ರಿಲೀಸ್ಗೂ ಮುನ್ನವೇ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು 'ಹೊಂಬಣ್ಣ'
ಚಂದನವನದಲ್ಲಿ ಈಗ ಟ್ರೈಲರ್ ನಿಂದಲೇ ಹೆಚ್ಚು ಸುದ್ದಿ ಮಾಡುತ್ತಿರುವ ಸಿನಿಮಾ ಅಂದ್ರೆ 'ಹೊಂಬಣ್ಣ'. ರಕ್ಷಿತ್ ತೀರ್ಥಹಳ್ಳಿ ಎಂಬುವರು ನಿರ್ದೇಶನ ಮಾಡಿರುವ ಈ ಚಿತ್ರ ಮೇಕಿಂಗ್ ಮತ್ತು ಕಥೆಯ ಗಟ್ಟಿತನದಿಂದಲೇ ಮೆಚ್ಚುಗೆ ಪಡೆಯುತ್ತಿದೆ.
ಮೊನ್ನೆಯಷ್ಟೇ ಕಿಚ್ಚ ಸುದೀಪ್ ಮತ್ತು ಬಹುಭಾಷಾ ನಟ ಸೋನು ಸೂದ್ 'ಹೊಂಬಣ್ಣ' ಟ್ರೈಲರ್ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ ಚಿತ್ರಕ್ಕೆ ಶುಭ ಹಾರೈಸಿದ್ದರು. ಈ ಚಿತ್ರದ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಹೌದು, ವೆನಿಜುವೆಲಾದಲ್ಲಿ ನಡೆದ 'ಫೈವ್ ಕಾಂಟಿನೆಂಟ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್' ನಲ್ಲಿ 'ಹೊಂಬಣ್ಣ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. 'ಬೆಸ್ಟ್ ಎಡಿಟಿಂಗ್ ಫೀಚರ್ ಫಿಲ್ಮ್', 'ಬೆಸ್ಟ್ ಡ್ರಾಮಾ ಫೀಚರ್ ಫಿಲ್ಮ್', 'ಒರಿಜಿನಲ್ ಮ್ಯೂಸಿಕ್ ಸ್ಕೋರ್ ಫೀಚರ್ ಫಿಲ್ಮ್', 'ಸಿನೆಮಾಟೋಗ್ರಫಿ ಫೀಚರ್ ಫಿಲ್ಮ್' ಈ ನಾಲ್ಕು ವಿಭಾಗಗಳಲ್ಲಿಯೂ 'ಹೊಂಬಣ್ಣ' ಸಿನಿಮಾ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಅಲ್ಲದೇ ಈ ಚಿತ್ರ ಈ ತಿಂಗಳು ನಡೆಯಲಿರುವ 'ಮಿಯಾಮಿ ಇಂಡಿಪೆಂಡೆಂಟ್' ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆ ಆಗಿದೆ. ಈ ಬಗ್ಗೆ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಸ್ವತಃ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಈ ಯಶಸ್ಸಿಗೆ ರಕ್ಷಿತ್ ನಿರ್ಮಾಪಕರು ಮತ್ತು ಚಿತ್ರದಲ್ಲಿ ದುಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
'ಹೊಂಬಣ್ಣ' ಚಿತ್ರ ಮಲೆನಾಡು ದಟ್ಟ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಿರುವ ಕಾಡನ್ನು ಉಳಿಸುವ ಕಥೆಯಾಧಾರಿತ ಸಿನಿಮಾ. ಈ ಚಿತ್ರದಲ್ಲಿ ಹಿರಿಯ ನಟರಾದ ಸುಚೇಂದ್ರ ಪ್ರಸಾದ್, ದತ್ತಣ್ಣ ಮತ್ತು ನೀನಾಸಂ ಅಶ್ವಥ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದಾರೆ. ಸಂಚಲನ ಮೂವೀಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಇದೇ ಜುಲೈ 7 ಕ್ಕೆ ತೆರೆಕಾಣುತ್ತಿದೆ.


Click it and Unblock the Notifications











