Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಂಬಾಳೆಯ 11ನೇ ಸಿನಿಮಾ ಘೋಷಣೆ: ಹೊಸ ಕಿಚ್ಚಿನೊಂದಿಗೆ ಬಂದ ರಿಷಬ್ ಶೆಟ್ಟಿ
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳನ್ನು ಘೋಷಣೆ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಪವನ್ ಕುಮಾರ್ ಕಾಂಬಿನೇಷನ್ ನಲ್ಲಿ 'ದ್ವಿತ್ವ' ಸಿನಿಮಾ ಪ್ರಕಟಿಸಿ ಎರಡು ತಿಂಗಳಲ್ಲೇ, ರಕ್ಷಿತ್ ಶೆಟ್ಟಿ ಜೊತೆ 'ರಿಚರ್ಡ್ ಆಂಟೋನಿ' ಚಿತ್ರ ಅನೌನ್ಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ ಹೊಂಬಾಳೆ ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದೆ.
Recommended Video
ರಕ್ಷಿತ್ ಶೆಟ್ಟಿ ಜೊತೆ 10ನೇ ಸಿನಿಮಾ ಘೋಷಣೆ ಮಾಡಿದ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಜೊತೆ 11ನೇ ಸಿನಿಮಾ ಅನೌನ್ಸ ಮಾಡಿದೆ. ಹೌದು, ಪ್ರತಿಷ್ಠಿತ ಹೊಂಬಾಳೆ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಮಾಡುವ ಅವಕಾಶ ನಿರ್ದೇಶಕ ರಿಷಬ್ ಶೆಟ್ಟಿ ಪಾಲಿಗೆ ಒಲಿದು ಬಂದಿದೆ. ಹೊಂಬಾಳೆ ಸಂಸ್ಥೆ ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ಘೋಷಣೆ ಮಾಡುವುದಾಗಿ ಹೇಳುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿರುತ್ತದೆ. ವಿಭಿನ್ನ ಕಥೆ ಮತ್ತು ಪ್ರತಿಭಾವಂತ ನಿರ್ದೇಶಕ, ನಟರಿಗೆ ಮಣೆಹಾಕುವ ಹೊಂಬಾಳೆ ಯಾರ ಜೊತೆ ಸಿನಿಮಾ ಮಾಡಲಿದೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳನ್ನು ಕಾಡುತ್ತಿರುತ್ತೆ.
ಇದೀಗ 11ನೇ ಸಿನಿಮಾದ ಕುತೂಹಲಕ್ಕೆ ತೆರೆ ಬಿದ್ದಿದೆ. ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೊಂಬಾಳೆ 11ನೇ ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಚಿತ್ರಕ್ಕೆ 'ಕಾಂತಾರ' ಎಂದು ಟೈಟಲ್ ಇಡಲಾಗಿದೆ. ಪೋಸ್ಟರ್ ನೋಡುತ್ತಿದ್ರೆ ಇದು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 'ಕಾಂತಾರ' ಟೈಟಲ್ ಜೊತೆಗೆ 'ಒಂದು ದಂತಕಥೆ' ಎನ್ನುವ ಸಬ್ ಟೈಟಲ್ ಕೂಡ ಇದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಪೋಸ್ಟರ್ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಪೋಸ್ಟರ್ ಶೇರ್ ಮಾಡಿ ನಿರ್ದೇಶಕ ರಿಷಬ್ ಶೆಟ್ಟಿ, "ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ" ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ 3 ವರ್ಷದ ಬಳಿಕ ಮತ್ತೆ ನಿರ್ದೇಶನದ ಕಡೆ ಮುಖಮಾಡಿದ್ದಾರೆ. ಕೊನೆಯದಾಗಿ 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಮಕ್ಕಳ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿತ್ತು. 2018ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಕಿರಿಕ್ ಪಾರ್ಟ್ ಬಳಿಕ ರಿಷಬ್ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡಿದ್ದರು. ಇದೀಗ ಹೊಂಬಾಳೆ ಬ್ಯಾನರ್ ಮೂಲಕ 'ಕಂತಾರ' ಎನ್ನುವ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಸಿನಿಮಾ ನಿರ್ದೇಶನದ ಜೊತೆಗೆ ರಿಷಬ್ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೆಲ್ ಬಾಟಮ್-2, ಆಂಟಗೊನಿ ಶೆಟ್ಟಿ, ಹರಿಕಥೆ ಅಲ್ಲ ಗಿರಿಕಥೆ, ಗರುಡ ಗಮನ ವೃಷಬ ವಾಹನ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ರುದ್ರಪ್ರಯಾಗ' ಸಿನಿಮಾ ನಿರ್ದೇಶನವನ್ನು ರಿಷಬ್ ಮಾಡಬೇಕಿದೆ. ಇದೆಲ್ಲದರ ನಡುವೆ ಕಾಂತಾರ ಸಿನಿಮಾ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ 'ಕಾಂತಾರ' ಸಿನಿಮಾ ಇದೇ ಆಗಸ್ಟ್ ನಿಂದ ಪ್ರಾರಂಭವಾಗಲಿದೆ. ಆಗಸ್ಟ್ 27ರಿಂದ ಚಿತ್ರೀಕರಣ ಪ್ರಾರಂಭ ಎಂದು ಪೋಸ್ಟರ್ ನಲ್ಲೇ ಬಹಿರಂಗಪಡಿಸಲಾಗಿದೆ. ಸದ್ಯ ಹೊಂಬಾಳೆ ಫಿಲಂಸ್ 'ಕೆಜಿಎಫ್-2' ಬಿಡುಗಡೆ ಸಿದ್ಧವಾಗುತ್ತಿದೆ. 'ಕೆಜಿಎಫ್-2' ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಸಿನಿಮಾ ಜೊತೆಗೆ 'ಸಲಾರ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ನಟನೆಯ 'ದ್ವಿತ್ವ' ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಈ ವರ್ಷದ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ರಿಚರ್ಡ್ ಆಂಟನಿ ಕೂಡ ಪ್ರಾರಂಭವಾಗಲಿದೆ. ಸಾಲು ಸಾಲು ಸಿನಿಮಾಗಳಲ್ಲಿ ಹೊಂಬಾಳೆ ಬ್ಯುಸಿಯಾಗಿದ್ದು, ಯಾವ ರೀತಿಯ ಸಿನಿಮಾಗಳನ್ನು ನೀಡಲಿದೆ ಎಂದು ಕಾದುನೋಡಬೇಕು.