ಲೀಷ್, ತುಳು ಭಾಷೆಯಲ್ಲೂ ಸಿನಿಮಾ ಪ್ರೇಕ್ಷಕರ ಮುಂದೆ ಬಂತು. ಇದೀಗ ಇಟಾಲಿಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡುವ ಕೆಲಸ ಆರಂಭವಾಗಿದೆ. ಶೀಘ್ರದಲ್ಲೇ ಸಿನಿಮಾ ಯೂರೋಪ್ ದೇಶಗಳಲ್ಲಿ ರಿಲೀಸ್ ಆಗಲಿದೆ.
'ಕಾಂತಾರ' ಪ್ರೀಕ್ವೆಲ್ ಕ್ರೇಜ್ ನೋಡುತ್ತಿದ್ದರೆ ಸಿನಿಮಾ ಏಕಕಾಲಕ್ಕೆ 10 ಭಾಷೆಗಳಲ್ಲಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಈ ಬಾರಿ ಆಸ್ಕರ್ ಮೇಲೂ ಹೊಂಬಾಳೆ ಸಂಸ್ಥೆ ಕಣ್ಣಿಟ್ಟಿದ್ದು ಅದಕ್ಕೆ ತಕ್ಕಂತೆ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡಲಾಗುತ್ತಿದೆ.


Click it and Unblock the Notifications











